ಕೋವಿಡ್ ನಿಯಂತ್ರಣದಲ್ಲಿ ಸರ್ಕಾರ ವಿಫಲ
Team Udayavani, Jun 6, 2020, 5:06 AM IST
ಮೈಸೂರು: ಕೋವಿಡ್ 19 ಬಂದ ಮೇಲೆ ರಾಜ್ಯ ಸರ್ಕಾರ ಗಳಿಗೆ ಕೇಂದ್ರ ಒಂದೇ ಒಂದು ರೂಪಾಯಿ ನೀಡಿಲ್ಲ. ದೊಡ್ಡ ರಾಜ್ಯಗಳಿಗೆ ಕನಿಷ್ಠ 1 ಲಕ್ಷ ಕೋಟಿ ಕೊಡಬೇಕಿತ್ತು.ಸಣ್ಣ ರಾಜ್ಯಗಳಿಗೆ 50 ಸಾವಿರ ಕೋಟಿ ಕೊಡಬೇಕಿತ್ತು. ಕೇಂದ್ರ ಘೋಷಿಸಿರುವ 20 ಲಕ್ಷ ಕೋಟಿ ಬೋಗಸ್ ಪ್ಯಾಕೇಜ್ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಪಾದಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ಯಾಕೇಜ್ ನಿಂದ ಯಾವ ಪ್ರಯೋಜನವೂ ಆಗಲ್ಲ. ಕೇಂದ್ರ ಸರ್ಕಾರದ ಜಿಡಿಪಿಯಲ್ಲಿ ಶೇ.1ರಷ್ಟನ್ನು ಕೋವಿಡ್ಗೆ ನೀಡಿಲ್ಲ. ಬಜೆಟ್ನಲ್ಲಿ 30,42,230 ಕೋಟಿ ಖರ್ಚು ತೋರಿಸಿದೆ. ಈಗ 20 ಲಕ್ಷ ಕೋಟಿ ಸೇರಿಸಿದರೆ 50,42,230 ಕೋಟಿ ಆಗಬೇಕು. ಆದ್ದರಿಂದ ಇದೊಂದು ಸುಳ್ಳು ಪ್ಯಾಕೇಜ್, ಇನ್ನು ಕರ್ನಾಟಕದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ 1,610 ಕೋಟಿ ಘೋಷಿಸಿದರು. ಈವರೆಗೂ ಒಂದು ರೂಪಾಯಿ ಜನರಿಗೆ ತಲುಪಿಲ್ಲ. ಕೋವಿಡ್ ನಿಯಂತ್ರಿಸು ವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಯಿತು ಎಂದು ಆಪಾದಿಸಿದರು.
ಹಸಿವಿನಿಂದಿದ್ದರೂ ಸುಮ್ಮನಿರಬೇಕಾ: ಕೋವಿಡ್ ವಿಷಯದಲ್ಲಿ ಪ್ರತಿಪಕ್ಷ ರಾಜಕೀಯ ಮಾಡುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಜನ ಹಸಿವಿನಿಂದ ಸಾಯುತ್ತಿ ದ್ದರೂ ಬಾಯಿ ಮುಚ್ಚಿಕೊಂಡು ಇರಬೇಕಾ? ಜನರ ಕಷ್ಟ ಹೇಳುವುದು ರಾಜಕೀಯವೇ? ಪೂರ್ವ ಸಿದತೆ ಮಾಡಿ ಕೊಳ್ಳದೆ ಲಾಕ್ಡೌನ್ ಮಾಡಲಾಯಿತು. ವಿದೇಶದಿಂದ ಬಂದವರಿಂದ ರೋಗ ಹಂಚಿದ್ದಾಗಿ ದೂರಿದರು.ಈಗ ತಬ್ಲೀ ಗಳ ಮೇಲೆ ಗೂಬೆ ಕೂರಿಸಲಾಗುತ್ತಿದೆ.
ತಬ್ಲೀಘೀ ಸಮಾವೇಶಕ್ಕೆ ಅನುಮತಿ ನೀಡಿದ್ದು ಕೇಂದ್ರ ಸರ್ಕಾರವಲ್ಲವೆ? ದೆಹಲಿ ಪೊಲೀಸರು ಕೇಂದ್ರದ ನಿಯಂ ತ್ರಣದಲ್ಲಿ ಇಲ್ಲವೆ? ಎಂದು ಪ್ರಶ್ನಿಸಿದರು. ವಿದ್ಯುತ್ ಮಸೂದೆಗೆ ತಿದ್ದುಪಡಿ ಮಾಡಿ ಸ್ವಾಯತತ್ತೆ ಕಸಿಯಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 14 ರಿಂದ 15 ಸಾವಿರ ಕೋಟಿ ಸಬ್ಸಿಡಿ ಕೊಡುತ್ತಿದ್ದೇವೆ. ಅದೂ ಕೂಡ ಕಷ್ಟ ಎನ್ನಲಾಗುತ್ತಿದೆ. ಈ ನಡುವೆ ಮೊದಲು ಬಿಲ್ ಪಾವತಿಸಿ, ನಂತರ ಸಬ್ಸಿಡಿ ಕೊಡುವುದಾಗಿ ಕೇಂದ್ರ ಹೇಳು ತ್ತಿದೆ. ಇದು ರೈತರಿಂದ ಸಾಧ್ಯವೇ ಎಂದು ಪ್ರಶ್ನಿಸಿದರು.