700+ ಪತ್ರಿಕಾಗೋಷ್ಠಿ 100 ಕಿಸಾನ್ ಸಮ್ಮೇಳನ
ರೈತರ ಪ್ರತಿಭಟನೆಗೆ ಪ್ರತಿಯಾಗಿ ಬಿಜೆಪಿ ಕಾರ್ಯತಂತ್ರ
Team Udayavani, Dec 12, 2020, 6:10 AM IST
ಹೊಸದಿಲ್ಲಿ: ಕೇಂದ್ರ ಸರಕಾರದ 3 ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರ ಹೋರಾಟ ಶುಕ್ರವಾರ 16ನೇ ದಿನ ಪೂರ್ಣಗೊಳಿಸಿದೆ. ಹೋರಾಟ ಕೊನೆಗೊಳ್ಳುವ ಲಕ್ಷಣ ಕಾಣಿಸದ ಹಿನ್ನೆಲೆಯಲ್ಲಿ, ಇದಕ್ಕೆ ಪ್ರತಿ ಯಾಗಿ ದೇಶಾದ್ಯಂತ ಜನರ ಬಳಿಗೇ ತೆರಳಿ ಕಾಯ್ದೆಯ ಅನುಕೂಲಗಳನ್ನು ವಿವರಿಸುವ ಕಾರ್ಯತಂತ್ರವನ್ನು ಬಿಜೆಪಿ ರೂಪಿಸಿದೆ. ಪಕ್ಷವು ದೇಶಾದ್ಯಂತ 700 ಪತ್ರಿಕಾಗೋಷ್ಠಿಗಳನ್ನು ಮತ್ತು 100 ರಷ್ಟು ಸಭೆಗಳನ್ನು ಆಯೋಜಿಸಲು ನಿರ್ಧರಿಸಿದೆ. ಕೃಷಿ ಕಾಯ್ದೆಗಳ ಕುರಿತು ಜಾಗೃತಿ ಮೂಡಿಸಲು ಮತ್ತು ಸಮರ್ಥಿಸಿಕೊಳ್ಳಲು ವಿಸ್ತೃತ ಯೋಜನೆಯನ್ನು ಪಕ್ಷ ಹಾಕಿಕೊಂಡಿದೆ.
718 ಜಿಲ್ಲೆಗಳಲ್ಲಿ ಪತ್ರಿಕಾಗೋಷ್ಠಿ
ಈ ಯೋಜನೆಯನ್ವಯ ದೇಶದ 718 ಜಿಲ್ಲೆಗಳಲ್ಲಿ ಬಿಜೆಪಿ ನಾಯಕರು ಪತ್ರಿಕಾಗೋಷ್ಠಿಗಳನ್ನು ನಡೆಸ ಲಿದ್ದು, ವಿವಿಧ ರಾಜ್ಯಗಳ 100 ಪ್ರದೇಶಗಳಲ್ಲಿ ಕಿಸಾನ್ ಸಮ್ಮೇಳನಗಳನ್ನು ಆಯೋಜಿಸಲಿದ್ದಾರೆ. ಇವುಗಳಲ್ಲಿ ಕೇಂದ್ರ ಸಚಿವರೂ ಪಾಲ್ಗೊಳ್ಳಲಿದ್ದಾರೆ. ಪತ್ರಿಕಾಗೋಷ್ಠಿ ಮತ್ತು ಸಭೆಗಳ ದಿನಾಂಕವು ಸದ್ಯದಲ್ಲೇ ಘೋಷಣೆಯಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇಂದಿನಿಂದ ಪ್ರತಿಭಟನೆ ತೀವ್ರ
ಇನ್ನೊಂದೆಡೆ, ರೈತ ಸಂಘಟನೆಗಳು ಡಿ. 14ರ ವೇಳೆಗೆ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿವೆ. ಶನಿವಾರ ರೈತರು ದಿಲ್ಲಿ-ಜೈಪುರ ಮತ್ತು ದಿಲ್ಲಿ-ಆಗ್ರಾ ಹೆದ್ದಾರಿಗಳಲ್ಲಿ ತಡೆಯೊಡ್ಡಲಿದ್ದಾರೆ. ರವಿವಾರ “ಹೊಸ ದಿಲ್ಲಿ ಚಲೋ’ ನಡೆಸಲು ಕರೆ ನೀಡಿದ್ದು, ದೇಶಾದ್ಯಂತ ಟೋಲ್ ಬೂತ್ಗಳಿಗೆ ಮುತ್ತಿಗೆ ಹಾಕಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕಿಸಾನ್ ಒಕ್ಕೂಟ
ಮಾತುಕತೆಯ ಮೂಲಕ ಯಾವುದೇ ವಿವಾದವನ್ನೂ ಬಗೆ ಹರಿಸಿಕೊಳ್ಳಬಹುದು. ಕೇಂದ್ರ ಸರಕಾರ ಆ ಪ್ರಯತ್ನವನ್ನು ಮುಂದುವರಿಸಿದೆ. ಜನಸಾಮಾನ್ಯರ ಹಿತಾಸಕ್ತಿ ಯಿಂದಾದರೂ ಪ್ರತಿಭಟನೆಯನ್ನು ಕೈಬಿಡಿ.
– ನರೇಂದ್ರ ಸಿಂಗ್ ತೋಮರ್, ಕೃಷಿ ಸಚಿವ
718 ಜಿಲ್ಲೆಗಳಲ್ಲಿ ಬಿಜೆಪಿ ನಾಯಕರ ಪತ್ರಿಕಾಗೋಷ್ಠಿ
100 ಪ್ರದೇಶಗಳಲ್ಲಿ ರೈತ ಸಮ್ಮೇಳನ