ಕೋವಿಡ್ 3ನೇ ಅಲೆ ಸಾಧ್ಯತೆ ಕ್ಷೀಣವಾದರೂ ಎಚ್ಚರ ಅಗತ್ಯ
Team Udayavani, Sep 29, 2021, 6:00 AM IST
ಸಾಂದರ್ಭಿಕ ಚಿತ್ರ.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇ ದಿನೆ ಇಳಿಕೆಯ ಹಾದಿಯಲ್ಲಿದ್ದು ಸದ್ಯಕ್ಕಂತೂ ಜನರು ನೆಮ್ಮದಿಯ ನಿಟ್ಟುಸಿರು ಬಿಡು ವಂತಾಗಿದೆ. ಎರಡನೇ ಅಲೆ ಕಾಣಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಸೋಮವಾರದಂದು 504 ಹೊಸ ಪ್ರಕರಣಗಳಷ್ಟೇ ದಾಖ ಲಾಗುವ ಮೂಲಕ ಕನಿಷ್ಠ ಪ್ರಮಾಣಕ್ಕೆ ಇಳಿಕೆಯಾಗಿತ್ತು. ಕೆಲವು ದಿನ ಗಳಿಂದೀಚೆಗೆ ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು 500- 700ರ ಆಸುಪಾಸಿನಲ್ಲಿದೆಯಲ್ಲದೆ ಮರಣ ದರವೂ ಕಡಿಮೆಯಾಗಿದೆ. ಈ ಬೆಳವಣಿಗೆಗಳು ಜನತೆಯಲ್ಲಿ ನೆಮ್ಮದಿ ಮೂಡಿಸಿದ್ದರೆ, ಶೈಕ್ಷಣಿಕ ಕ್ಷೇತ್ರವೂ ಸೇರಿದಂತೆ ಎಲ್ಲ ವಲಯಗಳಲ್ಲೂ ಆಶಾವಾದ ಗರಿಗೆದರಿದೆ.
2020ರ ಮಾರ್ಚ್ನಲ್ಲಿ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ವರದಿಯಾದ ಬಳಿಕ ನಿರಂತರವಾಗಿ ಹೆಚ್ಚುತ್ತಲೇ ಸಾಗಿದ್ದ ಪ್ರಕರಣಗಳ ಸಂಖ್ಯೆ ಈ ವರ್ಷದ ಮೊದಲ ಎರಡು ತಿಂಗಳ ಅವಧಿಯಲ್ಲಿ ಕನಿಷ್ಠ ಮಟ್ಟಕ್ಕೆ ಇಳಿದಿತ್ತು. ಇನ್ನೇನು ಕೋವಿಡ್ ತಹಬಂದಿಗೆ ಬಂತು ಎನ್ನು ವಷ್ಟರಲ್ಲಿ ದೇಶದಲ್ಲಿ ಎರಡನೇ ಅಲೆ ವ್ಯಾಪಿಸಲಾರಂಭಿಸಿದಾಗ ರಾಜ್ಯ ದಲ್ಲೂ ದಿಢೀರನೇ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗತೊಡ ಗಿತಲ್ಲದೆ ಮರಣ ಪ್ರಮಾಣವೂ ಏಕಾಏಕಿ ಏರಿಕೆ ಕಾಣಲಾರಂಭಿಸಿತ್ತು. ಮಾರ್ಚ್ ಎರಡನೇ ವಾರದಿಂದ ಹೆಚ್ಚುತ್ತಲೇ ಸಾಗಿ ದಿನವಹಿ ಕೋವಿಡ್ ಪ್ರಕರಣಗಳ ಸಂಖ್ಯೆ 50,000 ದಾಟಿದ್ದವು. ಅಷ್ಟು ಮಾತ್ರವಲ್ಲದೆ ಸೋಂಕಿ ತರಿಗೆ ಸರಿಯಾದ ಚಿಕಿತ್ಸೆ ನೀಡುವುದು ಕೂಡ ಕಷ್ಟಕರ ಎಂಬಂತಾಗಿತ್ತು. ಜೂನ್ ಬಳಿಕ ಪರಿಸ್ಥಿತಿ ಮತ್ತೆ ನಿಯಂತ್ರಣಕ್ಕೆ ಬಂದು ಪ್ರಕರಣಗಳ ಸಂಖ್ಯೆ ಇಳಿಮುಖವಾಗತೊಡಗಿತು. ಆದರೂ ಕಳೆದ ಮೂರು ತಿಂಗಳು ಗಳಿಂದೀಚೆಗೆ ಹೊಸ ಪ್ರಕರಣಗಳ ಸಂಖ್ಯೆ ಏರಿಳಿತ ಕಾಣುತ್ತಲೇ ಸಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕೋವಿಡ್ ನಿಯಂತ್ರಣಕ್ಕಾಗಿ ಹೇರಿದ್ದ ನಿರ್ಬಂಧಗಳನ್ನು ಸಡಿಲಿಕೆ ಮಾಡುವ ಮೂಲಕ ಆರ್ಥಿಕ ಚಟು ವಟಿಕೆಗಳು ಸಂಪೂರ್ಣ ಸ್ತಬ್ಧಗೊಳ್ಳದಂತೆ ನೋಡಿಕೊಂಡಿತು.
