ಭೂ ಸುಧಾರಣೆ ಕಾಯ್ದೆಗೆ ರೈತರ ವಿರೋಧ
Team Udayavani, Jun 14, 2020, 5:08 AM IST
ಮೈಸೂರು: ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ಸರ್ಕಾರದ ನಿರ್ಧಾರ ಖಂಡಿಸಿ ರಾಜ್ಯ ರೈತ ಸಂಘ, ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಪ್ರತಿ ಭಟನೆ ನಡೆಸಿದರು. ನಗರದ ಗಾಂಧಿ ಪ್ರತಿಮೆ ಬಳಿ ಸಮಾವೇಶಗೊಂಡ ರೈತರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರಸ್ತಾ ವನೆ ಪ್ರತಿಯನ್ನು ಸುಟ್ಟು ಕಾಯ್ದೆಗೆ ವಿರೋಧ ವ್ಯಕ್ತ ಪಡಿಸಿದರು.
ಈ ವೇಳೆ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಸರ್ಕಾರ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದೆ. ಆ ರೀತಿ ತಿದ್ದುಪಡಿ ತಂದರೆ ರೈತರ ಕುಲವೇ ನಾಶವಾಗತ್ತೆ. ನಮ್ಮಲ್ಲಿನ ರೈತರೆಲ್ಲಾ ಭೂಮಿ ಕಳೆದುಕೊಂಡು ಬೀದಿಗೆ ಬೀಳುತ್ತಾರೆ. ಕೃಷಿ ಸಂಸ್ಕೃತಿ ಸಂಪೂರ್ಣ ನಾಶವಾಗುತ್ತದೆ. ಆಹಾರ ಸಂಸ್ಕೃತಿ ನಶಿಸುತ್ತದೆ. ಆಹಾರ ಪದ್ಧತಿ ಬೇರೆ ರೂಪಕ್ಕೆ ಬಂದು ಪರಿಸರಕ್ಕೆ ಧಕ್ಕೆಯಾಗುತ್ತದೆ.
ಭೂ ಸುಧಾರಣೆಗೆಕಾಯ್ದೆಗೆ ತಿದ್ದುಪಡಿ ತಂದರೆ ಕೃಷಿ ಕ್ಷೇತ್ರವೇ ನಾಶವಾಗುತ್ತದೆ ಎಂದು ಕಿಡಿ ಕಾರಿದರು. ಸಣ್ಣ ಹಿಡುವಳಿದಾರರೇ ವೈವಿಧ್ಯಮಯ ಬೆಳೆಗಳನ್ನು ಬೆಳೆದು ದವಸ ಧಾನ್ಯ, ಹಣ್ಣು, ತರಕಾರಿ ಬೆಳೆದು ಸಮಾ ಜಕ್ಕೆ ಕೊಡುತ್ತಾರೆ. ಆ ತುಂಡುಭೂಮಿಯನ್ನು ನಾಶ ಮಾಡಿ ಸಾವಿರಾರು ಎಕರೆ, ಲಕ್ಷಾಂತರ ಎಕರೆಯಲ್ಲಿ ಕಂಪನಿ, ಕಾರ್ಖಾನೆಗಳನ್ನು ನಿರ್ಮಿಸಿದರೆ ಅದರಿಂದ ಮೊದಲು ಹೊಡೆತ ಬೀಳುವುದು ನಮ್ಮ ಆಹಾರ ಸಂಸ್ಕೃತಿಗೆ.
ಬಳಿಕ ಕುಲಾಂತರಿ ಬೀಜಗಳನ್ನು ಪ್ರಯೋಗ ಮಾಡಿ ಬೆಳೆ ಬೆಳೆಯುತ್ತಾರೆ. ಇದರಿಂದ ಕೃಷಿ ಭೂಮಿ ಹಾಳಾಗುವುದಲ್ಲದೆ, ನಮ್ಮ ಆಹಾರ ಸಂಸ್ಕೃತಿ ನಾಶವಾಗುತ್ತದೆ ಎಂದು ಆರೋಪಿಸಿದರು. ಭೂಮಿ ಕಳೆದುಕೊಂಡವರಿಗೆ ಉದ್ಯೋಗವಿಲ್ಲದೇ ವಲಸೆ ಹೋಗುತ್ತಾರೆ. ಸರ್ಕಾರ ಬಂಡವಾಳಶಾಹಿಗಳ ಪರವಾಗಿ ನಿಲ್ಲದೆ ರೈತರ ಹಿತ ಕಾಯಬೇಕು. ಯಾವುದೇ ಕಾರಣಕ್ಕೂ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಬಾರದು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರು ಭಾಗವಹಿಸಿದ್ದರು.