ದೇವರ ಕಲ್ಲು ಎಂದು ಕರಿ ಕಲ್ಲು ಮಾರಾಟ ಮಾಡಿ 5 ಲಕ್ಷ ವಂಚನೆ : ಓರ್ವನ ಬಂಧನ
Team Udayavani, Jan 22, 2022, 5:25 PM IST
ಬಾಗಲಕೋಟೆ : ಬದುಕಿನಲ್ಲಿ ಒಳ್ಳೆಯದಾಗಲು ಸುಲೇಮಾನ ಸ್ಟೋನ್ (ದೇವರ ಕಲ್ಲು) ಕೊಡುವುದಾಗಿ ಹೇಳಿ ಮೋಸದ ಮಾಡಿದ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು, ಆತನಿಂದ
5 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.
ಅಶೋಕ ರೇವಣಸಿದ್ದಪ್ಪ ಇಂಡಿ ಎಂಬುವವರಿಗೆ ಅಜಯ ಎಂಬ ಹೆಸರಿನ ವ್ಯಕ್ತಿ ಯೂಟೂಬ್ನಲ್ಲಿ ಸುಲೇಮಾನ ಸ್ಟೋನ್ ಎಂಬ ದೇವರ (ದೈವಿ) ಕಲ್ಲನ್ನು ಮಾರಾಟ ಮಾಡುವುದಾಗಿ ದೂರವಾಣಿ ಸಂಖ್ಯೆಯ ಸಮೇತ ವಿವರ ಹಾಕಿದ್ದ. ಈ ಕಲ್ಲನ್ನು ನಮ್ಮ ಬಳಿ ಇಟ್ಟುಕೊಂಡರೆ ಯಾವುದೇ ರೀತಿಯ ಅಪಘಾತವಾಗಲ್ಲ. ಯಾರೂ ನಮ್ಮ ಮೇಲೆ ದಾಳಿ ನಡೆಸಲ್ಲ. ಜೀವನದಲ್ಲಿ ಒಳ್ಳೆಯದಾಗುತ್ತದೆ. ಹಿಂದೆ ರಾಜ-ಮಹಾರಾಜರೆಲ್ಲ ಈ ದೈವಿ ಕಲ್ಲನ್ನು ಬಳಸುತ್ತಿದ್ದರು ಎಂದು ನಂಬಿಸಿ, 7 ಲಕ್ಷ ಮೊತ್ತಕ್ಕೆ ದೈವಿ ಕಲ್ಲನ್ನು ನೀಡುವುದಾಗಿ ಮೋಸದಿಂದ ಅಶೋಕ ಅವರನ್ನು ಬಾಗಲಕೋಟೆಗೆ ಕರೆಸಿ ಮೋಸ ಮಾಡಿದ್ದ. ಬಾಗಲಕೋಟೆಗೆ ಕರೆಸಿದ್ದಾಗ 5 ಲಕ್ಷ ನಗದು, ಒಂದು ಚಿನ್ನದ ಬ್ರಾಸ್ ಲೆಟ್ ನೀಡುವ ಜತೆಗೆ ಸುಲೇಮಾನ ಸ್ಟೋನ್ ಎಂದು ನಂಬಿಸಿ ಒಂದು ಕರಿ ಕಲ್ಲನ್ನು ನೀಡಿದ್ದ.
ಈ ಕುರಿತು ಅಶೋಕ ಅವರು ಬಾಗಲಕೋಟೆ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಾಗಲಕೋಟೆ ಉಪ ವಿಭಾಗದ ಡಿವೈಎಸ್ಪಿ ಚಂದ್ರಕಾಂತ ನಂದರಡ್ಡಿ ಮಾರ್ಗದರ್ಶನದಲ್ಲಿ
ಶಹರ ಠಾಣೆಯ ಇನ್ಸಪೆಕ್ಟರ್ ವಿಜಯ ಮುರಗುಂಡಿ, ಎಎಸ್ಐ ವಿ.ಕೆ. ಕುಲಕರ್ಣಿ, ಸಿಬ್ಬಂದಿಎಂಡಿ ಸೌದಿ, ವಿ.ಬಿ. ಹಾದಿಮನಿ, ಮುತ್ತು ಅಜಮನಿ, ನಾಸೀರ ಬೀಳಗಿ ಅವರು ತನಿಖೆ ಕೈಗೊಂಡು,
ಆರೋಪಿ ನಗರದ ಕೆಂಪು ರಸ್ತೆಯ ಬಳಿಯ ನಿವಾಸಿ ಸಮೀರ (ಅಜಯ) ಜಾಫರ ಜಹಾಗೀರದಾರ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿತ ಸಮೀರನಿಂದ ಒಂದು ಬೈಕ್, 5 ಲಕ್ಷ ನಗದು, ಒಂದು ಚಿನ್ನದ ಬ್ರೆಸಲೇಟ್ ಕೂಡ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ : ಸಂಪುಟ ವಿಸ್ತರಣೆ ಸದ್ಯಕ್ಕೆ ಡೌಟ್, ಪಂಚರಾಜ್ಯ ಚುನಾವಣೆ ಬ್ರೇಕ್