ಕಾಂಗ್ರೆಸ್ ವಶಕ್ಕೆ ನಂಜನಗೂಡು ಎಪಿಎಂಸಿ
Team Udayavani, Jun 19, 2020, 4:54 AM IST
ನಂಜನಗೂಡು: ಬಿಜೆಪಿ ಹಾಗೂ ಕಾಂಗ್ರೆಸ್ ಸಮಬಲ ಸಾಧಿಸಿದ್ದ ನಂಜನಗೂಡು ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳೆರಡಲ್ಲೂ ಗೆಲುವು ಸಾಧಿಸುವುದರೊಂದಿಗೆ ಕಾಂಗ್ರೆಸ್ ಪಕ್ಷ ಎಪಿಎಂಸಿ ಅಧಿಕಾರ ತನ್ನ ಕೈವಶ ಮಾಡಿಕೊಂಡಿದೆ. ಚುನಾವಣೆಯಲ್ಲಿ ಸಮಬಲ ಹೊಂದಿದ್ದ ಎರಡೂ ಪಕ್ಷಗಳು ತಮ್ಮ ಮತದಾರರನ್ನು ಹಿಡಿದಿಟ್ಟುಕೊಳ್ಳಲು ಹರಸಾಹಸ ನಡೆಸಿದ್ದರು.
ಕಾಂಗ್ರೆಸ್ನ ಮಾಜಿ ಸಂಸದ ಆರ್.ಧ್ರುವನಾರಾಯಣ, ಶಾಸಕ ಯತೀಂದ್ರ ಹಾಗೂ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಪಕ್ಷದ ಎಲ್ಲ ಎಂಟೂ ಸದಸ್ಯರನ್ನೂ ಒಗ್ಗೂಡಿಸಿಕೊಂಡು ಕಣಕ್ಕಿಳಿದಿದ್ದರು. ಶಾಸಕ ಹರ್ಷವರ್ಧನ ನೇತೃತ್ವದ ಬಿಜೆಪಿಗೆ 7 ಜನರನ್ನು ಮಾತ್ರ ಹಿಡಿದಿಟ್ಟುಕೊಳ್ಳಲು ಸಾಧ್ಯವಾದ ಪರಿಣಾಮ ಚುನಾವಣೆಯಲ್ಲಿ ಸಮಬಲ ತೋರಬೇಕಿದ್ದ ಬಿಜೆಪಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳೆರಡರಲ್ಲೂ 7 ಮತ ಪಡೆದು ಕಾಂಗ್ರೆಸ್ ವಿಜಯಕ್ಕೆ ಸುಗಮ ಹಾದಿ ಬಿಟ್ಟುಕೊಟ್ಟಿತು.
ಚುನಾವಣೆಯಲ್ಲಿ ಬಿಜೆಪಿಯ ಕಾರಾಪುರದ ಲಿಂಗಣ್ಣ ಚುನಾವಣಾ ಪ್ರಕ್ರಿಯೆಯಿಂದ ಹೊರಗುಳಿದ ಪರಿಣಾಮ, ಕಾಂಗ್ರೆಸ್ ಪಕ್ಷದ ಮುದ್ದು ಮಾದಶೆಟ್ಟಿ ಹಾಗೂ ಮಹದೇವು ತಲಾ 8 ಮತ ಗಳಿಸಿ ವಿಜಯಿಗಳಾದರೆ, ಬಿಜೆಪಿಯ ಅಧ್ಯಕ್ಷ-ಉಪಾಧ್ಯಕ್ಷ ಅಭ್ಯರ್ಥಿಗಳಾದ ಮಲ್ಕುಂಡಿ ಮಹೇಶ ಹಾಗೂ ಗುರುಸ್ವಾಮಿ ತಲಾ 7 ಮತ ಪಡೆದು ಸೋಲೊಪ್ಪಿಕೊಂಡರು.
ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ ತಾಲೂಕು ದಂಡಾಧಿಕಾರಿ ಮಹೇಶ್ಕುಮಾರ್ ಮುದ್ದು ಮಾದಶೆಟ್ಟಿ ಹಾಗೂ ಮಹದೇವು ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ 1 ಮತಗಳ ಅಂತರದಿಂದ ಆಯ್ಕೆಯಾಗಿರುವುದನ್ನು ಘೋಷಿಸಿದರು. ಬಳಿಕ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಎಪಿಎಂಸಿ ನಿದೇರ್ಶಕರು, ಚುನಾವಣಾಧಿಕಾರಿಗಳು ಅಭಿನಂದಿಸಿದರು.