ಅಭಿವೃದ್ಧಿ ಹರಿಕಾರ ಕೃಷ್ಣರಾಜ ಒಡೆಯರ್
Team Udayavani, Jun 19, 2020, 4:49 AM IST
ಕೆ.ಆರ್.ನಗರ: ಭತ್ತದ ಕಣಜವೆಂದೇ ಪ್ರಸಿದ್ಧವಾದ ಪಟ್ಟಣದ ಗರುಡಗಂಬಕ್ಕೆ ಮೈಸೂರು ಅರಸರ ಕಾಲದ ಇತಿಹಾಸವಿದೆ ಎಂದು ಸ್ವರಾಜ್ ಇಂಡಿಯಾ ಪಕ್ಷದ ತಾಲೂಕು ಅಧ್ಯಕ್ಷ ಗರುಡಗಂಬದ ಸ್ವಾಮಿ ಹೇಳಿದರು. ಪಟ್ಟಣದಲ್ಲಿ ನಡೆದ ಗರುಡಗಂಬದ 86ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಮೈಸೂರು ಸಂಸ್ಥಾನದ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ರಾಜ್ಯದಲ್ಲಿಯೇ ಅತ್ಯಂತ ವ್ಯವಸ್ಥಿತ ಮತ್ತು ಯೋಜಿತ ನಗರಗಳನ್ನು ನಿರ್ಮಿಸಿದ್ದರು. ನಾಡಿನಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದ ಅಭಿವೃದ್ಧಿಯ ಹರಿಕಾರರು ಎಂದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ನಿರ್ಮಾಣವಾದ ಪಟ್ಟಣಕ್ಕೆ ಅಂದು ಕೃಷ್ಣರಾಜನಗರ ಎಂದೇ ನಾಮಕರಣ ಮಾಡಲಾಯಿತು.
ಕೃಷ್ಣರಾಜನಗರ ಅಭಿವೃದ್ಧಿ ಹೊಂದಿದಂತೆ ಜನರ ಆಡು ಭಾಷೆಯಲ್ಲಿ ಕೆ.ಆರ್.ನಗರವಾಗಿದೆ. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಸಂಪೂರ್ಣ ಜವಾಬ್ದಾರಿ ನಗರ ನಾಗರೀಕರ ಮೇಲಿದೆ. ಇತ್ತೀಚೆಗೆ ವೃತ್ತದ ಸಮೀಪದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆ ಅನಾವರಣ ಮಾಡಲಾಗಿದೆ ಎಂದು ಹೇಳಿದರು.
ಪುರಸಭಾ ಸದಸ್ಯ ಪ್ರಭುಶಂಕರ್, ಮುಖ್ಯಾಧಿಕಾರಿ ಕೆ.ಶಿವಣ್ಣ, ಹಿರಿಯ ಸಾಹಿತಿ ಪ್ರಭಾಕರ್ ಹೆಗ್ಗಂದೂರು, ತಾಲೂಕು ಕುಂಬಾರ ಸಂಘದ ಅಧ್ಯಕ್ಷ ತಿಮ್ಮಶೆಟ್ಟಿ, ರೈತ ಮುಖಂಡ ಸಂಪತ್ಕುಮಾರ್, ವಿಧ್ಯಾರ್ಥಿ ರೈತ ಮುಖಂಡ ರಾಮಪ್ರಸಾದ್, ತಾಲೂಕು ಜೆಡಿಎಸ್ ಯುವ ಗಟಕದ ಅಧ್ಯಕ್ಷ ಮಧುಚಂದ್ರ, ಬೋರಪ್ಪಶೆಟ್ಟಿ, ಕಾಂತರಾಜು, ಪುರಸಭಾ ಆರೋಗ್ಯ ನಿರೀಕ್ಷಕ ಲೋಕೇಶ್, ಯೋಗೇಶ್ ಕುಮಾರ್, ರಾಮಶೆಟ್ಟಿ, ದೊರೆ, ಅರವಿಂದ ಇತರರಿದ್ದರು.