ನೂತನ ಮರಳು ನೀತಿಗೆ ಒಪ್ಪಿಗೆ
Team Udayavani, May 1, 2020, 5:55 AM IST
ಬೆಂಗಳೂರು: ಪಟ್ಟಾ ಭೂಮಿ, ಕೆರೆ, ಗ್ರಾಮೀಣ ಭಾಗದ ಹಳ್ಳ ಪ್ರದೇಶಗಳಲ್ಲಿ ಮರಳು ತೆಗೆಯಲು ಅವಕಾಶ ಕೊಡುವ ನೂತನ ಮರಳು ನೀತಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಆಯಾ ತಾಲೂಕಿನಲ್ಲಿ ದಂಡಾಧಿಕಾರಿಗಳಾಗಿರುವ ತಹಶೀಲ್ದಾರ್ ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರರು ಮರಳು ತೆಗೆಯುವ ಪ್ರದೇಶ ಗುರುತಿಸಿ ಗ್ರಾಮ ಪಂಚಾಯತ್ ಒಪ್ಪಿಗೆಯೊಂದಿಗೆ ಅನುಮತಿ ನೀಡಲಿದ್ದಾರೆ.
ಸ್ಥಳೀಯವಾಗಿ ಜನತಾ ಮನೆ, ಸಣ್ಣ ಪುಟ್ಟ ಕಾಮಗಾರಿಗೆ ಮರಳು ಬಳಸಬಹುದು. ಪ್ರತಿ ಮೆಟ್ರಿಕ್ ಟನ್ಗೆ 700 ರೂ.ವರೆಗೆ ಬೆಲೆ ನಿಗದಿ ಮಾಡಲಾಗುವುದು. ಬೆಲೆ ನಿಗದಿಯಲ್ಲೂ ದಂಡಾಧಿಕಾರಿಗಳಿಗೆ ಅಧಿಕಾರ ಇರಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆಯ ಅನಂತರ ಮಾತನಾಡಿ, ಇಷ್ಟು ದಿನ ನದಿ ಪಾತ್ರಗಳಲ್ಲಿ ಕೆಲವು ಮರಳು ಬ್ಲಾಕ್ ಗುರುತಿಸಿ ಹರಾಜು ಹಾಕಲು ಅವಕಾಶವಿತ್ತು. ಇದೀಗ ಪಟ್ಟಾಭೂಮಿ, ಕೆರೆ, ಗ್ರಾಮೀಣ ಭಾಗದ ಹಳ್ಳ, ತಗ್ಗು ಪ್ರದೇಶಗಳಲ್ಲೂ ಮರಳು ತೆಗೆಯಲು ಅವಕಾಶ ಕೊಡಲಾಗಿದೆ. ಇದರಿಂದ ಅಕ್ರಮ ಮರಳು ದಂಧೆಗೂ ಕಡಿವಾಣ ಬೀಳಲಿದೆ ಎಂದು ಹೇಳಿದರು.