ಹುಣಸೂರು: ದರ ನೀಡಿದರೆ ಹರಾಜು; ಇಲ್ಲವೇ ಮಾರುಕಟ್ಟೆ ಬಂದ್
Team Udayavani, Oct 22, 2022, 10:36 AM IST
ಹುಣಸೂರು: ಕಳೆದ ಮೂರು ದಿನಗಳ ಹಿಂದೆ ದರ ಕುಸಿತದಿಂದ ಆಕ್ರೋಶಿತರಾಗಿದ್ದ ರೈತರು ಪ್ರತಿಭಟನೆಗಿಳಿದಿದ್ದರಿಂದ ತಂಬಾಕು ಹರಾಜು ಪ್ರಕ್ರಿಯೆ ಸ್ಥಗಿತಗೊಂಡಿತ್ತು.
ಹುಣಸೂರು ಶಾಸಕ ಮಂಜುನಾಥ್ ಮಾರುಕಟ್ಟೆಗೆ ಭೇಟಿ ನೀಡಿ ಅಧಿಕಾರಿಗಳು ಹಾಗೂ ರೈತ ಮುಖಂಡರಿಂದ ಮಾಹಿತಿ ಪಡೆದು ಆಂದ್ರಪ್ರದೇಶದ ಗುಂಟೂರು ತಂಬಾಕು ಮಂಡಳಿಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಖರೀದಿ ಕಂಪನಿ ಹಾಗೂ ರೈತ ಮುಖಂಡರ ಸಭೆ ನಡೆಸಿ ಸಮಸ್ಯೆ ಬಗೆಹರಿಸಬೇಕು ಮತ್ತು ನಿರೀಕ್ಷೆಯಂತೆ ದರ ಕೊಡಿಸಲು ಕ್ರಮವಾಗಬೇಕೆಂದು ಸೂಚಿಸಿದ್ದರ ಹಿನ್ನೆಲೆಯಲ್ಲಿ ಮಂಡಳಿ ಕಾರ್ಯದರ್ಶಿ ವೇಣುಗೋಪಾಲ್ ಆಗಮಿಸಿ ಮೈಸೂರು ಆರ್.ಎಂ.ಓ. ಕಚೇರಿಯಲ್ಲಿ ರೈತ ಮುಖಂಡರು ಹಾಗೂ ತಂಬಾಕು ಖರೀದಿ ಕಂಪನಿಗಳೊಂದಿಗೆ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಕ್ರಾಪ್ ಕಮಿಟಿ ಅದ್ಯಕ್ಷ, ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ದಿಡೀರ್ ದರ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಕರ್ನಾಟಕಕ್ಕೆ ನೂರು ಮಿಲಿಯನ್ ಕೆ.ಜಿ. ತಂಬಾಕು ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದರೂ ಈ ಬಾರಿ ಅತಿಯಾದ ಮಳೆಯಿಂದ ಕೇವಲ 40-50 ಮಿಲಿಯನ್ ತಂಬಾಕು ಬೆಳೆಯಲಾಗಿದೆ. ಆರಂಭದಲ್ಲಿ ಅ.10 ರಂದು ಕೆ.ಜಿ. ಗೆ202 ರೂ. ನಂತರ ಮಾರುಕಟ್ಟೆ ಏರಿಕೆಯಿಂದ 262 ರೂ. ಗೆ ಮಾರಾಟವಾಗಿದೆ. ಆದರೆ ಗುರುವಾರ ಇದ್ದಕ್ಕಿದ್ದಂತೆ 40 ರೂ. ದರ ಕುಸಿತವಾಗಿದ್ದು, ರೈತರು ಆತಂಕಕ್ಕೊಳಗಾಗಿ ಪ್ರತಿಭಟಿಸಿದ್ದಾರೆ.
ಇಷ್ಟು ವರ್ಷ 8-10 ಕಂಪನಿಗಳು ಮಾತ್ರ ಹರಾಜಿನಲ್ಲಿ ಭಾಗವಹಿಸುತ್ತಿದ್ದವು. ಆದರೆ ಈ ಬಾರಿ ಆಂದ್ರದಲ್ಲೂ ಹೊಗೆ ಸೊಪ್ಪು ನಿರೀಕ್ಷೆಯಂತೆ ಬೆಳೆದಿಲ್ಲ. ಹೀಗಾಗಿ ಬೇಡಿಕೆ ಹೆಚ್ಚಿದ್ದರಿಂದ 28 ಕಂಪನಿಗಳು ಹರಾಜಿನಲ್ಲಿ ಭಾಗವಹಿಸಿದ್ದರೂ ಸಹ ನಿರೀಕ್ಷೆಯಂತೆ ದರ ಸಿಗುತ್ತಿಲ್ಲ. ಕಂಪನಿಗಳು ಒಳ ಒಪ್ಪಂದ ಮಾಡಿಕೊಂಡಿರುವುದು ಕಾಣುತ್ತಿದೆ. ಹೀಗಾಗಿ ಕಂಪನಿಯವರೊಂದಿಗೆ ಮಾತನಾಡಿ ದರ ಕೊಡಿಸುವಂತೆ ಮನವಿ ಮಾಡಿ, ಬುಧವಾರ ಹರಾಜಾಗದೆ ಬಾಕಿ ಉಳಿದ ತಂಬಾಕನ್ನು ಮಾರಾಟ ಮಾಡಿಸಬೇಕೆಂದು ಮನವಿ ಮಾಡಿದರು.
