ಬ್ಯಾಂಕ್ ದಾಖಲೆ ಕೇಳಿ ಹಣ ಗುಳುಂ ಮಾಡುವ ದಂಧೆ…ಎಚ್ಚರ.!
Team Udayavani, Apr 7, 2020, 1:12 PM IST
ಬಂಟ್ವಾಳ : ಕೋವಿಡ್-19 ಸಂಕಷ್ಟದ ಹಿನ್ನೆಲೆಯಲ್ಲಿ ನಿಮಗೆ ಸರಕಾರದಿಂದ ಹಣ ಬಂದಿದೆ ಎಂದು ದೂರವಾಣಿ ಮೂಲಕ ಕರೆ ಮಾಡಿ ಖಾತೆಯಿಂದ ಹಣ ಗುಳುಂ ಮಾಡುವ ದಂಧೆ ನಡೆಯುತ್ತಿದ್ದು, ಈ ಕುರಿತು ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಜತೆಗೆ ಯಾರಿಗೂ ಕೂಡ ಅಂತಹ ದಾಖಲೆ ನೀಡದಂತೆಯೂ ಪೊಲೀಸ್ ಇಲಾಖೆ ಮನವಿ ಮಾಡುತ್ತಿದೆ.
ಬಂಟ್ವಾಳ ತಾಲೂಕಿನ ಅರಳದ ವ್ಯಕ್ತಿಯೊಬ್ಬರಿಗೆ ಅಂತಹ ಕರೆ ಬಂದಿದ್ದು, ಅವರು ಮಾಹಿತಿ ಕೇಳಿದ ಸ್ವಲ್ಪ ಹೊತ್ತಿನಲ್ಲೇ ಅವರ ಖಾತೆಯಿಂದ 10 ಸಾವಿರ ರೂ.ಗಳು ಹೋಗಿದೆ. ಅದೇ ರೀತಿ ಮತ್ತೊಬ್ಬರಿಗೂ ಕರೆ ಬಂದಿದ್ದು, ಆದರೆ ಅವರ ದಾಖಲೆ ನೀಡದೆ ಬಚಾವಾಗಿದ್ದಾರೆ. ಹಣ ಕಳೆದುಕೊಂಡಿರುವವರು ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.