18 ದಿನ ಕಂಗೊಳಿಸಿದ ದಸರಾ ದೀಪಾಲಂಕಾರ ಅಂತ್ಯ
ಪ್ರವಾಸಿಗರು, ಮೈಸೂರಿಗರನ್ನು ಆಕರ್ಷಿಸಿದ 100 ಕಿ.ಮೀ. ವಿದ್ಯುತ್ ಅಲಂಕಾರ
Team Udayavani, Oct 25, 2021, 12:12 PM IST
ಮೈಸೂರು: ದಸರಾ ಜಂಬೂಸವಾರಿ ಬಳಿಕವೂ 9 ದಿನಗಳ ಸಾವಿರಾರು ಮಂದಿಯನ್ನು ಆಕರ್ಷಿಸಿದ ದಸರಾ ದೀಪಾಲಂಕಾರ ಭಾನುವಾರ ಮುಕ್ತಾಯ ಗೊಂಡಿದೆ. ಕೊರೊನಾ ಹಿನ್ನೆಲೆ ಈ ಬಾರಿ ನಡೆದ ಸರಳ ಮತ್ತು ಸಂಪ್ರದಾಯಿಕ ದಸರಾ ಮಹೋತ್ಸವದಲ್ಲಿ ದೀಪಾಲಂಕಾರ ಪ್ರಮುಖ ಆಕರ್ಷಣೆಯಾಗಿತ್ತು. ನಗರದ ವಿವಿಧ ಪ್ರಮುಖ ರಸ್ತೆ ಮತ್ತು ವೃತ್ತಗಳು ಸೇರಿದಂತೆ ಒಟ್ಟು 100 ಕಿಲೋ ಮೀಟರ್ ಪ್ರದೇಶದಲ್ಲಿ ಆಕರ್ಷ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿತ್ತು.
ನಗರದ 89 ವೃತ್ತಗಳಲ್ಲಿ ವಿವಿಧ ಪ್ರತಿಕೃತಿ ಹಾಗೂ ದೀಪಾಲಂಕಾರ ನೋಡಲು ನೆರೆಯ ಜಿಲ್ಲೆಗಳು ಮಾತ್ರವಲ್ಲದೇ ವಿವಿಧ ರಾಜ್ಯಗಳ ಲಕ್ಷಾಂತರ ಮಂದಿ ಪ್ರವಾಸಿಗರು ಮೈಸೂರಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದರು. ಪ್ರತಿದಿನ ವಿವಿಧ ಜಿಲ್ಲೆಗಳಿಂದ 20 ಸಾವಿರ ಮಂದಿ ಆಗಮಿಸಿ ದೀಪಾಲಂಕಾರ ಕಣ್ತುಂಬಿಕೊಳ್ಳುತ್ತಿದ್ದರು. ನಗರದ ಮಹಾರಾಜ ಮೈದಾನದ ಬಳಿ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದ ನೀರಜ್ ಚೋಪ್ರಾ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗಿತ್ತು.
ಇದನ್ನೂ ಓದಿ:- ನೀರು ಕೊಡಿ ಹೋರಾಟಕ್ಕೆ ಬಾಬುಗೌಡ ಬಾದರ್ಲಿ ಧ್ವನಿ
ಜೊತೆಗೆ ದಾರ್ಶನಿಕರು, ಅಧ್ಯಾತ್ಮಕ ಚಿಂತಕರು ಮತ್ತು ಸ್ವಾತಂತ್ರ್ಯ ಹೋರಾಟ ಗಾರರಿಗೂ ದೀಪದ ನಮನ ಸಮರ್ಪಿಸಲಾಗಿತ್ತು. ದಸರಾ ಹಿನ್ನೆಲೆ ಅ.7ರಿಂದ 15ರವರೆಗೆ ದೀಪಾ ಲಂಕಾರ ಮಾಡಲಾಗಿತ್ತು. ಬಳಿಕ ಸಾರ್ವಜನಿಕರು, ಹೋಟೆಲ್ ಉದ್ಯಮಿಗಳ ಒತ್ತಾಯದ ಮೇರೆಗೆ ಅ. 24ರವರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೀಪಾಲಂಕಾರ ವಿಸ್ತರಣೆ ಮಾಡಿದರು. ಇದರಿಂದ ಕೊರೊನಾ ಸಂಕ್ರಾಮಿಕ ರೋಗದಿಂದ ಕಳೆಗುಂದಿದ್ದ ಪ್ರವಾಸೋದ್ಯಮ ಚೇತರಿಕೆ ಪಡೆದುಕೊಂಡಿತು.
ಲಕ್ಷಾಂತರ ಜನರಿಂದ ವೀಕ್ಷಣೆ-
ಈ ಸಾಲಿನ ದಸರಾ ಮಹೋತ್ಸವದ ದೀಪಾಲಂ ಕಾರವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ರಾತ್ರಿಯಾಗುತ್ತಿದ್ದಂತೆಯೇ ನಗರದಲ್ಲಿ ಸಂಚಾರ ದಟ್ಟಣೆ ಅಧಿಕವಾಗುತ್ತಿತ್ತು. ಪೊಲೀಸರು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದರು. ಸತತವಾಗಿ ಮಳೆ ಸುರಿದು ಜನರ ಉತ್ಸಾಹಕ್ಕೆ ತಡೆಯೊಡ್ಡಿತ್ತು. ಬಿಡುವು ನೀಡಿದ ದಿನಗಳಲ್ಲಿ ಜನರು ದೀಪಾಲಂಕಾರ ವೀಕ್ಷಿಸಿ ಖುಷಿಪಟ್ಟರು.