ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಿ
Team Udayavani, Jun 27, 2020, 4:46 AM IST
ಹುಣಸೂರು: ನಗರದ ಜಾಗೃತಿ ಕ್ಲಬ್ನ ಸಾವಿರ ಸಸಿ ನೆಡುವ ಪರಿಸರಯುಕ್ತ ಕಾರ್ಯಕ್ರಮಕ್ಕೆ ಹೊಸ ಬಸ್ ನಿಲ್ದಾಣದ ಆವರಣದಲ್ಲಿ ಶಾಸಕ ಎಚ್.ಪಿ.ಮಂಜುನಾಥ್ ಸಸಿನೆಟ್ಟು ನೀರೆರೆದು ಚಾಲನೆ ನೀಡಿದರು. ಬಳಿಕ ಮಾತನಾಡಿದ ಶಾಸಕರು, ಸಂಘ-ಸಂಸ್ಥೆಗಳು ಸಸಿ ನೆಟ್ಟರೆ ಸಾಲದು, ಅವುಗಳನ್ನು ದತ್ತು ಪಡೆದು ಸಂರಕ್ಷಿಸಬೇಕು, ಪರಿಸರಕ್ಕೆ ಪೂರಕವಾದ ಬೇವು, ಹೊಂಗೆ ಮತ್ತಿತರ ಸಸಿಗಳನ್ನು ನೆಡಬೇಕು.
ಶಾಲಾ ಆವರಣದಲ್ಲಿ ಗಿಡ ನೆಟ್ಟು ಬೆಳೆಸುವುದರಿಂದ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಲಿದೆ. ಬಸ್ ನಿಲ್ದಾಣದ ಆವರಣದಲ್ಲಿ ಮತ್ತೂಂದು ಶೌಚಾಲಯ ನಿರ್ಮಿಸಬೇಕು. ನಿಲ್ದಾಣದ ಮತ್ತೂಂದು ಬದಿಯಲ್ಲಿ ದೊಡ್ಡ ಹೊಂಡಕ್ಕೆ ನಗರದಲ್ಲಿ ಕಟ್ಟಡ ಕೆಡವುವ ಮಣ್ಣನ್ನು ತುಂಬಲು ಕ್ರಮ ವಹಿಸಬೇಕು. ಭರ್ತಿ ಬಳಿಕ ಇಲ್ಲಿ ವಿಶಾಲವಾದ ದ್ವಿಚಕ್ರ ಹಾಗೂ ಕಾರ್ ಪಾರ್ಕಿಂಗ್ ವ್ಯವಸ್ಥೆ ಮಾಡುವಂತೆ ಸಲಹೆ ನೀಡಿದರು.
ಕ್ಲಬ್ ಅಧ್ಯಕ್ಷ ಕೃಷ್ಣ ಮಾತನಾಡಿ, ಹುಣಸೂರು ನಗರದ ಬಸ್ ನಿಲ್ದಾಣ, ಅರಸು ಪದವಿ ಕಾಲೇಜು, ಸ್ಮಶಾನ, ಹೌಸಿಂಗ್ ಬೋರ್ಡ್ ಕಾಲೋನಿ ಹಾಗೂ ಗ್ರಾಮಾಂತರ ಪ್ರದೇಶದ ಶಾಲೆಗಳಲ್ಲಿ ಸಾವಿರ ಸಸಿ ನೆಡುವ ಯೋಜನೆ ರೂಪಿಸಲಾಗಿದೆ. ಸಸಿಗಳನ್ನು ದತ್ತು ತೆಗೆದುಕೊಂಡು ಬೆಳೆಸುವುದು, ಸಸಿಗಳಿಗೆ ಟ್ರೀ ಗಾರ್ಡ್ ಅಳವಡಿಸುವುದು, ದತ್ತು ಪಡೆದು ಉತ್ತಮ ನಿರ್ವಹಣೆ ಮಾಡುವ ಸದಸ್ಯರನ್ನು ಗೌರವಿಸಲಾಗುವುದೆಂದರು.
ಈ ವೇಳೆ ಸಂಚಾರ ನಿಯಂತ್ರಕರಾದ ಗಂಗಣ್ಣ, ರಾಜಶೆಟ್ಟಿ, ಚಂದ್ರಶೇಖರ್, ಡಿಪೋ ಮ್ಯಾನೇಜರ್ ವಿಪಿನ್ ಕೃಷ್ಣ, ನಗರಸಭೆ ಪರಿಸರ ಎಂಜಿನಿಯರ್ ರೂಪಾ, ಆರೋಗ್ಯಾಧಿಕಾರಿ ಸತೀಶ್, ಅಮ್ಮನ ಕೈರುಚಿ ಹೋಟೆಲ್ ಮಾಲಿಕ ಸಮರ್ಥ್, ಕ್ಲಬ್ ಗೌರವಾಧ್ಯಕ್ಷ ಚಿನ್ನವೀರಯ್ಯ, ಪದಾಧಿಕಾರಿಗಳಾದ ಜೇಕಬ್, ಮಂಜು, ಗಜೇಂದ್ರ, ಪಾಂಡು, ಗಿರೀಶ್, ಅಪ್ಪಿ ನಾಗರಾಜ್, ಶ್ಯಾಮ್, ಮಲ್ಲಿಕಾರ್ಜುನ, ಕೇಶವ್, ಪುಟ್ಟರಾಜು ಇತರರಿದ್ದರು.