ಕಾಡಂಚಿನಲ್ಲಿ ಕಾನ್ವೆಂಟ್ ಮೀರಿಸುವಂತಹ ಸರ್ಕಾರಿ ಶಾಲೆ
ನಗರ ಪ್ರದೇಶದ ಯಾವ ಪ್ರತಿಷ್ಟಿತ ಖಾಸಗಿ ಶಾಲೆಗೂ ಕಡಿಮೆ ಇಲ್ಲ ; ಅತ್ಯಾಧುನಿಕ ಮೂಲ ಸೌಲಭ್ಯ, ಹಚ್ಚ ಹಸಿರು ಹೊದ್ದಿರುವ ಶಾಲೆ
Team Udayavani, Sep 22, 2021, 3:25 PM IST
ಕೊಳ್ಳೇಗಾಲ: ಈ ಶಾಲೆಗೆ ಒಮ್ಮೆ ಕಾಲಿಟ್ಟರೆ ಯಾವುದೋ ಪ್ರತಿಷ್ಟಿತ ಕಾನ್ವೆಂಟ್ ಇಲ್ಲವೇ ದೊಡ್ಡ ದೊಡ್ಡ ನಗರಗಳಲ್ಲಿ ಯೋಚಿತವಾಗಿ ನಿರ್ಮಿಸಿರುವ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಶಾಲೆಯ ವಾತಾವರಣ ಕಂಡು ಬರುತ್ತದೆ.
ಜಿಲ್ಲಾ ಕೇಂದ್ರ ಅಥವಾ ತಾಲೂಕು ಕೇಂದ್ರದಲ್ಲಿ ಈ ಶಾಲೆ ಇರಬಹುದು ಎಂದು ಯೋಚಿಸಿದರೆ ಅದು ತಪ್ಪು ಕಲ್ಪನೆ. ಅರೆ, ಇಂತಹ ಶಾಲೆ ಎಲ್ಲಿದೆ ಎಂಬ ಕುತೂಹಲ ಮೂಡುವುದು ಸಹಜ. ಮೂಲಸೌಲಭ್ಯಗಳೇ ಮರೀಚಿಕೆಯಾಗಿರುವ ಕಾಡಂಚಿನ ಗೋಪಿನಾಥಂ ಎಂಬ ಕುಗ್ರಾಮವೊಂದರಲ್ಲಿ ಎಲ್ಲರೂ ಹುಬ್ಬೇರಿಸು ವಂತೆ, ಕಾನ್ವೆಂಟ್ಗಳಿಗೆ ಪೈಪೋಟಿ ನೀಡುವಂತೆ ಅತ್ಯಾಧು ನಿಕ ಸೌಲಭ್ಯಗಳೊಂದಿಗೆ ಸರ್ಕಾರಿ ಶಾಲೆಯನ್ನು ಅಧುನೀಕರಣಗೊಳಿಸಲಾಗಿದೆ.
ಈ ಶಾಲೆ ಸುಸಜ್ಜಿತ ಕಟ್ಟಡ, ಕೊಠಡಿ ನಿರ್ಮಾಣಕ್ಕೆ ಸೀಮಿತವಾಗಿಲ್ಲ. ಮಕ್ಕಳಿಗೆ ಪಠ್ಯೇತರ ಶೈಕ್ಷಣಿಕ ಚಟುವಟಿಕೆ, ಗುಣಮಟ್ಟದ ಶಿಕ್ಷಣ, ಯೋಗ, ವ್ಯಾಯಾಮ, ಉದ್ಯಾನ, ಕೈತೋಟ, ಸಾಂಸ್ಕೃತಿಕ ವೇದಿಕೆ, ಮಕ್ಕಳನ್ನು ಆಕರ್ಷಿಸುವ ಗೋಡೆ ಬರಹಗಳು, ಶುದ್ಧ ಕುಡಿಯುವ ನೀರಿನ ಘಟಕ ಈ ಸರ್ಕಾರಿ ಶಾಲೆಯಲ್ಲಿ ಕಂಡು ಬರುತ್ತದೆ. ಕಾಡುಗಳ್ಳ ದಂತಚೋರ ನರಹಂತಕ ವೀರಪ್ಪನ್ ಸ್ವಗ್ರಾಮವಾದ ಗಡಿ ಪ್ರದೇಶವೆಂದು ಗುರುತಾಗಿರುವ ಗೋಪಿನಾಥಂನಲ್ಲಿ ಇದ್ದ ಮುರುಕಲಾದ ಸರ್ಕಾರಿ ಶಾಲೆ ಈಗ ವಿವಿಧ ಯೋಜನೆಯಡಿ ಮತ್ತು ಗ್ರಾಮಸ್ಥರ ನೆರವಿನೊಂದಿಗೆ, ಶಾಲೆ ಮುಖ್ಯ ಶಿಕ್ಷಕ ವಿ.ವೀರಪ್ಪ ಮಾರ್ಗದರ್ಶನದಲ್ಲಿ ಸಂಪೂರ್ಣ ನವೀಕರಣ ಮಾಡಿ ಖಾಸಗಿ ಶಾಲೆಯಂತೆ ಕಂಗೊಳಿಸುವ ರೂಪ ನೀಡಲಾಗಿದೆ.
