ಯಾರೋ ದೆಹಲಿಗೆ ಹೋದ್ರೆ ಅದಕ್ಕೆ ನಾನು ಉತ್ತರ ಕೊಡುವುದಕ್ಕೆ ಆಗಲ್ಲ : ಬಿ ಸಿ ಪಾಟೀಲ್
Team Udayavani, Jun 6, 2021, 2:35 PM IST
ಶಿವಮೊಗ್ಗ : ಹೈಕಮಾಂಡ್ ಹೇಳಿದರೆ ಆ ಕ್ಷಣವೇ ರಾಜೀನಾಮೆ ನೀಡುತ್ತೇನೆ ಸಿಎಂ ಬಿಎಸ್ ವೈ ಹೇಳಿಕೆ ವಿಚಾರವಾಗಿ ಮಾತನಾಡಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್, ಈ ವಿಷಯ ನನಗೆ ಈಗಲೇ ಗೊತ್ತಾಗಿದ್ದು, ಇದು ಯಾವುದು ನನ್ನ ಗಮನಕ್ಕೆ ಬಂದಿಲ್ಲ. ಅದನ್ನು ತೀರ್ಮಾನ ಮಾಡಲಿಕ್ಕೆ ದೊಡ್ಡವರು ಇದ್ದಾರೆ. ಮುಖ್ಯಮಂತ್ರಿ ಇದ್ದಾರೆ ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದು ಯಾವುದು ನನ್ನ ಗಮನಕ್ಕೆ ಬಾರದೇ ನಾನು ಹೇಗೆ ರಿಯಾಕ್ಟ್ ಮಾಡಲಿ ಎಂದು ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ದೆಹಲಿಗೆ ಯಾರು ಯಾರು ಏನು ವಿಷಯಕ್ಕೆ ಹೋಗಿರುತ್ತಾರೋ ಗೊತ್ತಿಲ್ಲ. ಯಾವುದೇ ಕಾರಣಕ್ಕು ಮುಖ್ಯಮಂತ್ರಿ ಬದಲಾವಣೆ ಇಲ್ಲ ಅಂತಾ ರಾಜ್ಯಾಧ್ಯಕ್ಷರು ಕಟೀಲ್ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಇದೆಲ್ಲಾ ಊಹಾಪೋಹಾ ಈ ಬಗ್ಗೆ ಮಂತ್ರಿಗಳು, ಶಾಸಕರು ಮಾತನಾಡೋದು ಸರಿಯಲ್ಲ ಅಂತಾ ಸ್ಪಷ್ಟವಾಗಿ ಹೇಳಿದ್ದಾರೆ.
ಈಶ್ವರಪ್ಪ, ಶೆಟ್ಟರ್ ಅವರು ಸಹ ಹೇಳಿದ್ದಾರೆ ಯಡಿಯೂರಪ್ಪ ಅವರೇ ಮುಂದುವರಿಯುತ್ತಾರೆ ಅಂತಾ. ಯಾರೋ ದೆಹಲಿಗೆ ಹೋದರೆ, ಯಾರೋ ಬೀದಿಯಲ್ಲಿ ಮಾತಾಡಿದ್ರೆ ಅದಕ್ಕೆ ನಾನು ಉತ್ತರ ಕೊಡುವುದಕ್ಕೆ ಆಗಲ್ಲ. ಯತ್ನಾಳ್ ಆರೋಪ ಇವತ್ತು ನಿನ್ನೆಯದ್ದಾ ಅದು ದಿನ ಇರುತ್ತೆ. ಬೆಳಗ್ಗೆಯಿಂದ ಸಂಜೆಯವರೆಗೆ ಇರುತ್ತೆ ಎಂದು ಬಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.