“20 ಲಕ್ಷ ಕೋ.ರೂ.ಪ್ಯಾಕೇಜ್ನಿಂದ ಎಲ್ಲ ವರ್ಗಗಳಿಗೆ ಅನುಕೂಲ’
Team Udayavani, May 17, 2020, 5:35 AM IST
ಸುಳ್ಯ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೋವಿಡ್ 19 ಲಾಕ್ಡೌನ್ನಿಂದ ಸಂಕಷ್ಟಕ್ಕೀಡಾಗಿರುವ ಜನರ ನೆರವಿಗೆ ಅಭೂತಪೂರ್ವ ಸ್ಪಂದನೆ ನೀಡಿದ್ದು, 20 ಲಕ್ಷ ಕೋ.ರೂ. ಪ್ಯಾಕೇಜ್ ಎಲ್ಲ ವರ್ಗಗಳ ಜನರಿಗೆ ಸಹಕಾರ ನೀಡಲಿದೆ ಎಂದು ಶಾಸಕ ಅಂಗಾರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೃಷಿ ಸಮ್ಮಾನ್ ಖಾತೆಗೆ 2000 ರೂ. ಹಾಗೂ ಜನ್ಧನ್ ಖಾತಗೆ ರೂ. 500 ಜಮೆ ಮಾಡಲಾಗಿದೆ. ಉಜ್ವಲ್ ಯೋಜನೆ ಫಲಾನುಭವಿಗಳಿಗೆ ಉಚಿತ ಗ್ಯಾಸ್ ನೀಡಿದೆ ಎಂದರು.
ಬ್ಯಾಡ್ಜ್ ಇಲ್ಲದ ರಿಕ್ಷಾ ಚಾಲಕರಿಗೆ ಸಹಾಯಧನ ದೊರೆಯದಿರುವುದರಿಂದ ಶೇ. 60ರಷ್ಟು ಅರ್ಹ ಚಾಲಕರಿಗೆ ತೊಂದರೆ ಉಂಟಾಗುವ ಬಗ್ಗೆ ಚಾಲಕರು ಗಮನಕ್ಕೆ ತಂದಿದ್ದಾರೆ. ಆ ಬಗ್ಗೆ ಸಚಿವರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದೇನೆ ಎಂದರು.
ಅರಣ್ಯ ಒಪ್ಪಿಗೆ ಸಿಗಬೇಕಿದೆ
ಸುಳ್ಯದ 110 ಕೆ.ವಿ. ವಿದ್ಯುತ್ ವಿತರಣೆ ಕಾಮಗಾರಿಯ ವಿದ್ಯುತ್ ಲೈನ್ಮಾರ್ಗ ಹಾದು ಹೋಗುವ ಸ್ಥಳದಲ್ಲಿ ಅರಣ್ಯ ಭೂಮಿ ಮಂಜೂರಾತಿಯ ವಿಚಾರ ಮುಖ್ಯಮಂತ್ರಿಗಳಲ್ಲಿ ಚರ್ಚಿಸಲಾಗಿದೆ. ಕೋವಿಡ್ 19 ಹಿನ್ನೆಲೆಯಲ್ಲಿ ಸ್ವಲ್ಪ ತಡವಾಗಿದೆ. ಎರಡು ಹಂತಗಳಲ್ಲಿ ಸರ್ವೆ ನಡೆದಿದ್ದು, ಎರಡನೇ ಹಂತಗಳಲ್ಲಿ ಕಡಿಮೆ ಭೂಮಿ ಸಾಕಾಗುವ ಕಾರಣ ಆ ಸರ್ವೆ ಒಪ್ಪುವಂತೆ ಬೇಡಿಕೆ ಇಡಲಾಗಿದೆ. ಡೀಮ್ಡ್ ಫಾರೆಸ್ಟ್ ಕೈ ಬಿಡಬೇಕು ಎನ್ನುವುದು ನಮ್ಮ ಆಗ್ರಹ ಎಂದರು.
ಗಾಂಧಿನಗರದಿಂದ ಆಲೆಟ್ಟಿ ಸೇತುವೆ ತನಕ ರಸ್ತೆಯ ಕಾಂಕ್ರಿಟ್ಗೆ 20 ಲಕ್ಷ ರೂ. ಇರಿಸಲಾಗಿದೆ. ಈ ವಾರವೆ ಕಾಮಗಾರಿ ಆರಂಭಗೊಳ್ಳಲಿದೆ. ಪೈಚಾರಿನಿಂದ ಸೋಣಂಗೇರಿ ವರೆಗೆ 4.5 ಕೋಟಿ ರೂ.ಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಆಗಿದೆ ಎಂದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಜಿಲ್ಲಾ ಕಾರ್ಯದರ್ಶಿ ಮುಳಿಯ ಕೇಶವ ಭಟ್, ವೆಂಕಟ್ ದಂಬೆಕೋಡಿ, ವಿನಯ ಕಂದಡ್ಕ, ಸುಬೋಧ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ ಉಪಸ್ಥಿತರಿದ್ದರು.