ಗೋಪಿನಾಥಂ ಸಂಪೂರ್ಣ ಕಾಡಿನಿಂದ ಕೂಡಿದ ಗ್ರಾಮ, ಚಾ.ನಗರ ಜಿಲ್ಲೆಯ ಹನೂರು ತಾಲೂಕಿಗೆ ಒಳಪಡುತ್ತದೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆ, ಗ್ರಾಮದ ರಸ್ತೆ, ಸಾರಿಗೆ ಸೌಕರ್ಯ ಕೂಡ ಇದೆ. ಸರ್ಕಾರಿ ಶಾಲೆ ನವೀಕರಣಗೊಂಡು ಗ್ರಾಮಕ್ಕೂ ಅಭಿವೃದ್ಧಿಯ ಕಳೆ ಕಟ್ಟಿದೆ.
ಇದನ್ನೂ ಓದಿ:ಮಹಿಳೆಯ ಹೊಟ್ಟೆಯಲ್ಲಿತ್ತು ಬರೋಬ್ಬರಿ ಒಂದು ಮುಕ್ಕಾಲು ಕಿಲೋ.ಗ್ರಾಂ ಗಡ್ಡೆ!
ಕಾಡಿನ ಶಾಲೆಯಲ್ಲಿ ಕೆಲಸ: ಮುಖ್ಯ ಶಿಕ್ಷಕ ವಿ.ವೀರಪ್ಪ ಮಾಗದರ್ಶನ ದಲ್ಲಿ ಈ ಶಾಲೆಯನ್ನು ಅಭಿವೃದ್ಧಿಗೊಳಿಸಲಾಗಿದೆ. ಇವರು ಹನೂರು ತಾಲೂಕಿನ ಶಾಗ್ಯಂ ಗ್ರಾಮದವರು. ಈ ಹಿಂದೆ ನರಹಂತಕ ವೀರಪ್ಪನ್ ಭಯದಿಂದ ಶಿಕ್ಷಕರು ಈ ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದರು. ಆದರೆ, ವೀರಪ್ಪ 1992ರಲ್ಲಿ ಶಿಕ್ಷಕರ ಹುದ್ದೆಗೆ ನೇಮಕಗೊಂಡು, ಯಾರೂ ಶಾಲೆಗೆ ಹೋಗದ ವೇಳೆ ಸ್ವ ಇಚ್ಛೆಯಿಂದ ಶಾಲೆಗೆ ನೇಮಕಗೊಂಡರು. 98ರ ವರೆಗೆ ಅಂದರೆ ಸತತ 6 ವರ್ಷ ಸೇವೆ ಸಲ್ಲಿಸಿ ನಂತರ ವಿವಿಧ ಶಾಲೆಗಳಲ್ಲಿ ಕಾರ್ಯನಿರ್ವಹಿಸಿದರು. ಬಳಿಕ ಬಡ್ತಿ ಹೊಂದಿ ಗೋಪಿನಾಥಂ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿದ್ದಾರೆ. ಕಾಡಂಚಿನ ಶಾಲೆಗಳಲ್ಲೇ ಸುದೀರ್ಘ ಅವಧಿ ಸೇವೆ ಸಲ್ಲಿಸಿರುವ ಖ್ಯಾತಿ ಹೊಂದಿದ್ದಾರೆ.