ಮಂಡಳಿ ಕಾರ್ಯದರ್ಶಿ ವೇಣೊಗೋಪಾಲ್ ಮಾತನಾಡಿ, ಈಗಾಗಲೇ ಕಂಪನಿಯ ಮುಖ್ಯಸ್ಥರೊಂದಿಗೆ ಚರ್ಚಿಸಿದ್ದು, ಆತಂಕ ಪಡುವ ಅಗತ್ಯವಿಲ್ಲ. ಮಂಡಳಿಯು ರೈತರ ಪರವಾಗಿದ್ದು, ಹೆಚ್ಚಿನ ದರ ಕೊಡಿಸಲು ಬದ್ದವಾಗಿದೆ. ಮಾರಾಟವಾದೆ ಬಾಕಿ ಉಳಿದಿರುವ 5 ಸಾವಿರ ಬೇಟ್ ಶನಿವಾರ ಮಾರಾಟಕ್ಕೆ ಅವಕಾಶ ಮಾಡಿಕೊಡಿ. ದರ ಹೆಚ್ಚದಿದ್ದಲ್ಲಿ ಮಂಡಳಿಯೇ ಹರಾಜು ನಿಲ್ಲಿಸಲು ಮುಂದಾಗಲಿದೆ ಎಂಬ ಭರವಸೆ ಮೇರೆಗೆ ರೈತ ಮುಖಂಡರು ಒಪ್ಪಿಗೆ ಸೂಚಿಸಿದರು.
ಕ್ರಾಫ್ ಕಮಿಟಿ ಮಾಜಿ ಅಧ್ಯಕ್ಷ ಹುಂಡವಾಡಿ ಚಂದ್ರೇಗೌಡ ಮಾತನಾಡಿ, ಮಳೆಯಿಂದಾಗಿ 5 ಸಾವಿರ ಕೆ.ಜಿ. ತಂಬಾಕು ಬೆಳೆಯುತ್ತಿದ್ದ ರೈತರು ಈ ಬಾರಿ ಸಾವಿರದಿಂದ ಒಂದೂವರೆ ಸಾವಿರ ಕೆಜಿಯಷ್ಟು ಮಾತ್ರ ಬೆಳೆದಿದ್ದಾರೆ. ರಸಗೊಬ್ಬರದ ಬೆಲೆ ದುಪ್ಪಟಾಗಿದೆ. ಸುಮಾರು 40 ಸಾವಿರ ರೂ. ನಷ್ಟು ಗೊಬ್ಬರ ಹಾಕಿದ್ದಾರೆ. ಮಂಡಳಿ ವತಿಯಿಂದ ಗೊಬ್ಬರದ ಸಾಲ ಮತ್ತು ಕ್ರಾಪ್ ಲೋನ್ ಮನ್ನಾ ಮಾಡಲು ಕ್ರಮವಾಗಬೇಕೆಂದು ಮನವಿ ಮಾಡಿದರು.
ಈ ವೇಳೆ ತಂಬಾಕು ಮಂಡಳಿ ಉಪಾಧ್ಯಕ್ಷ ಬಸವರಾಜು, ಸದಸ್ಯ ದಿನೇಶ್ ಹಬ್ಬನಕುಪ್ಪೆ, ಆರ್.ಎಂ.ಓ. ಲಕ್ಷ್ಮಣ್ ರಾವ್, ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಶಿವಣ್ಣ, ಪ್ರಭಾಕರ್, ಕೋಟೆ ಬಸವರಾಜು, ಕೃಷ್ಣಮೂರ್ತಿ, ಕಾಳೇಗೌಡ, ವಿಕ್ರಂರಾಜೇ ಅರಸ್ ಸೇರಿದಂತೆ ಅನೇಕ ರೈತ ಮುಖಂಡರು ಹಾಜರಿದ್ದರು.