ಜಾನಪದ ವಿಶ್ವವಿದ್ಯಾಲಯದ ವ್ಯಾಪ್ತಿ ವಿಸ್ತರಣೆಗೆ ಕ್ರಮ: ಸಿಎಂ ಬೊಮ್ಮಾಯಿ
ಬೆಂಗಳೂರಿನಲ್ಲಿ ಹಳ್ಳಿ ವಾತಾವರಣ
Team Udayavani, Apr 14, 2022, 6:08 PM IST
ಬೆಂಗಳೂರು: ಇಡೀ ಭಾರತದಲ್ಲಿ ಜಾನಪದ ವಿಶ್ವವಿದ್ಯಾಲಯ ಶಿಗ್ಗಾವಿ ಯಲ್ಲಿರುವುದು ನಮ್ಮ ಹೆಮ್ಮೆ ಅದರ ವ್ಯಾಪ್ತಿಯನ್ನು ಹೆಚ್ಚಿಸುವ ಕೆಲಸ ಈ ವರ್ಷ ಆಗಲಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಹೇಳಿದ್ದಾರೆ.
ಜಕ್ಕೂರು ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮಾದರಿ ಪಾರಂಪರಿಕ ಕಲಾ ಗ್ರಾಮ, ರಂಗೋಲಿ ಗಾರ್ಡನ್ಸ್ ಲೋಕಾರ್ಪಣೆ ಮಾಡಿ ಮಾತನಾಡಿದರು.
ಬೆಂಗಳೂರಿನಲ್ಲಿ ಹಳ್ಳಿ ವಾತಾವರಣ
ಮನುಷ್ಯ ಸಂಸ್ಕೃತಿ, ಸಂಸ್ಕಾರ ಇಲ್ಲದೆ ಬದುಕಲಾರ. ಸಮಾಜದಲ್ಲಿ ಸಾಮೂಹಿಕವಾಗಿ ಬದುಕುತ್ತಾನೆ. ಅದಕ್ಕೆ ಭಾಷೆ, ಅರ್ಥ, ಭಾವನೆ,ನೀತಿ, ಗಾಯನ ಇರಬೇಕು. ಇದೆಲ್ಲವೂ ಒಂದಕ್ಕೊಂದು ಹೊಂದಿಕೊಂಡು ಇಲ್ಲಿ ಬಿಂಬಿತವಾಗಿದೆ ಎಂದರು. ನಮ್ಮ ಸಂಸ್ಕೃತಿಯನ್ನು ಜನ ಪ್ರೀತಿಸುತ್ತಾರೆ. ರಂಗೋಲಿ ಗಾರ್ಡನ್ ಮೂಲಕ ಹಳ್ಳಿ ವಾತಾವರಣ ಬೆಂಗಳೂರಿನಲ್ಲಿಯೇ ಸಿಗಲಿದೆ ಎಂದರು.
ಶಾಸಕ ಕೃಷ್ಣಬೈರೇಗೌಡ ಮಾತನಾಡಿ, ಉತ್ತರ ಕರ್ನಾಟಕದ ಸಂಸ್ಕೃತಿಯ ಕಲೆಯನ್ನು ಬಿಂಬಿಸಲು ನೆರವಾಗಿದ್ದು ಶ್ಲಾಘನೀಯ. ಬೆಂಗಳೂರಿಗೆ ಗ್ರಾಮೀಣ ಕಲೆಯ ವಿಹಾರ ದೊರೆಯುತ್ತದೆ. ಇದರ ಅವಶ್ಯಕತೆ ಇತ್ತು. ಶಿಶುನಾಳ ಶರೀಫರ ಕರ್ಮ ಭೂಮಿಯಲ್ಲಿ ಇದೇ ಮಾದರಿಯ ಯೋಜನೆಗೆ ಚಾಲನೆ ನೀಡಲಾಗಿದೆ. ಇಂಥ ಕಲೆ, ಪರಂಪರೆ, ಇತಿಹಾಸವನ್ನು ಮಕ್ಕಳಿಗೆ ಬಿಂಬಿಸುವ ಉತ್ತಮ ಕೆಲಸವಾಗಿದೆ ಎಂದರು.
ರಾಜು ಕುನ್ನೂರ್ ಮಾತನಾಡಿ, ಕಲಾ ಜಗತ್ತಿಗೆ ಬಂದಿರುವದು ಸಂತೋಷದ ಸಂಗತಿ. ಇದನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು. ಕರ್ನಾಟಕದ ವಿವಿಧ ಸಂಸ್ಕೃತಿ ಯನ್ನು ಬಿಂಬಿಸುವಂತಾಗಬೇಕು. ಜಾನಪದ ವಿವಿಧ ಸ್ಥಳಗಳಲ್ಲಿ ವಿವಿಧ ರೀತಿಯಲ್ಲಿ ಇವೆ. ದಕ್ಷಿಣ ಕರ್ನಾಟಕದ ಮಹಾದೇವನ ಆರಾಧನೆಯಲ್ಲಿ ಜಾನಪದ ಇದೆ. ಉತ್ತರ ಕರ್ನಾಟಕದಲ್ಲಿ ಶಿಶುನಾಳ ಶರೀಫರ ಸಂಸ್ಕೃತಿ ಇದೆ. ಈ ನೆಲದ ಹಲವಾರು ವರ್ಷಗಳ ಪರಂಪರೆ ಸಹಜವಾಗಿ ಬಾಯಿಂದ ಬಾಯಿಗೆ ಹರಿದುಬಂದಿದೆ. ಜನರ ಬಾಯಿಂದ ಹೃದಯಕ್ಕೆ ಮುಟ್ಟುವಂಥದ್ದು ಜಾನಪದ ಎಂದರು.
ಈ ಸಂದರ್ಭದಲ್ಲಿ ಬೃಹತ್ ಕೈಗಾರಿಕೆ ಸಚಿವರಾದ ಮುರುಗೇಶ್ ನಿರಾಣಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಎಸಿಎಸ್ ಅತೀಕ್, ರಂಗೋಲಿ ಗಾರ್ಡನ್ ರೂವಾರಿ ರಾಜು ಕೊನ್ನೂರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.