ಇದನ್ನೂ ಓದಿ:ಕೋವಿಡ್: ರಾಜ್ಯದಲ್ಲಿಂದು 629 ಪಾಸಿಟಿವ್ ಪ್ರಕರಣ| 782 ಸೋಂಕಿತರು ಗುಣಮುಖ
ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿದ್ದಂತೆಯೇ ಈಗ ರಾಜ್ಯದಲ್ಲಿ ಎಲ್ಲ ವಲಯಗಳೂ ಸಹಜ ಸ್ಥಿತಿಯತ್ತ ಮರಳತೊಡಗಿವೆ. ಸರಕಾರ ಹಂತಹಂತವಾಗಿ ಶಾಲಾ- ಕಾಲೇಜುಗಳನ್ನು ತೆರೆಯಲು ಅನುಮತಿ ನೀಡುವ ಮೂಲಕ ಮಕ್ಕಳ ಕಲಿಕೆಗೆ ಅನುವು ಮಾಡಿಕೊಟ್ಟಿದೆ. ಒಂದರಿಂದ ಐದನೇ ತರಗತಿವರೆಗಿನ ಮಕ್ಕಳಿಗೆ ಮುಂದಿನ ತಿಂಗಳ ಮೊದಲಾರ್ಧದಲ್ಲಿ ಶಾಲೆ ಆರಂಭಿಸುವ ಇರಾದೆಯಲ್ಲಿದೆ ಸರಕಾರ. ಏತನ್ಮಧ್ಯೆ ಅಕ್ಟೋಬರ್ ಎರಡನೇ ವಾರ ನವರಾತ್ರಿ ಹಬ್ಬ ಆರಂಭಗೊಳ್ಳಲಿದ್ದರೆ, ನವೆಂಬರ್ ಮೊದಲ ವಾರ ದೀಪಾವಳಿ ಹಬ್ಬವಿದೆ. ಈ ಹಬ್ಬಗಳ ಸಂಭ್ರಮದಲ್ಲಿ ಜನರು ಮತ್ತೆ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಜನರು ಎಲ್ಲ ಮಾರ್ಗ ಸೂಚಿಗಳನ್ನು ಮರೆತು ಪೇಟೆ, ನಗರಗಳಲ್ಲಿ ರಾಜಾರೋಷವಾಗಿ ಅಲೆದಾಡತೊಡಗಿದ್ದು ಕೋವಿಡ್ ಒಂದು ಮತ್ತು ಎರಡನೇ ಅಲೆಯಿಂದ ಪಾಠ ಕಲಿತಂತೆ ಕಾಣುತ್ತಿಲ್ಲ. ಕಳೆದ ವರ್ಷವೂ ಹಬ್ಬಗಳನ್ನು ಸರಳವಾಗಿ ಮನೆಯಲ್ಲಿಯೇ ಆಚರಿಸುವ ಅನಿವಾರ್ಯತೆಗೆ ಸಿಲುಕಿದ್ದ ಜನರು ಈ ಬಾರಿ ಈ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಲು ಉತ್ಸುಕರಾಗಿದ್ದಾರೆ. ಸದ್ಯ ಮೂರನೇ ಅಲೆಯ ಭೀತಿ ದೂರವಾಗಿದ್ದರೂ ಈ ಸಾಧ್ಯತೆಯನ್ನು ಸಂಪೂರ್ಣವಾಗಿ ಅಲ್ಲಗಳೆಯಲಾಗದು ಎಂದು ತಜ್ಞರು ಈಗಾಗಲೇ ಸ್ಪಷ್ಟಪಡಿಸಿರುವುದರಿಂದಾಗಿ ಸರಕಾರ ಮತ್ತು ಜನರು ತುಸು ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ.