ಪಿರಿಯಾಪಟ್ಟಣ: ಗೊಂದಲದ ಗೂಡಾಗಿ ಕೃಷಿ ಪತ್ತಿನ ಮಹಾಸಭೆಯೇ ರದ್ದು
Team Udayavani, Dec 24, 2021, 8:15 PM IST
ಪಿರಿಯಾಪಟ್ಟಣ: ಗೊಂದಲದ ಗೂಡಾದ ಹಿನ್ನಲೆಯಲ್ಲಿ ಮಾಕೋಡು ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ರದ್ದಾದ ಘಟನೆ ಶುಕ್ರವಾರ ಜರುಗಿದೆ.
ತಾಲೂಕು ಮಾಕೋಡು ಕೃಷಿ ಪತ್ತಿನ ಸಹಕಾರ ಸಂಘದ 2020-21 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಈ ಘಟನೆ ಜರುಗಿತು.
ಸಭೆ ಆರಂಭವಾಗುತ್ತಿದ್ದಂತೆ ವಾರ್ಷಿಕ ವರದಿಯನ್ನು ಓದಲು ಮುಂದಾದ ಅಧ್ಯಕ್ಷ ಮಹಾಲಿಂಗಪ್ಪ ಸಭಾ ನಡಾವಳಿಯನ್ನು ಮಂಡಿಸಲು ಮುಂದಾದರು.ಈ ವೇಳೆ ವಕೀಲ ಹಾಗೂ ಗ್ರಾಮದ ಮುಖಂಡ ಎಂ.ಜಿ.ಘೋರ್ಪಡೆ ಪಾಟೀಲ ಶೇರೇಗಾರ್ ಮಾತನಾಡಿ, ಸಂಘದಲ್ಲಿ 1400 ಶೇರುದಾರಿದ್ದು ಆಡಳಿತ ಮಂಡಳಿಯವರು ಶೇರುದಾರರಿಗೆ ಸರಿಯಾದ ಮಾಹಿತಿ ಹಾಗೂ ಆಹ್ವಾನ ಪತ್ರಿಕೆ ನೀಡಲು ವಿಫಲರಾಗಿದ್ದಾರೆ ಸಂಘದ ಸರ್ವ ಸದಸ್ಯರಿಗೆ ಆಹ್ವಾನ ಪತ್ರಿಕೆ ನೀಡಿಲ್ಲ ಸಭೆಯ ಆಹ್ವಾನ ಪತ್ರಿಕೆ ನೀಡಿಲ್ಲ ಎಂದು ದೂರಿ, ಸಹಕಾರ ಸಂಘದಲ ರೈತರು ಯಾವುದೇ ಮಾಹಿತಿ ಕೇಳಿದರೂ ಆಡಳಿತ ಮಂಡಳಿಯವರು ಸಮರ್ಪಕವಾದ ಮಾಹಿತಿ ನೀಡುತ್ತಿಲ್ಲ, ಆಡಳಿತ ಮಂಡಳಿಯವರು ತಾವು ಮಾಡಿರುವ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಸಂಘದ ಮುಖ್ಯ ಕಾರ್ಯನಿರ್ವಾಣಾಧಿಕಾರಿಯನ್ನು ಯಾವುದೇ ದೂರು ಇಲ್ಲದಿದ್ದರೂ ಅಮಾನತು ಮಾಡುವ ಮೂಲಕ ಕಾನೂನು ಉಲ್ಲಂಘನೆ ಮಾಡಿರುವುದಲ್ಲದೆ ಕಾನೂನಿಗೆ ವಿರುದ್ಧವಾಗಿ ಪ್ರಭಾರ ಕಾರ್ಯ ನಿರ್ವಹಣಾಧಿಕಾರಿ ನೇಮಕ ಮಾಡಿಕೊಂಡು ಸುಳ್ಳು ಲೆಕ್ಕ ನೀಡುವ ಮೂಲಕ ಸಂಘದ ಸರ್ವ ಸದಸ್ಯರಿಗೆ ಸುಳ್ಳು ವರದಿ ನೀಡಲು ಮುಂದಾಗಿರುವ ಕಾರಣ ಸಭೆಯನ್ನು ಮುಂದೂಡಬೇಕು ಎಂದು ಒತ್ತಾಯಿಸಿದರು.