ಒಂದೇ ವರ್ಷದಲ್ಲಿ ಸುಧಾರಣೆ: ಶಾಲೆಯಲ್ಲಿ ಈ ಹಿಂದೆ ಅಗತ್ಯಕ್ಕೆ ತಕ್ಕಂತೆ ಕೊಠಡಿಗಳು ಇರಲಿಲ್ಲ. ಶಾಲೆ ತೊರೆದ ಮಕ್ಕಳನ್ನು ಗುರುತಿಸಿ ಶಾಲೆಗೆ ಕರೆತಂದು ಮರದ ಕೆಳಗೆ ಪಾಠ ಮಾಡಲಾಗುತ್ತಿತ್ತು. ಇದ್ದ ಕೊಠಡಿಗಳನ್ನು ವೀರಪ್ಪನ್ ಸೆರೆ ಕಾರ್ಯಾಚರಣೆ ಹೊಣೆ ಹೊತ್ತಿದ್ದ ಎಸ್ ಟಿಎಸ್ ಪಡೆಗೆ ನೀಡಲಾಗಿತ್ತು. ಈ ವೇಳೆ ಜಿಲ್ಲಾ ಶಿಕ್ಷಣಾಧಿಕಾರಿ ರವೀಂದ್ರ ನಾಥ್ ಅವರು ಮನವರಿಕೆ ಮಾಡಿ ಎಸ್ಟಿಎಫ್ ಪಡೆಗೆ ನೀಡಿದ್ದ ಅರ್ಧದಷ್ಟು ಕೊಠಡಿಗಳನ್ನು ಶಾಲೆಗೆ ಮರಳಿ ನೀಡಲಾಯಿತು. ಇದೀಗ ಶಾಲೆಯನ್ನು ಆಧುನೀಕರಣಗೊಳಿಸಲಾಗಿದ್ದು, 1ರಿಂದ 8ನೇ ತರಗತಿವರೆಗೆ 265 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಮಕ್ಕಳ ಕೌಶಲ್ಯ: ವಿದ್ಯಾರ್ಥಿಗಳಲ್ಲಿ ಕೌಶಲ್ಯ ಹೆಚ್ಚಿಸುವ ಸಲುವಾಗಿ ಖಾಸಗಿ ಶಾಲೆಯಲ್ಲಿರುವಂತಹ ಎಲ್ಲಾ ತರಹದ ವೇದಿಕೆ ಶಾಲೆಯಲ್ಲಿದೆ. ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲಾಗಿದೆ. ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯಗಳಿದ್ದು, ತುಂಬಾ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಾಗಿದೆ. ಒಟ್ಟಾರೆ ಶಾಲೆಯಲ್ಲಿ ಕಂಡು ಬಂದ ಗಣನೀಯ ಸುಧಾರಣೆಯಿಂದಾಗಿ ತಮಿಳುನಾಡಿಗೆ ಹೋಗುತ್ತಿದ್ದ ವಿದ್ಯಾರ್ಥಿಗಳು ಇದೀಗ ಗೋಪಿನಾಥಂ ಶಾಲೆ ಮರಳಿದ್ದಾರೆ. ಇಚ್ಛಾಶಕ್ತಿ, ದೂರದೃಷ್ಟಿ, ಗ್ರಾಮೀಣ ಮಕ್ಕಳ ಬಗ್ಗೆ ಕಾಳಜಿ ಇದ್ದರೆ ಕಾನ್ವೆಂಟ್ಗಳನ್ನು ಮೀರಿಸುವಂತೆ ಶಾಲೆಯನ್ನು ಅಭಿವೃದ್ಧಿಪಡಿಸ ಬಹುದು ಎಂಬುದಕ್ಕೆ ಈ ಸರ್ಕಾರಿ ಶಾಲೆ ಮಾದರಿಯಾಗಿದೆ.
ವರ್ಷದೊಳಗೆ ಶಾಲೆ ಸುಧಾರಣೆ ಆಗಿದ್ದು ಹೇಗೆ?
ವರ್ಷದ ಹಿಂದೆ ಈ ಶಾಲಾ ಕಟ್ಟಡ ಶಿಥಿಲಗೊಂಡು ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿ ಎದುರಾಗಿತ್ತು. ಈ ವೇಳೆ ಮುಖ್ಯ ಶಿಕ್ಷಕ ವಿ.ವೀರಪ್ಪ ಅವರು ಶಾಲೆಯನ್ನು ಅಭಿವೃದ್ಧಿಪಡಿಸುವ ಪಣತೊಟ್ಟು ಗ್ರಾಮಸ್ಥರ ಸಹಕಾರ ಕೇಳಿದರು. ಇದಕ್ಕೆ ಹಲವರು ದೇಣಿಗೆ ನೀಡಿದರು. ಈ ದೇಣಿಗೆ ಹಣದ ಜೊತೆಗೆ ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಹೀಗೆ ಹಂತ ಹಂತವಾಗಿ ಸೌಲಭ್ಯ ಕಲ್ಪಿಸಿ, ನೋಡು ನೋಡುತ್ತಿದ್ದಂತೆಯೇ ಶಾಲೆ ಆಧುನೀಕರಣಗೊಂಡು ಹೊಸ ರೂಪ ಪಡೆದುಕೊಂಡಿದೆ. ಖಾಸಗಿ ಶಾಲೆಯನ್ನು ಮೀರಿಸುವಂತಹ ಸೌಲಭ್ಯಗಳು ಈ ಶಾಲೆಯಲ್ಲಿ ಇವೆ. ಎಲ್ಲ ಶಿಕ್ಷಕರೂ ಕೂಡ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಶಾಲೆ ವಿಶೇಷತೆ, ಶೈಕ್ಷಣಿಕ ವಾತಾವರಣ
