ಸಂಭವನೀಯ ಅಪಾಯ ತಪ್ಪಿಸಿದ ಯುವಕರ ತಂಡ
Team Udayavani, Jul 10, 2020, 5:18 AM IST
ಮುಂಡಾಜೆ: ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ದಿಡುಪೆಯ ಯುವಕರ ತಂಡವು ಬಿಜೆಪಿಯ ತಾಲೂಕು ಯುವಮೋರ್ಚಾದ ಉಪಾಧ್ಯಕ್ಷ ಪ್ರಮೋದ್ ದಿಡುಪೆ ಅವರ ನೇತೃತ್ವದಲ್ಲಿ ಸಂಭವನೀಯ ಅಪಾಯವನ್ನು ತಪ್ಪಿಸಿದೆ.
ನೇತ್ರಾವತಿ ನದಿಯನ್ನು ಸೇರುವ ದಿಡುಪೆಯ ನಂದಿಕಾಡು ಹಳ್ಳಕ್ಕೆ ಕೆಳಪ್ರದೇಶದ ಕೃಷಿಕರು ವರ್ಷವೂ ಬೇಸಗೆಯಲ್ಲಿ ಕಿಂಡಿ ಅಣೆಕಟ್ಟಿಗೆ ಮರಳಿನ ಚೀಲಗಳನ್ನು ಅಡ್ಡಲಾಗಿ ಇರಿಸಿ ಕೃಷಿ ನೀರಿನ ಕಟ್ಟ ಕಟ್ಟುತ್ತಾರೆ. ಈ ವರ್ಷ ಮರಳಿನ ಚೀಲಗಳ ಬದಲು ಯಂತ್ರಗಳ ಮೂಲಕ ಮಣ್ಣು ಹಾಗೂ ಕಲ್ಲು ಹಾಕಿ ಕಟ್ಟ ಕಟ್ಟಿದ್ದರು.
ಈಗ ಮಳೆ ಬಂದು ನೀರಿನ ಹರಿವು ಹೆಚ್ಚಾಗಿ ಕೃಷಿ ಕಟ್ಟದಲ್ಲಿ ನೀರು ತುಂಬಿ ಹಳ್ಳ ಹರಿಯುವ ದಿಕ್ಕನ್ನೇ ಬದಲಾಯಿಸ ತೊಡಗಿತ್ತು. ಇದರಿಂದ ಮುಂದಿನ ದಿನಗಳಲ್ಲಿ ಕೊರೆತ ಉಂಟಾಗಿ ನೀರು ಸಮೀಪದ ಕೃಷಿ ತೋಟ, ಮನೆಗಳಿಗೆ ನುಗ್ಗುವ ಅಪಾಯವಿತ್ತು.
ದಿಡುಪೆ ಪರಿಸರದ ರಕ್ಷಿತ್, ಜಗದೀಶ್, ದಿನೇಶ್, ಸಂಜೀವ ಗೌಡ, ಸುಧೀರ್, ಸಚಿನ್ ಮೊದಲಾದವರು ಸೇರಿ ನೀರಿನ ಕಟ್ಟಕ್ಕೆ ಹಾಕಿದ್ದ ಕಲ್ಲು, ಮಣ್ಣು ತೆರವುಗೊಳಿಸಿ ನೀರು ನುಗ್ಗದಂತೆ ಮುಂಜಾಗ್ರತೆ ವಹಿಸಿದ್ದಾರೆ.