ಬ್ಯಾಕ್ ಟು ಪೇಯ್ನ್: ಹರೆಯದಲ್ಲೇ ವೃದ್ಧಾಪ್ಯದ ಅನುಭವ!
Team Udayavani, May 19, 2020, 5:38 AM IST
ಬೆನ್ನು ನೋವಿನ ತೊಂದರೆ ಅನುಭವಿಸದವರು ಯಾರಿದ್ದಾರೆ? ಮೂಗು ಇರೋತನಕ ನೆಗಡಿ, ಬೆನ್ನು ಇರೋ ತನಕ ನೋವು ಇದ್ದೇ ಇರುತ್ತದೆ ಅನ್ನಿ. ಬೆನ್ನು ನೋವು ಬರುವುದು ವಿಟಮಿನ್ ಬಿ ಕಡಿಮೆ ಆದಾಗ. ಬೆನ್ನು ನೋವಿಗೆ, ಅಜೀರ್ಣ ಕೂಡ ಕಾರಣ ಆಗುತ್ತದೆ. ಹೀಗಾಗಿ, ಬೆಳ್ಳುಳ್ಳಿಯನ್ನು ಆಹಾರದಲ್ಲಿ ಬಳಸಿದರೆ ಅಜೀರ್ಣ, ಮಲಬದತೆ ಕಡಿಮೆಯಾಗುತ್ತದೆ. ಬಸಳೆ, ಸಬ್ಬಸಿಗೆ ಸೊಪ್ಪುಗಳನ್ನು ಆಹಾರದಲ್ಲಿ ಹೆಚ್ಚಾಗಿ ಬಳಸಿದರೂ, ಬೆನ್ನು ನೋವಿನ ನಿವಾರಣೆ ಸಾಧ್ಯವಿದೆ. ನಿದ್ರೆ ಇಲ್ಲ ಅಂದರೆ, ಅಸಿಡಿಟಿ ಶುರುವಾಗುತ್ತದೆ.
ಇದು ಹೆಚ್ಚಾಗುತ್ತಿದ್ದಂತೆ, ಬೆನ್ನು ನೋವು ಕಾಡಲು ಶುರು ಮಾಡುತ್ತದೆ. ಬೆನ್ನುನೋವು ಇದ್ದಾಗ, ದಿಂಬು ಇಲ್ಲದೆಯೇ, ಚಾಪೆಯ ಮೇಲೆ ಮಲಗಿ ನೋಡಿ. ಮಲಗುವಾಗ ಕೂಡ ಎಚ್ಚರ. ನಿಮಗೆ ಆರಾಮದಾಯಕ ಭಂಗಿಯಲ್ಲಿ ಮಲಗಿದರೆ ಮಾತ್ರ ನೋವು ಕಡಿಮೆಯಾಗುವುದು. ಇಲ್ಲವಾದರೆ, ಮತ್ತಷ್ಟು ಹೆಚ್ಚಾಗುತ್ತದೆ. ಹಾಸಿಗೆಯಲ್ಲಿ ಗಂಟುಗಳಿದ್ದರೆ, ಚಾಪೆಯ ಆಚೀಚೆ ಏನಾದರೂ ಒತ್ತುತ್ತಿರುವಂಥ ವಸ್ತುಗಳಿದ್ದಾಗ ಕೂಡ, ಬೆನ್ನು ನೋವು ಹೆಚ್ಚಾಗಬಹುದು. ಹಾಗಾಗಿ, ಬೆನ್ನು ನೋವು ಜೊತೆಯಾದಾಗ, ಒಂದು ಟವಲ್ ಅಥವಾ ಜಮಖಾನ ಹಾಸಿಕೊಂಡು, ಹತ್ತಿಪ್ಪತ್ತು ನಿಮಿಷ ನೆಲದ ಮೇಲೆ ಮಲಗುವುದೇ ಕ್ಷೇಮಕರ.
ಬೆನ್ನು ನೋವು ಹೆಚ್ಚಾದಾಗ ಆಗುವ ಯಾತನೆ, ದೇವರಿಗೇ ಪ್ರೀತಿ. ಹರೆಯದಲ್ಲೇ ವೃದ್ಧಾಪ್ಯದ ಅನುಭವ ಆಗುವುದೇ ಈ ಸಂದರ್ಭದಲ್ಲಿ. ಆಗ ಕೂರುವುದಕ್ಕೂ ಆಗುವುದಿಲ್ಲ. ಎದ್ದು ನಿಲ್ಲುವುದಕ್ಕೂ ಸಾಧ್ಯವಿರಲ್ಲ. ಇಂಥ ಬೆನ್ನುನೋವಿನಿಂದ ಮುಕ್ತರಾಗ ಬೇಕಿದ್ದರೆ, ದಿನಾ ಬೆಳಗ್ಗೆ ಪ್ಪದೇ ಸೂರ್ಯ ನಮಸ್ಕಾರ ಮಾಡಿ. ಆದರೆ, ಬೆನ್ನು ನೋವು ಇದ್ದಾಗಲೇ ಸೂರ್ಯ ನಮಸ್ಕಾರ ಮಾಡುವ ರಿಸ್ಕ್ ತೆಗೆದುಕೊಳ್ಳಬೇಡಿ.