ರೈಲಿನಲ್ಲಿ ಕೃಷಿ ಉತ್ಪನ್ನ ಸಾಗಾಟ : ಸೆ. 25ರಿಂದ ಪ್ರಾಯೋಗಿಕ ಸಂಚಾರ
Team Udayavani, Aug 30, 2020, 12:26 PM IST
ಪುತ್ತೂರು: ಅಡಿಕೆ ಸೇರಿದಂತೆ ಕೃಷಿ ಉತ್ಪನ್ನಗಳನ್ನು ಕೊಂಕಣ ರೈಲ್ವೇ ಮೂಲಕ ರಿಯಾಯಿತಿ ದರದಲ್ಲಿ ಸಾಗಿಸಲು ನಿರ್ಧರಿಸಿದ್ದು ಸೆ. 25ರಿಂದ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ.
ಪುತ್ತೂರು ಎಪಿಎಂಸಿ ಸಭಾಂಗಣದಲ್ಲಿ ಶನಿವಾರ ನಡೆದ ವರ್ತಕರ, ಗಾರ್ಬಲ್ದಾರರ, ಕ್ಯಾಂಪ್ಕೋ ಸಂಸ್ಥೆ, ಟ್ರಾನ್ಸ್ಪೊàರ್ಟ್ ದಾರರ ಸಭೆಯಲ್ಲಿ ರೈಲ್ವೇ ಅಧಿಕಾರಿಗಳು ಈ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಕೇಂದ್ರ ಸರಕಾರ ಕಿಸಾನ್ ರೈಲು ಯೋಜನೆ ಆರಂಭಿಸಿದ್ದು ಕೃಷಿ ಕ್ಷೇತ್ರದ ಪ್ರಗತಿಗೆ ಪೂರಕವಾಗಲಿದೆ. ಸೂಕ್ತ ಸಾಗಾಣಿಕೆ ಸೌಲಭ್ಯವಿದ್ದರೆ ದರ ಕುಸಿತ ತಡೆಯಲು ಸಾಧ್ಯ. ಜಿಲ್ಲೆಯ ಚಾಲಿ ಅಡಿಕೆಗೆ ಗುಜರಾತ್, ರಾಜಸ್ಥಾನಗಳಲ್ಲಿ ಬಹು ಬೇಡಿಕೆಯಿದ್ದು, ಕೊಂಕಣ ರೈಲ್ವೇಯು ಸ್ಪ³ರ್ಧಾತ್ಮಕ ದರದಲ್ಲಿ ಸಾಗಾಟಕ್ಕೆ ಮುಂದೆ ಬಂದಿದೆ. ಇದರಿಂದ ಸಾಗಾಟವೆಚ್ಚ ಇಳಿಮುಖ ಮತ್ತು ಸಮಯ ಉಳಿತಾಯವಾಗಲಿದೆ. ಪ್ರಾಯೋಗಿಕವಾಗಿ ಅಡಿಕೆ ಸಾಗಾಟಕ್ಕೆ ದಿನ ನಿಗದಿ ಆಗಿದ್ದು ಪುತ್ತೂರಿನ ವರ್ತಕರು ಸಹಕಾರ ನೀಡಬೇಕು ಎಂದರು.
ಅಡಿಕೆ ಮಾತ್ರವಲ್ಲದೆ ಕೊಕ್ಕೋ, ಗೇರು ಬೀಜ, ರಬ್ಬರ್, ಕರಿಮೆಣಸನ್ನು ಉತ್ಪಾದಕರ ಮನೆ ಬಾಗಿಲಿನಿಂದ ಗ್ರಾಹಕರ ಮನೆ ಬಾಗಿಲಿಗೆ ಕೊಂಡೊಯ್ಯುವ ಕೆಲಸವೂ ಸುಲಲಿತವಾಗಲಿದೆ ಎಂದರು.
ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಮಾತನಾಡಿ, ಶಾಸಕರು ಮತ್ತು ಸಂಸದರ ಮುತುವರ್ಜಿಯಿಂದ ರೈಲ್ವೇ ಇಲಾಖೆ ಪುತ್ತೂರನ್ನು ಕೇಂದ್ರವಾಗಿರಿಸಿಕೊಂಡು ಸುಳ್ಯ, ಕಡಬ, ಬೆಳ್ತಂಗಡಿಯ ಅಡಿಕೆಯನ್ನು ಅತೀ ಕಡಿಮೆ ದರದಲ್ಲಿ ಹೊರ ರಾಜ್ಯಕ್ಕೆ ಸಾಗಾಟ ಮಾಡಲು ಮುಂದೆ ಬಂದಿದೆ. ಎಪಿಎಂಸಿಯಲ್ಲಿ ತಾತ್ಕಾಲಿಕವಾಗಿ ಗೋದಾಮು ವ್ಯವಸ್ಥೆ ಕಲ್ಪಿಸಿ ಪ್ರಯತ್ನಕ್ಕೆ ಪೂರ್ಣ ಸಹಕಾರ ನೀಡಲಿದೆ ಎಂದು ಹೇಳಿದರು.
