ಸಿನಿಮಾ ಚಿತ್ರೀಕರಣ ಅನುಮತಿಗೆ ಮನವಿ
Team Udayavani, May 31, 2020, 4:10 AM IST
ಬೆಂಗಳೂರು: ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಮತ್ತು ಚಿತ್ರಮಂದಿರದಲ್ಲಿ ಪ್ರದರ್ಶನಕ್ಕೆ ಅನುಮತಿ ನೀಡಿ, ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ನೆರವಾಗಬೇಕು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಹಾಗು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ನೇತೃತ್ವದ ನಿಯೋಗವು ಶುಕ್ರವಾರ ಸಿಎಂಗೆ ಮನವಿ ಸಲ್ಲಿಸಿದೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ನಿಯೋಗ, ಲಾಕ್ಡೌನ್ನಿಂದ ಸಿನಿಮಾರಂಗ ಸ್ಥಗಿತಗೊಂಡು, ಚಿತ್ರೀಕರಣ ನಿಂತಿದೆ. ಹಾಗಾಗಿ ಸಿನಿಮಾ ಕಾರ್ಯಚಟುವಟಿಕೆಗಳಿಗೆ ಅನುಮತಿ ಕೊಡಬೇಕು. ಚಿತ್ರರಂಗಕ್ಕೂ ಅನುದಾನ ನೀಡಬೇಕು. ಸಿನಿಮಾ ಮಂದಿಯ ಸಮಸ್ಯೆ ನಿವಾರಿಸಬೇಕೆಂದು ಮನವಿ ಮಾಡಿದೆ. ಈ ವೇಳೆ ಭರವಸೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಕೇಂದ್ರ ಸರ್ಕಾರದ ಜೊತೆ ಚರ್ಚಿಸಿ, ಅವಕಾಶ ಮಾಡಿಕೊಡುವ ಬಗ್ಗೆ ಹೇಳಿದ್ದಾರೆ ಎನ್ನಲಾಗಿದೆ.
ಈ ಕುರಿತು ಹೇಳಿರುವ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಜೂನ್ 1ರಿಂದ ಎಲ್ಲಾ ರೀತಿಯ ಉದ್ಯಮ ಚಟುವಟಿಕೆಗಳು ಆರಂಭವಾಗಲಿವೆ. ನಮಗೂ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಲಾಗಿದೆ ಎಂದರು. ಸಾ.ರಾ.ಗೋವಿಂದು, ನಿರ್ಮಾಪಕ ಕೆ.ಮಂಜು, ಕೆ.ವಿ.ಚಂದ್ರ ಶೇಖರ್ ಇತರರಿದ್ದರು.