ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಇಳಿಮುಖ
Team Udayavani, Apr 29, 2020, 1:12 PM IST
ಸಾಂದರ್ಭಿಕ ಚಿತ್ರ
ಮೈಸೂರು: ಜಿಲ್ಲೆಯಲ್ಲಿ ಶೇ.3ರಷ್ಟು ಕೋವಿಡ್ ಸೋಂಕಿತರಿದ್ದು, ದಿನದಿಂದ-ದಿನಕ್ಕೆ ಸೋಂಕಿತರ ಸಂಖ್ಯೆ ಇಳಿ ಮುಖವಾಗುತ್ತಿದೆ. ಆದರೆ, ಕೇಂದ್ರದ ಮಾರ್ಗಸೂಚಿಯಂತೆ ಮುಂದಿನ 28 ದಿನಗಳಲ್ಲಿ ಕೋವಿಡ್ ಪಾಸಿಟಿವ್ ಕೇಸ್ ಯಾವುದು ಬಾರದೇ ಇದ್ದರೇ, ಮೈಸೂರನ್ನು ಹಸಿರು ವಲಯ ಎಂದು ಘೋಷಿಸಲಾಗುತ್ತದೆ ಎಂದು ಡೀಸಿ ಅಭಿರಾಂ ಜಿ.ಶಂಕರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಸದ್ಯಕ್ಕೆ ಮೈಸೂರು ಸೇಫ್ ಎಂದು ಹೇಳಲಾಗುವುದಿಲ್ಲ, ಸ್ಥಿರವಾಗಿದೆ ಎನ್ನಬಹುದು. ಮುಂದಿನ 14 ದಿನ ಸೋಂಕಿತರು ಕಾಣಿಸಿಕೊಳ್ಳದಿದ್ದರೆ ಆರೇಂಜ್ ಝೋನ್ಗೆ, ನಂತರದ 14 ದಿನಗಳು ಸೋಂಕಿತರು ಕಾಣಿಸಿಕೊಳ್ಳದಿದ್ದಲ್ಲಿ ಗ್ರೀನ್ ಝೋನ್ಗೆ ಬರುತ್ತೇವೆ ಎಂದರು.
ಜಿಲ್ಲೆಯಲ್ಲಿ 89 ಪಾಸಿಟಿವ್ ಕೇಸ್ ಬಂದಿತ್ತು. ಜ್ಯುಬಿಲಿಯಂಟ್ ಕಾರ್ಖಾನೆಯ 1,700 ಮಂದಿ ನೌಕರರಲ್ಲಿ 73 ಮಂದಿಗೆ ಪಾಸಿಟೀವ್ ಕಾಣಿಸಿಕೊಂಡಿದ್ದರಿಂದ ಸೋಂಕಿತರ ಸಂಖ್ಯೆ ಶೇ.5ರಷ್ಟಾಗಿತ್ತು. ಇನ್ನೂ ಉಸಿರಾಟದ ತೊಂದರೆಯಿದ್ದ 300 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಇದರಲ್ಲಿ 2 ಪಾಸಿಟಿವ್ ಎಂದು ದೃಢವಾಯಿತು. ಆದರೆ, ಐಎಲ್ಐ ನ 60ಕ್ಕೂ ಹೆಚ್ಚು ಮಂದಿ ಹಾಗೂ ಗರ್ಭಿಣಿಯರನ್ನು ಟೆಸ್ಟ್ ಮಾಡಿದಾಗ ಒಂದೂ ಪಾಸಿಟಿವ್ ಬಂದಿಲ್ಲ ಎಂದು ಹೇಳಿದರು.
ಲ್ಯಾಬ್ಗಳು 24 ಗಂಟೆಯೂ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕ್ವಾರೆಂಟೈನ್ನಲ್ಲಿದ್ದ ಸುಮಾರು 800 ಮಂದಿಯನ್ನು ಪರೀಕ್ಷೆ ಮಾಡಲಾಗುತ್ತಿದೆ. ಸೋಮವಾರ
ಮತ್ತು ಮಂಗಳವಾರ ಸುಮಾರು 200 ಮಂದಿಯ ಟೆಸ್ಟ್ ನಡೆದಿದೆ. ಇದರೊಂದಿಗೆ ಮಂಡ್ಯ, ಕೊಡಗು ಜಿಲ್ಲೆ ಗಳಿಂದಲೂ ಸ್ಯಾಂಪಲ್ ಕಳುಹಿಸುತ್ತಿದ್ದಾರೆ. ಲ್ಯಾಬ್ ಸಿಬ್ಬಂದಿ ಶ್ರಮ ವಹಿಸಿ ದಿನಕ್ಕೆ 300ಕ್ಕಿಂತ ಹೆಚ್ಚು ಸ್ಯಾಂಪಲ್ಟೆಸ್ಟ್ ನಡೆಸುತ್ತಿದ್ದಾರೆ. ನಮ್ಮಲ್ಲಿ ವೈದ್ಯರು ವೆಂಟಿಲೇಷನ್ ಬಳಸದೆ ಹೈ ಫ್ಲೋ ಆಕ್ಸಿಜನ್ ಥೆರಪಿ ಮೂಲಕ ಚಿಕಿತ್ಸೆ ನೀಡುತ್ತಿದ್ದಾರೆ. ರೋಗಿಗಳು ಗುಣಮುಖರಾಗುತ್ತಿದ್ದಾರೆ. ಇದಕ್ಕೆ ಕೋವಿಡ್ 19 ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯ ಕೀಯ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಬೇಕು ಎಂದರು.
ಬೆಂಗಳೂರಿನ ವೈದ್ಯರು ನಮ್ಮ ಕೋವಿಡ್-19 ಆಸ್ಪತ್ರೆ ವೈದ್ಯರೊಂದಿಗೆ ಪ್ರತಿ ದಿನ ವಿಡಿಯೊ ಕಾನ್ಫರೆನ್ಸ್ ಮೂಲಕ ಚರ್ಚಿಸಿ ಚಿಕಿತ್ಸೆ ನೀಡುವ ಪದ್ಧತಿಯನ್ನು ಸರ್ಕಾರ ತಂದಿದೆ. ಅದರಂತೆ ಚರ್ಚಿಸಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಕೆಲ ದೇಶಗಳಲ್ಲಿ ರೋಗಿಗಳಿಗೆ ವೆಂಟಿಲೇಷನ್ ಮಾಡಿದಾಗ ಅವರ ಸ್ಥಿತಿ ಇನ್ನೂ ಗಂಭೀರವಾಗಿದ್ದನ್ನು ನೋಡಿದ್ದೇವೆ. ಹೀಗಾಗಿ ಆದಷ್ಟು
ವೆಂಟಿಲೇಷನ್ ಕಡಿಮೆ ಮಾಡಿ “ಹೈ ಫ್ಲೋ ಆಕ್ಸಿಜನ್ ಥೆರಪಿ’ ಅಂತಹ ಮಾಸ್ಕ್ ಮೂಲಕ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. ಆಕ್ಸಿಜನ್ ಅನ್ನು ಹೈ ಫ್ಲೋ ನಲ್ಲಿ ಕೊಡುವ ಮೂಲಕ ಚಿಕಿತ್ಸೆ ನೀಡುವುದಕ್ಕೆ ಟೆಲಿ ಮೆಡಿಸಿನ್ ಕ್ರಿಟಿಕಲ್ ಕೇರ್ ಯೂನಿಟ್ ನವರು ಸೂಚಿಸಿದ್ದಾರೆ ಎಂದರು.