”ರಸ್ತೆಗಿಳಿಯಬೇಡಿ ಅಣ್ಣಂದಿರಾ”: ಮಂಗಳಮುಖಿಯರಿಂದ ರಾಕಿ ಕಟ್ಟಿ ಜಾಗೃತಿ
Team Udayavani, Apr 6, 2020, 2:20 PM IST
ಕೊಪ್ಪಳ: ಕೋವಿಡ್-19 ವೈರಸ್ ಉಲ್ಭಣದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯು ಸಂಪೂರ್ಣ ಲಾಕ್ ಡೌನ್ ಆಗಿದೆ. ಆದರೆ ಜನ ನಿಯಮ ಉಲ್ಲಂಘನೆ ಮಾಡಿ ನಗರದಲ್ಲಿ ಸಂಚಾರ ನಡೆಸುತ್ತಿದ್ದು, ಮಂಗಳಮುಖಿಯರು ಇದನ್ನು ಗಮನಿಸಿ ರಸ್ತೆಗಿಳಿದು ಬೈಕ್ ನಲ್ಲಿ ಸುತ್ತಾಟ ನಡೆಸುವ ಜನರನ್ನು ತಡೆದು ಹಣೆಗೆ ಕುಂಕುಮ ಹಚ್ಚಿ ಕೈಗೆ ರಾಕಿ ಕಟ್ಟುವ ಮೂಲಕ ಅಣ್ಣಂದಿರಾ ಬೈಕ್ ನಲ್ಲಿ ಸುತ್ತಾಡಬೇಡಿ. ಕೋವಿಡ್-19 ವೈರಸ್ ನಿಯಂತ್ರಣಕ್ಕೆ ಎಲ್ಲರೂ ಮನೆಯಲ್ಲೇ ಇರಿ ಎಂದು ಮನವಿ ಮಾಡಿದರು.
ನಗರದ ಪೊಲೀಸರು ಸೇರಿದಂತೆ ಕೆಲವು ಸ್ವಯಂ ಸೇವಕರೂ ಮಂಗಳಮುಖಿಯರ ಈ ಕಾರ್ಯಕ್ಕೆ ಸಾಥ್ ನೀಡಿದರು.
ಜಿಲ್ಲೆಯಲ್ಲಿ ಲಾಕ್ ಡೌನ್ ಇದ್ದರೂ ಸಹಿತ ಜನರು ಸುತ್ತಾಡುವುದನ್ನ ನಿಲ್ಲಿಸಿಲ್ಲ. ಇದರಿಂದ ರೋಸಿ ಹೋಗಿರುವ ಪೊಲೀಸರು ಹಲವು ಬಾರಿ ಬೆತ್ತದ ರುಚಿ ತೋರಿಸಿದ್ದಾರೆ. ಇನ್ನು ಬೈಕ್ ಸವಾರರು ರಸ್ತೆಗೆ ಬಾರದಂತೆ ಮಂಗಳಾರತಿ, ದೃಷ್ಠಿ ತೆಗೆದು ಕಾಯಿ ಹೊಡೆದು ಜಾಗೃತಿ ಮೂಡಿಸಿದ್ದಾರೆ.
ಸ್ವತಃ ಜಿಲ್ಲಾಧಿಕಾರಿ ಸುನೀಲ್ ಕುಮಾರ ಅವರೇ ರಸ್ತೆಗಿಳಿದು ಬೈಕ್ ನಲ್ಲಿ ಸುತ್ತಾಟ ನಡೆಸುವ ಜನರಿಗೆ ಎಚ್ಚರಿಕೆ ನೀಡಿದರು.