ಅಡಿಕೆ ವರ್ತಕರ ಸಂಘದ ಅಧ್ಯಕ್ಷ ರವೀಂದ್ರನಾಥ ರೈ ಬಳ್ಳಮಜಲು, ಗೌರವಾಧ್ಯಕ್ಷ ಶಶಾಂಕ ಕೊಟೇಚಾ, ಕಾರ್ಯದರ್ಶಿ ಕೆ.ಎ. ಸಿದ್ದೀಕ್, ಅಡಿಕೆ ವರ್ತಕರಾದ ಭವಿನ್ ಶೇಟ್, ಜನಾರ್ದನ ಬೆಟ್ಟ, ಸಿನಾನ್, ಖಲಂದರ್ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ ನಿರ್ವಹಿಸಿದರು.
48 ಗಂಟೆಗಳಲ್ಲಿ ಸಾಗಾಟ
ಕೊಂಕಣ ರೈಲ್ವೇ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ. ಸುಧಾ ಕೃಷ್ಣಮೂರ್ತಿ ಮಾಹಿತಿ ನೀಡಿ, ಕೇಂದ್ರ ಸರಕಾರ ರೈಲ್ವೇ ಇಲಾಖೆಯ ಮೂಲಕ ಹೊಸ ಪಾರ್ಸೆಲ್ ಸರ್ವೀಸ್ ಆರಂಭಿಸಿದೆ. ಕೊಂಕಣ ರೈಲ್ವೇಯು ಅಡಿಕೆ ಸೇರಿದಂತೆ ಕೃಷಿ ಉತ್ಪನ್ನಗಳನ್ನು ರಿಯಾಯಿತಿ ದರದಲ್ಲಿ ಮುಂಬಯಿ, ಗುಜರಾತ್ ಇನ್ನಿತರ ರಾಜ್ಯಗಳಿಗೆ ಸಾಗಾಟ ಮಾಡಲಿದೆ. ಸಾಗಾಟದ ವೇಳೆಯಲ್ಲಿ ಸಂಪೂರ್ಣ ಜವಾಬ್ದಾರಿಯನ್ನು ಇಲಾಖೆ ವಹಿಸಿಕೊಳ್ಳಲಿದ್ದು, 48 ಗಂಟೆಗಳಲ್ಲಿ ಗಮ್ಯ ತಲುಪಿಸುವ ಕೆಲಸ ಮಾಡಲಿದೆ ಎಂದರು.
ಸುರಕ್ಷಿತ ವ್ಯವಸ್ಥೆ
ಕೊಂಕಣ ರೈಲ್ವೇಯ ರೀಜಿನಲ್ ಟ್ರಾಫಿಕ್ ಮ್ಯಾನೇಜರ್ ವಿನಯ ಕುಮಾರ್ ಮಾತನಾಡಿ, ಗೂಡ್ಸ್ ರೈಲಿನ ಒಂದು ವ್ಯಾಗನ್ನಲ್ಲಿ 63 ಟನ್ ಅಡಿಕೆ ಹಿಡಿಯುತ್ತದೆ. ಸಮಯ ಉಳಿಕೆ, ಹೆಚ್ಚು ಸುರಕ್ಷಿತ ವ್ಯವಸ್ಥೆ ಇಲ್ಲಿದೆ. ಇಲ್ಲಿಂದ ಅಡಿಕೆ ಲೋಡ್ ಮಾಡಿ ಮಂಗಳೂರು ತೋಕೂರಿನಲ್ಲಿರುವ ಗೂಡ್ಸ್ ಕೇಂದ್ರಕ್ಕೆ ಸಾಗಾಟ ಮತ್ತು ಗುಜರಾತ್ ಅಥವಾ ಉತ್ತರ ಪ್ರದೇಶದ ಭಾಗದಲ್ಲಿ ರೈಲ್ವೇ ಕೇಂದ್ರದ 50 ಕಿ.ಮೀ. ಸುತ್ತಮುತ್ತ ತಲುಪಿಸುವ ಜವಾಬ್ದಾರಿ ಕೂಡ ರೈಲ್ವೇ ಇಲಾಖೆ ವಹಿಸಲಿದೆ ಎಂದರು.