ದಾನಿಗಳ ನೆರವಿನಿಂದ ಯುವಕರ ಶ್ರಮದಾನದಿಂದ ನಿರ್ಮಾಣವಾಯಿತು ಮಹಿಳೆಗೆ ಮನೆ
Team Udayavani, May 28, 2020, 7:38 PM IST
ಸವಣೂರು : ಗ್ರಾಮದ ಇಡ್ಯಾಡಿ ನಿವಾಸಿಯಾದ ಯುಮುನಾ ಇಡ್ಯಾಡಿ ಅವರ ಮನೆಯು ಮಳೆಗಾಲದಲ್ಲಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಂಪೂರ್ಣವಾಗಿ ಕುಸಿದಿದ್ದು 2 ವರ್ಷಗಳಿಂದ ಪ್ಲಾಸ್ಟಿಕ್ ಹೊದಿಕೆಯಲ್ಲಿ ಅದೇ ಮನೆಯ ಅಳಿದುಳಿದ ಗೋಡೆಗಳ ಮಧ್ಯೆ ಜೀವನ ನಡೆಸುತ್ತಿದ್ದರು.
ಈ ಸಂಧರ್ಭದಲ್ಲಿ ಊರಿನ ಸಮಾನ ಮನಸ್ಕ ಯುವಕರು ಸೇರಿಕೊಂಡು ಕಟ್ಟೋಣ ಬಾಳಿಗೊಂದು ಆಸರೆ ವ್ಯಾಟ್ಸಾಪ್ ಗ್ರೂಪ್ ರಚಿಸಿ ಮನೆ ನಿರ್ಮಾಣಕ್ಕೆ ನಿರ್ಧರಿಸಿ,ಈಗ ಮನೆ ನಿರ್ಮಿಸಿ ಕುಟುಂಬಕ್ಕೆ ಗೃಹ ಪ್ರವೇಶ ಮಾಡಿ ಹಸ್ತಾಂತರ ಮಾಡಿದ್ದಾರೆ.
ಮನೆ ನಿರ್ಮಾಣದ ಕಾರ್ಯದಲ್ಲಿ ಗ್ರಾಮದ ಧಾರ್ಮಿಕ,ರಾಜಕೀಯ ಮುಖಂಡರುಗಳ ಹಾಗೂ ಸಂಘ ಸಂಸ್ಥೆಗಳ ಮಾರ್ಗದರ್ಶನದಲ್ಲಿ, ಊರಿನ ಉತ್ಸಾಹಿ ಯುವಕರ ಶ್ರಮದಾನ,ದಾನಿಗಳ ನೆರವು ಪ್ರಮುಖವಾಗಿದೆ.
ಎಪ್ರಿಲ್ 26ರಂದು ಶಿಲಾನ್ಯಾಸ ಮಾಡುವ ಮೂಲಕ ಈ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು.ಈಗ ಮೇ.27ಕ್ಕೆ ಗೃಹಪ್ರವೇಶ ಮಾಡಿ ಹಸ್ತಾಂತರ ಮಾಡಿದ ಸಂಭ್ರಮ.
ಕೇವಲ ಒಂದೇ ತಿಂಗಳಲ್ಲಿ ದಾನಿಗಳ ನೆರವಿನಿಂದ ಶ್ರಮದಾನೀ ಯುವಕರ ಸತತ ಪ್ರಯತ್ನದಿಂದ ಮನೆ ನಿರ್ಮಾಣವಾಗಿದೆ.
ಕಳೆದ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪದಿಂದ ಹಳೆಯ ಮನೆ ಕುಸಿದು ದಿಕ್ಕೆ ತೋಚದಂತಾಗಿದ್ದ ಯಮುನಾ ಇಡ್ಯಾಡಿ ಅವರಿಗೆ ಯುವಕರ ತಂಡದಿಂದ ದಾನಿಗಳ ಸಹಕಾರದಲ್ಲಿ ಮನೆ ನಿರ್ಮಾಣ ಮಾಡಲಾಗಿದೆ.
ಕೇವಲ 31 ದಿನಗಳಲ್ಲಿ ಮನೆ ನಿರ್ಮಾಣ ಮಾಡಿದ ಸಂಭ್ರಮ ಕಟ್ಟೋಣ ಬದುಕಿಗೊಂದು ಆಸರೆ ತಂಡಕ್ಕಿದೆ.ಇಲ್ಲಿನ ಯುವಕರ ತಂಡ ಹಗಲಿರುಳೆನ್ನದೆ ಶ್ರಮ ವಹಿಸಿ ಸುಂದರ ಮನೆ ನಿರ್ಮಾಣ ಸಾದ್ಯವಾಗಿದೆ.
-ತಾರಾನಾಥ ಕಾಯರ್ಗ
ಮಳೆಯಿಂದ ತನ್ನ ಮನೆ ಕುಸಿದು ದಿಕ್ಕೆ ತೋಚದಂತಾಗಿತ್ತು.ಅಲ್ಲಿ ಇಲ್ಲಿ ಕಾಲ ಕಳೆಯುವ ಸಂಕಷ್ಟ ಎದುರಾಗಿತ್ತು.ಊರಿನ ಸಮಾನ ಮನಸ್ಸಿನ ಯುವಕರ ತಂಡ ತನಗೆ ಮನೆ ನಿರ್ಮಾಣದ ಕುರಿತು ತಿಳಿಸಿದಾಗ ಸಂತೋಷವಾಯಿತು.ಒಂದೇ ತಿಂಗಳಲ್ಲಿ ನನಗೆ ಮನೆ ನಿರ್ಮಿಸಿಕೊಟ್ಟಿದ್ದಾರೆ.ಕೈ ಜೋಡಿಸಿದ ಎಲ್ಲಾ ಮನಸ್ಸುಗಳಿಗೆ ಧನ್ಯವಾದಗಳು.
-ಯಮುನಾ ಇಡ್ಯಾಡಿ,
– ಪ್ರವೀಣ್ ಚೆನ್ನಾವರ