ಈ ಸರ್ಕಾರಿ ಶಾಲೆಯಲ್ಲಿ ಸುಂದರ ಕೈತೋಟ, ಸುಸಜ್ಜುತ ಮೈದಾನ ಹೊಂದಿದೆ. ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಅತ್ಯಾಧುನಿಕ ಶೌಚಾಲಯ ವ್ಯವಸ್ಥೆ ಇದೆ. ಗೋಡೆ ಬರಹ ಮಕ್ಕಳನ್ನು ಆಕರ್ಷಿಸುತ್ತಿದ್ದು, ಗೋಡೆ ಮೇಲೆ ಪ್ರಾಣಿ ಪಕ್ಷಿಗಳು, ಗಣ್ಯರ ಚಿತ್ರ, ಪರಿಸರ ಸಂರಕ್ಷಣೆ ಸಂದೇಶ, ಇಂಗ್ಲಿಷ್ ವ್ಯಾಕರಣ, ಉಚ್ಛಾರಣೆ ಮಾಹಿತಿಗಳು ಕೂಡ ಇವೆ. ಜನಪ್ರಿಯ ಗಾದೆಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರುಗಳು, ವಿವಿಧ ದೇಶಗಳ ವಿಶೇಷತೆಯನ್ನು ತಿಳಿಸುವಂತಹ ವಾಕ್ಯಗಳನ್ನು ಬಿಡಿಸಲಾಗಿದೆ. ಮಕ್ಕಳಿಗೆ ಯೋಗ, ವ್ಯಾಯಾಮ ಹೇಳಿಕೊಡಲಾಗುತ್ತದೆ. ಕಬ್ಬಡಿ, ಲಾಂಗ್ಜಂಪ್, ಹೈಜಂಪ್, ವಾಲಿಬಾಲ್ ಮತ್ತಿತರ ಕ್ರೀಡೆಗೆ ಸುಸಜ್ಜಿತ ಮೈದಾನವಿದ್ದು, ಕ್ರೀಡೆ ಹಾಗೂ ಪಠ್ಯೇಟತರ ಚಟುವಟಿಕೆಗೆ, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. 1-8 ತರಗತಿ ವರೆಗೆ 265 ಮಕ್ಕಳು ಓದುತ್ತಿರುವ ಶಾಲೆಯಲ್ಲಿ ಕನ್ನಡ, ತಮಿಳು ಭಾಷೆ ಮಾಧ್ಯಮವಿದ್ದು, ಇದೀಗ ಇಂಗ್ಲಿಷ್ ಮಾಧ್ಯಮದಲ್ಲೂ ಶಿಕ್ಷಣ ನೀಡಲಾಗುತ್ತಿದೆ.
ಗ್ರಾಮೀಣ ಮಕ್ಕಳನ್ನು ವಿದ್ಯಾವಂತರನ್ನಾಗಿಸುವ ಗುರಿ ಹೊಂದಲಾ ಗಿದೆ. ಕಾಡಂಚಿನ ಗೋಪಿನಾಥಂ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ತಮ್ಮ ಸ್ವಂತ ಹಣದ ಜೊತೆಗೆ ದಾನಿಗಳು ನೀಡಿದ ಆರ್ಥಿಕ ನೆರವಿನಿಂದ ಸರ್ಕಾರಿ ಶಾಲೆಯಲ್ಲಿ ಅತ್ಯಾ ಧುನಿಕ ಸೌಲಭ್ಯ ಕಲ್ಪಿಸಿ ಹೊಸ ಮೆರಗು ನೀಡಲಾಗಿದೆ. ಕಾನ್ವೆಂಟ್ಗೆ ಪೈಪೋಟಿ ನೀಡುವಂತೆ ಶಿಕ್ಷಣ ನೀಡಲಾಗುತ್ತಿದೆ.
– ವಿ.ವೀರಪ್ಪ, ಶಾಲೆ ಮುಖ್ಯ ಶಿಕ್ಷಕ
ಕನ್ನಡ ಶಾಲೆಯಲ್ಲಿ ಕನ್ನಡಕ್ಕೆ ಮಹತ್ವ ನೀಡುವ ಸಲುವಾಗಿ ಶಾಲೆ ಅಭಿವೃದ್ಧಿಯಾಗಿದ್ದು, ತಮಿಳರು ಕನ್ನಡ ನಾಡಿನಲ್ಲೇ ನೆಲಸಲು ಭಯಸಿರುವುದರಿಂದ ಗೋಪಿನಾಥಂ ಶಾಲೆಯಲ್ಲಿ ಮತ್ತಷ್ಟು ಕನ್ನಡ ಮೊಳಗುತ್ತದೆ.
-ಆರ್.ನರೇಂದ್ರ, ಹನೂರು ಶಾಸಕ
-ಡಿ.ನಟರಾಜು