3 ಸಂಚಾರಿ ಪ್ರಯೋಗಾಲಯ ಸಿದ್ಧ ಇಂದು ಉಡುಪಿಯಲ್ಲಿ ಚಾಲನೆ
Team Udayavani, Apr 30, 2020, 12:42 PM IST
ಕುಂದಾಪುರ: ಮಾರುತಿ ಆಮ್ನಿಯಲ್ಲಿ ಪಂಚಾಯತ್ ಅಥವಾ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ತೆರಳಿ ಗಂಟಲ ದ್ರವ ತಪಾಸಣೆ ನಡೆಸುವ ಸಂಚಾರಿ ಪ್ರಯೋಗಾಲಯ ಉಡುಪಿ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ರಾಜ್ಯ ದಲ್ಲಿಯೇ ಮೊದಲ ಬಾರಿಗೆ ಕುಂದಾಪುರದಲ್ಲಿ ತಯಾರಾಗಿದೆ.
ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಇಂತಹ ಪ್ರಯೋಗಾಲಯ ಸಿದ್ಧವಾಗಿದ್ದರೂ ಅದರಲ್ಲಿ ಸ್ವಲ್ಪ ತಾಂತ್ರಿಕ ಗೊಂದಲಗಳಿವೆ ಎನ್ನುತ್ತಾರೆ ವೈದ್ಯರು. ಬಸ್ಸಿನೊಳಗೆ ಹೋಗಿ ಬಂದ ವ್ಯಕ್ತಿಗೆ ಕೋವಿಡ್-19 ಪಾಸಿಟಿವ್ ಇದ್ದರೆ ಇತರರಿಗೆ ಹರಡುವ ಸಾಧ್ಯತೆ ಇರುವುದರಿಂದ ಮಾರುತಿ ಆಮ್ನಿ ಯಲ್ಲಿ ಲ್ಯಾಬ್ ತಯಾರಾಗಿದೆ.
ತ್ರಾಸಿಯಲ್ಲಿ ಒಂದು ಸಿದ್ಧಗೊಳ್ಳುತ್ತಿದ್ದು ಗುರುವಾರ ಉಡುಪಿಯಲ್ಲಿ ಡಿಸಿ ಇದಕ್ಕೆ ಚಾಲನೆ ನೀಡಲಿದ್ದಾರೆ. ಇನ್ನೆರಡು ಬೇರೆ ಕಡೆ ತಯಾರಾಗುತ್ತಿವೆ.
ನೌಕರರ ಸಂಘದ ಸಹಾಯ
ರಾಜ್ಯ ಸರಕಾರಿ ನೌಕರರ ಸಂಘ ಕುಂದಾಪುರ ತಾಲೂಕು ಶಾಖೆ ಸುಮಾರು 40 ಸಾವಿರ ರೂ. ವೆಚ್ಚ ದಲ್ಲಿ ಒಂದನ್ನು ಸಿದ್ಧಗೊಳಿಸಲು ಸಹಕರಿಸಿದೆ. ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ ಉಡುಪ ಇದರ ತಾಂತ್ರಿಕ ವಿವರಗಳನ್ನು ತಯಾರು ಮಾಡಿದ್ದಾರೆ.
ಜಿಲ್ಲೆಯ ಎಲ್ಲ ಗರ್ಭಿಣಿಯರ, ಹಿರಿಯ ನಾಗರಿಕರ, ಅಸ್ತಮಾ ಮೊದಲಾದ ಶ್ವಾಸ ಸಂಬಂಧಿ ಸಮಸ್ಯೆ ಉಳ್ಳವರ, ಸೋಂಕು ಶಂಕಿತರ ತಪಾಸಣೆ ನಡೆಸಲು ಉದ್ದೇಶಿಸಲಾಗಿದೆ. ಪ್ರತಿ ಬಾರಿ ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಬದಲು ಜನ ಇರುವಲ್ಲಿಯೇ ತಪಾಸಿಸುವ ಶೈಲಿ ಇದು.
– ಜಿ. ಜಗದೀಶ್, ಡಿಸಿ, ಉಡುಪಿ