ಮೀನುಗಾರರಿಗೆ 25 ಕೋ.ರೂ. ಡೀಸೆಲ್ ಸಬ್ಸಿಡಿ ಬಾಕಿ ! ಸಂಕಷ್ಟದಲ್ಲಿ ಕರಾವಳಿಯ ಮೀನುಗಾರಿಕೆ
Team Udayavani, Feb 26, 2021, 7:05 AM IST
ಮಂಗಳೂರು: ಡೀಸೆಲ್ ದರ ಹೆಚ್ಚಳದಿಂದ ಈಗಾಗಲೇ ತತ್ತರಿಸಿರುವ ಕರಾವಳಿಯ ಮೀನುಗಾರರಿಗೆ ಕಳೆದ ನಾಲ್ಕು ತಿಂಗಳಿನಿಂದ ರಾಜ್ಯ ಸರಕಾರವು ಬರೋಬ್ಬರಿ 25 ಕೋ.ರೂ.ಗಳಿಗೂ ಅಧಿಕ ಮೊತ್ತದ ಡೀಸೆಲ್ ಸಬ್ಸಿಡಿ ಬಾಕಿ ಇರಿಸಿರುವ ಕಾರಣ ಮೀನುಗಾರಿಕಾ ವಲಯದಲ್ಲಿ ಬಹುದೊಡ್ಡ ಆತಂಕ ಎದುರಾಗಿದೆ.
ಒಂದು ಲೀಟರ್ ಡೀಸೆಲ್ ದರದಲ್ಲಿ ಒಳಗೊಂಡಿರುವ “ಮಾರಾಟ ಕರ’ವನ್ನು ಸರಕಾರ ಸಬ್ಸಿಡಿ ರೂಪದಲ್ಲಿ ಮೀನುಗಾರರಿಗೆ ನೀಡುತ್ತ ಬಂದಿದೆ. ಪ್ರತೀ ತಿಂಗಳಿಗೆ ಒಂದು ದೊಡ್ಡ ಬೋಟ್ಗೆ ಗರಿಷ್ಠ 9000 ಲೀಟರ್ ಡೀಸೆಲ್ವರೆಗೆ ಸಬ್ಸಿಡಿ ದೊರೆಯುತ್ತದೆ. ಮಂಗಳೂರಿನ ಸಾವಿರಾರು ಬೋಟ್ಗಳು ಈ ಸೌಲಭ್ಯ ಪಡೆಯುತ್ತಿವೆ. ಪ್ರತೀ ತಿಂಗಳು ಮೀನುಗಾರರ ಖಾತೆಗೆ ಈ ಮೊತ್ತ ಬಿಡುಗಡೆಯಾಗುತ್ತಿತ್ತು. ಅಕ್ಟೋಬರ್ವರೆಗೂ ಈ ಮೊತ್ತ ಸಮರ್ಪಕವಾಗಿ ಸರಕಾರ ಬಿಡುಗಡೆ ಮಾಡಿತ್ತು. ಆದರೆ, ನವೆಂಬರ್ನಿಂದ ಇಲ್ಲಿಯವರೆಗೆ ಮಾತ್ರ ಸಬ್ಸಿಡಿ ಬಿಡುಗಡೆಯಾಗಲೇ ಇಲ್ಲ.
ಮೀನುಗಾರಿಕಾ ಇಲಾಖೆಯ ಮಾಹಿತಿ ಪ್ರಕಾರ ಕರಾವಳಿ ಭಾಗಕ್ಕೆ ಡೀಸೆಲ್ ಸಬ್ಸಿಡಿ ಮೊತ್ತ ಸುಮಾರು 75 ಕೋ.ರೂ. ಬಿಡುಗಡೆ ಮಾಡಲು ಬಾಕಿ ಇದೆ. ಈ ಪೈಕಿ ಮಂಗಳೂರಿನ ಬೋಟ್ಗಳಿಗೆ ಸುಮಾರು 25 ಕೋ.ರೂ.ಗಳಿಗೂ ಅಧಿಕ ಮೊತ್ತ ಬಿಡುಗಡೆಗೆ ಬಾಕಿಯಿದೆ. ಈ ಹಿಂದೆ ಮಾರಾಟ ಕರ 1 ಲೀಟರ್ಗೆ 8 ರೂ. ಇದ್ದರೆ, ಈಗ 14 ರೂ.ಗೆ ಏರಿಕೆಯಾಗಿದೆ. ಹೀಗಾಗಿ ಬಾಕಿ ಮೊತ್ತ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯೂ ಇದೆ. ಸದ್ಯ ಕೊರೊನಾ ಕಾರಣದಿಂದ ಸರಕಾರದಲ್ಲಿ ಆರ್ಥಿಕ ಪರಿಸ್ಥಿತಿ ನೆಟ್ಟಗಿಲ್ಲದ ಕಾರಣ ಮೊತ್ತ ಬಿಡುಗಡೆ ತಡವಾಗಿದೆ ಎನ್ನಲಾಗುತ್ತಿದೆ. ಆದರೆ, ಹಣ ಬಿಡುಗಡೆ ಮಾಡುವುದಕ್ಕೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಸಚಿವ ಎಸ್. ಅಂಗಾರ ತಿಳಿಸಿದ್ದಾರೆ.
