ಶ್ರೀಕಂಠೇಶ್ವರನ ಗಿರಿಜಾ ಕಲ್ಯಾಣೋತ್ಸವ
Team Udayavani, Jun 28, 2020, 5:29 AM IST
ನಂಜನಗೂಡು: ಇಲ್ಲಿನ ಶ್ರೀಕಂಠೇಶ್ವರ ದೇಗುಲದಲ್ಲಿ ವೈದಿಕ ವಿಧಿ ವಿಧಾನದಂತೆ ಶ್ರೀಕಂಠೇಶ್ವರನಿಗೆ ಗಿರಿಜೆಯನ್ನು ಧಾರೆ ಎರೆದು ಗಿರಿಜಾ ಕಲ್ಯಾಣ ಮಹೋತ್ಸವ ನೆರವೇರಿಸಲಾಯಿತು.
ಕೋವಿಡ್ 19 ನಿಯಂತ್ರಣದ ಹಿನ್ನೆಲೆಯಲ್ಲಿ ಗಿರಿಜಾ ಕಲ್ಯಾಣೋತ್ಸವಕ್ಕೆ ಭಕ್ತರಿಗೆ ದೇಗುಲ ಪ್ರವೇಶ ನಿಷೇಧಿಸಿದ್ದರಿಂದ ದೇವಾಲಯದ ಆಗಮಿಕ ನಾಗಚಂದ್ರ ದೀಕ್ಷಿತರು, ಸ್ಥಳ ಪುರೋಹಿತ ಸಪ್ತರ್ಷಿ ಜೋಯ್ಸ, ಅರ್ಚಕರಾದ ನೀಲಕಂಠ ದೀಕ್ಷಿತರು, ವಿಶ್ವನಾಥ ದೀಕ್ಷಿತರು, ಕೃಪಾಶಂಕರ್, ಸತ್ಯನಾರಾಯಣ ದೀಕ್ಷಿತರು ಮುಂತಾದವರು ನಡೆಸಿಕೊಟ್ಟರು.
ಶ್ರೀಕಂಠೇಶ್ವರನ ಗಿರಿಜಾ ಕಲ್ಯಾಣ ಮಹೋತ್ಸವಕ್ಕೆ ಭಕ್ತರ ಅನುಮತಿ ರದ್ದು ಪಡಿಸಿದ್ದರೂ ಸಾಕಷ್ಟು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದುದು ಕಂಡು ಬಂದಿತು. ಇಲ್ಲಿನ ಕಾವಲುಗಾರರು, ಅರ್ಚಕರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ತ್ರಿಪುರ ಸುಂದರಮ್ಮ ದೇಗುಲ ಪ್ರವೇಶ ನಿಷೇಧ
ಮೈಸೂರು: ಕೋವಿಡ್-19 ನಿಯಂತ್ರಣಕ್ಕಾಗಿ ತಿ.ನರಸೀಪುರ ತಾಲೂಕಿನ ಮೂಗೂರು ತ್ರಿಪುರ ಸುಂದರಮ್ಮ ದೇಗುಲ ಸೇರಿದಂತೆ ತಾಲೂಕಿನಲ್ಲಿ ಪ್ರಮುಖ ದೇವಾಲಯಗಳಲ್ಲಿ ಆಷಾಢ ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಹೆಚ್ಚು ಭಕ್ತರು ಸೇರುವುದರಿಂದ ಕೋವಿಡ್ 19 ನಿಯಮ ಪಾಲನೆಗೆ ಸಮಸ್ಯೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ದೇವಾಲಯದ ಪ್ರವೇಶವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆದೇಶಿಸಿದ್ದಾರೆ.