ಘೋರ್ಪಡೆ ಪಾಟೀಲ್ ರವರ ಆರೋಪಕ್ಕೆ ಉತ್ತರಿಸಿದ ಸಹಕಾರ ಸಂಘದ ಅದ್ಯಕ್ಷ ರು ವಾರ್ಷಿಕ ಮಹಾ ಸಭೆಯಲ್ಲಿ ಮಾಹಿತಿ ಪಡೆಯಬೇಕಾದರೆ ಸಭೆ ನಿಗದಿಯಾದ 3 ದಿನ ಮುಂಚಿತವಾಗಿ ಬ್ಯಾಂಕಿಗೆ ನೋಟೀಸ್ ಮೂಲಕ ತಿಳಿಯಪಡಿಸಬೇಕೆಂಬ ಮಾಹಿತಿ ಇದೆ. ಸಭೆಯಲ್ಲಿ ಏಕಾ ಏಕಿ ಮಾಹಿತಿ ಕೇಳಿದರೆ ನೀಡಲು ಸಾಧ್ಯ ವಿಲ್ಲವಾದ್ದರಿಂದ ಯಾರೇ ಮಾಹಿತಿಗಳನ್ನು ಪಡೆಯಬೇಕಾದರೆ ಸಹಕಾರ ಸಂಘದ ಕೆಲಸದ ವೇಳೆಯಲ್ಲಿ ಮಾಹಿತಿ ಪಡೆಯುವಂತೆ ತಿಳಿಸಿದರು. ಆದರೆ ನಮಗೆ ಸಭೆಯ ಮಾಹಿತಿಯ ಬಗ್ಗೆಯೇ ತಿಳಿಸಿಲ್ಲ ಎಂದು ಘೋರ್ಪಡೆ ಪಾಟೀಲ್ ಶೇರೆಗಾರ್ ಮರು ಪ್ರಶ್ನೆ ಹಾಕಿದಾಗ ಸರ್ವ ಸದಸ್ಯರು ಒಕ್ಕೊರಲಿನಿಂದ ಸಭೆಯನ್ನು ರದ್ದು ಮಾಡಬೇಕು ಎಂದು ಪ್ರತಿಭಟಿಸಲು ಮುಂದಾದ ಕಾರಣ ಸಭೆಯನ್ನು ಮುಂದುಡಲಾಯಿತು.
ಸರ್ವ ಸದಸ್ಯರುಗಳು ಆಕ್ಷೇಪ ವ್ಯಕ್ತಪಡಿಸಿ ಸದಸ್ಯರುಗಳಿಗೆ ಸೂಕ್ತ ರೀತಿಯಲ್ಲಿ ವಾರ್ಷಿಕ ಮಹಾಸಭೆಯ ಆಹ್ವಾನ ಪತ್ರಿಕೆಯನ್ನು ತಲುಪಿಸಿಲ್ಲ ಹಾಗೂ ಲೆಕ್ಕಪತ್ರಗಳ ಪರಿಶೀಲನೆ ಸೂಕ್ತ ರೀತಿಯಲ್ಲಿ ನಡೆದಿಲ್ಲ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಸಭೆಯನ್ನು ರದ್ದುಗೊಳಿಸಿದರು.
11ಗಂಟೆಗೆ ಆರಂಭವಾದ ಸಭೆ 3ಗಂಟೆ ಕಾದರೂ ಯಾವುದೇ ರೀತಿಯ ಸಭೆ ನಡೆಸಲು ಆಡಳಿತ ಮಂಡಳಿಯು ಸದಸ್ಯರನ್ನು ಮನವೊಲಿಸಿದರು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾದೆ ಸಭೆ ರದ್ದಾಗಿದೆ.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮಹಲಿಂಗಪ್ಪ, ಉಪಾಧ್ಯಕ್ಷ ಬಸವರಾಜ್, ಸದಸ್ಯ ಹಾಗೂ ಮಾಜಿ ತಾ.ಪಂ ಅಧ್ಯಕ್ಷ ಸ್ವಾಮಿಗೌಡ, ರಾಜೇಗೌಡ, ಸಣ್ಣಯ್ಯ, ದೊಡ್ಡೇಗೌಡ, ಮಂಡೀಗೌಡ, ಸಣ್ಣೇಗೌಡ, ನಾಗರತ್ನ, ಮಣಿಯಮ್ಮ, ಗೌರಮ್ಮ, ಹಾಗೂ ಪ್ರಭಾರಿ ಮುಖ್ಯೋಪಾದ್ಯಾಯ ಲಿಂಗರಾಜು, ಮುಖಂಡರುಗಳಾದ ಎಂ.ಕೆ.ಕೃಷ್ಣಗೌಡ, ಸುರೇಶ್, ವಕೀಲ ಘೋರ್ಪಡೆ ಪಾಟೀಲ್, ನೀಲಕಂಠ, ಎಂ.ಕೆ.ಸುರೇಶ್ಕುಮಾರ್, ಸೋಮಣ್ಣ, ಬಸವರಾಜು, ನಿಂಗರಾಜು, ಲೋಕೇಶ್, ಶಿವಣ್ಣ ಸೇರಿದಂತೆ ಮತ್ತಿತರರು ಹಾಜರಿದ್ದರು.