ಮೀನುಗಾರ ಮುಖಂಡ ಮೋಹನ್ ಬೆಂಗ್ರೆ ಅವರ ಪ್ರಕಾರ “ಒಂದು ಬೋಟ್ ಒಮ್ಮೆ ಮೀನುಗಾರಿಕೆಗೆ ತೆರಳಲು ಆರರಿಂದ ಆರೂವರೆ ಸಾವಿರ ಲೀ. ಡೀಸೆಲ್ ಬೇಕು. ಕಳೆದ ವರ್ಷ ಈ ಹೊತ್ತಿಗೆ 68 ರೂ.ನಷ್ಟಿದ್ದ ಡೀಸೆಲ್ ದರ ಈಗ 80ರ ಗಡಿಯನ್ನೂ ದಾಟಿದೆ. ಇಂತಹ ಪರಿಸ್ಥಿತಿಯಲ್ಲಿ ಮೀನುಗಾರಿಕೆ ಮಾಡುವುದು ಬಲು ಕಷ್ಟ ಎಂದವರು ಹೇಳಿದ್ದಾರೆ.
ಡೀಸೆಲ್ ದರ ಏರಿಕೆ; ಮೀನೂ ಇಲ್ಲ!
ಡೀಸೆಲ್ ಸಬ್ಸಿಡಿ ದೊರೆಯಲಿಲ್ಲ ಎಂಬ ಮೀನುಗಾರರ ದೂರಿನ ಮಧ್ಯೆಯೇ ಡೀಸೆಲ್ ದರ ಹೆಚ್ಚಳ ಕೂಡ ಮೀನುಗಾರಿಕೆಯನ್ನು ಬಹುದೊಡ್ಡ ಸಂಕಷ್ಟಕ್ಕೆ ತಳ್ಳಿದೆ. ಮೀನುಗಾರಿಕೆಗೆ ಒಮ್ಮೆ ತೆರಳುವ ಬೋಟ್ಗಳಿಗೆ ಸುಮಾರು 6500 ಲೀ. ಡೀಸೆಲ್ ಖರೀದಿಸುತ್ತಾರೆ. ಆದರೆ, ದಿನದಿಂದ ದಿನಕ್ಕೆ ಡೀಸೆಲ್ ದರ ಏರಿಕೆಯಾಗುತ್ತಿರುವ ಕಾರಣ ಬೋಟ್ಗಳ ನಿರ್ವಹಣೆಯೇ ಮೀನುಗಾರರಿಗೆ ತಲೆನೋವಾಗಿದೆ. ಜತೆಗೆ ಸಮುದ್ರದಲ್ಲಿ ಮೀನುಗಳ ಅಭಾವವೂ ಮೀನುಗಾರರಿಗೆ ಇದೀಗ ಹೊಸ ಆತಂಕ ಸೃಷ್ಟಿಸಿದೆ. ಬೋಟ್ಗಳು ತೆರಳಿದರೂ ಸಾಕಷ್ಟು ಮೀನು ಇಲ್ಲದೆ ನಷ್ಟವೇ ಅಧಿಕವಾಗಿದೆ. ಈ ಮಧ್ಯೆ ಕಾರ್ಮಿಕರ ವೇತನ ಹೆಚ್ಚಳ, ಬಲೆ, ರೋಪ್, ಕಬ್ಬಿಣದ ಸಾಮಗ್ರಿಗಳು, ಐಸ್ ದರ ಸೇರಿದಂತೆ ಇತರ ನಿರ್ವಹಣೆ ಖರ್ಚು ಕೂಡ ಹೆಚ್ಚಳವಾದ್ದರಿಂದ ಮೀನುಗಾರಿಕೆಗೆ ಸಂಕಷ್ಟ ಎದುರಾಗಿದೆ. ಇದೇ ಕಾರಣದಿಂದ ಶೇ.70ರಷ್ಟು ಆಳಸಮುದ್ರ ಮೀನುಗಾರಿಕೆ ಬೋಟ್ಗಳು ಈಗಾಗಲೇ ದಡ ಸೇರಿವೆ. ಕೆಲವೇ ಬೋಟ್ಗಳು ಮಾತ್ರ ಮೀನುಗಾರಿಕೆ ನಡೆಸುತ್ತಿವೆ.
ಶೀಘ್ರ ಬಿಡುಗಡೆ ನಿರೀಕ್ಷೆ
ಮೀನುಗಾರರಿಗೆ ನವೆಂಬರ್ ಬಳಿಕದಿಂದ ಡೀಸೆಲ್ ಸಬ್ಸಿಡಿ ಪಾವತಿ ಆಗಿಲ್ಲ. ಈ ಬಗ್ಗೆ ಸರಕಾರದ ಗಮನಕ್ಕೆ ತರಲಾಗಿದೆ. ಶೀಘ್ರ ಬಿಡುಗಡೆ ಮಾಡುವ ಬಗ್ಗೆ ಸರಕಾರದಿಂದ ಮಾಹಿತಿ ಬಂದಿದೆ.
-ಪಾರ್ಶ್ವನಾಥ್, ಉಪನಿರ್ದೇಶಕರು, ಮೀನುಗಾರಿಕೆ ಇಲಾಖೆ, ಮಂಗಳೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು