ಕಾರ್ಯವೈಖರಿ ಲೋಪ ಸರಿಪಡಿಸಲು ತಹಶೀಲ್ದಾರ್ಗೆ ಮನವಿ
ಕೆಆರ್ಎಸ್ ಪಕ್ಷದ ಲಂಚ ಮುಕ್ತ ಕರ್ನಾಟಕ ಅಭಿಯಾನ
Team Udayavani, Mar 6, 2021, 10:52 PM IST
ಉಡುಪಿ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ (ಕೆಆರ್ಎಸ್) ಅಧ್ಯಕ್ಷ ರವಿ ಕೃಷ್ಣ ರೆಡ್ಡಿ ನೇತೃತ್ವದ ರಾಜ್ಯ ಸಮಿತಿ ತಂಡ ಶನಿವಾರ “ಲಂಚ ಮುಕ್ತ ಕರ್ನಾಟಕ’ ಅಭಿಯಾನದ ಅಂಗವಾಗಿ ಉಡುಪಿ ತಾಲೂಕು ಕಚೇರಿಗೆ ಭೇಟಿ ನೀಡಿ ಕಚೇರಿಯ ಅವ್ಯವಸ್ಥೆ ಹಾಗೂ ಕಾರ್ಯ ವೈಖರಿಗಳಲ್ಲಿನ ಲೋಪಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವಂತೆ ಆಗ್ರ ಹಿಸಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಕೆಆರ್ಸ್ ಪಕ್ಷದ ಅಧ್ಯಕ್ಷ ರವಿಕೃಷ್ಣ ರೆಡ್ಡಿ, ಬುದ್ಧಿವಂತರ ಜಿಲ್ಲೆ ಉಡುಪಿಯಲ್ಲಿ ಲಂಚದ ದೂರುಗಳು ಕೇಳಿ ಬಂದಿರುವುದು ಆಶ್ಚರ್ಯ ಉಂಟು ಮಾಡಿದೆ. ಆಹಾರ ಹಾಗೂ ಸರ್ವೇ ಇಲಾಖೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಅಧಿಕಾರಿಗಳು ಅನಧಿಕೃತವಾಗಿ ನೇಮಕ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ತಹಶೀಲ್ದಾರ್ ಅವರಿಗೆ ಮನವಿ ಮಾಡಲಾಗಿದೆ. ವ್ಯವಸ್ಥೆ ಉತ್ತಮವಾಗಿ ಆದರೆ ಸೇವೆಗಳಲ್ಲಿ ಬದಲಾವಣೆಯಾದಾಗ ಜನರಿಗೆ ಸರಿಯಾದ ಸಮಯಕ್ಕೆ ಸೇವೆ ಸಿಗಲು ಸಾಧ್ಯ ಎಂದರು.
ಕೆಆರ್ಎಸ್ ಪಕ್ಷದ ಉಪಾಧ್ಯಕ್ಷ ಲಿಂಗೇಗೌಡ, ಜ. ಕಾರ್ಯದರ್ಶಿಗಳಾದ ಸೋಮಸುಂದರ್, ರಘುಪತಿ ಭಟ್, ಕಾರ್ಯದರ್ಶಿ ರಾಮದಾಸ್ ಪೈ, ಅಲ್ಪಸಂಖ್ಯಾಕರ ಘಟಕದ ರಾಜ್ಯಾಧ್ಯಕ್ಷ ಶಾಹೀದ್ ಆಲಿ, ಜಿಲ್ಲಾಧ್ಯಕ್ಷ ಕಿರಣ್ ಕುಮಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಮಮತಾ, ಉಪಾಧ್ಯಕ್ಷೆ ಸಂಧ್ಯಾ, ಕಾರ್ಯದರ್ಶಿ ರೇಷ್ಮಾ, ಜಿಲ್ಲಾ ಘಟಕದ ಉಪಾಧ್ಯಕ್ಷ ಸಲೀಂ ಉಪಸ್ಥಿತರಿದ್ದರು.
ಹಲವು ಲೋಪಗಳು
ಕಚೇರಿಯಲ್ಲಿ ವಿವಿಧ ವಿಭಾಗಗಳ ಕೊಠಡಿಗಳಿಗೆ ನಾಮಫಲಕ ಇಲ್ಲದಿರುವುದು, ನೌಕರರ ಮೇಜಿನ ಮೇಲೆ ಪದನಾಮ ಇಲ್ಲದಿರುವುದು, ಅಟಲ್ ಜೀ ಸ್ನೇಹ ಕೌಂಟರ್ನಲ್ಲಿ ಟೋಕನ್ ವ್ಯವಸ್ಥೆ ಇಲ್ಲದಿರುವುದು, ಸರಕಾರಿ ಹಾಗೂ ಹೊರಗುತ್ತಿಗೆ ನೌಕರರು ಗುರುತಿ ಚೀಟಿ ಧರಿಸದೆ ಇರುವುದು, ನೌಕರರ ಸ್ಥಳದಲ್ಲಿ ಮಧ್ಯವರ್ತಿಗಳು ಅನಧಿಕೃತವಾಗಿ ಇರುವುದು, ಅನಧಿಕೃತ ವ್ಯಕ್ತಿಗಳ ಕೈಯಲ್ಲಿ ಸರಕಾರಿ ದಾಖಲೆ ಇರುವುದು, ಸರಕಾರಿ ಸಿಬಂದಿ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸದೆ ಇರುವುದು, ಹಾಜರಾತಿ ಪಟ್ಟಿ ಇಲ್ಲದೆ ಇರುವುದು ಸೇರಿದಂತೆ ವಿವಿಧ ಬೇಡಿಕೆ ಹಾಗೂ ಕಾರ್ಯ ವೈಖರಿಗಳಲ್ಲಿನ ಲೋಪದೋಷಗಳನ್ನು ಸರಿಪಡಿ ಸುವಂತೆ ಮನವಿ ನೀಡಿದರು.