ಬಾಗಲಕೋಟೆ : ಕಾಲುವೆಗೆ ಬಿದ್ದ ಬಾಲಕನ ಶವ ಎರಡು ದಿನದ ಬಳಿಕ ಪತ್ತೆ
Team Udayavani, Oct 14, 2019, 8:15 PM IST
ಬಾಗಲಕೋಟೆ : ತಾಲೂಕಿನ ಕಲಾದಗಿ ಬಳಿ ಶನಿವಾರ ಕಾಲುವೆಯಲ್ಲಿ ಈಜುಲು ಹೋಗಿದ್ದ ಬಾಲಕ, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಸತತ ಎರಡು ದಿನಗಳ ನಿರಂತರ ಶೋಧನೆಯ ಬಳಿಕ ಬಾಲಕನ ಶವ ಪತ್ತೆಯಾಗಿದೆ.
ಹೆರಕಲ್ ಏತ ನೀರಾವರಿ ಹಾಗೂ ಕೆರೆ ತುಂಬುವ ಯೋಜನೆಗೆ ಘಟಪ್ರಭಾ (ಆಲಮಟ್ಟಿ ಹಿನ್ನೀರು) ನದಿಯಿಂದ ನೀರು ಪಡೆಯಲು ತಾಲೂಕಿನ ಕಲಾದಗಿ ಬಳಿ ಜಾಕವೆಲ್ ನಿರ್ಮಿಸಿದ್ದು, ಈ ಹಿನ್ನೀರ ಪ್ರದೇಶದಿಂದ ಜಾಕವೆಲ್ ವರೆಗೆ ಕಾಲುವೆ ನಿರ್ಮಿಸಲಾಗಿದೆ. ಶನಿವಾರ ಈ ಕಾಲುವೆಯಲ್ಲಿ ಈಜುಲು ಹೋಗಿದ್ದ ಕಲಾದಗಿ ಜನತಾ ಪ್ಲಾಟ್ನ 7ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ಸಾಧಿಕ್ ಯಾಸೀನ್ ಮಕಾನದಾರ (13) ಎಂಬ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ.
ಅಗ್ನಿ ಶಾಮಕ ಸಿಬ್ಬಂದಿ, ನುರಿತ ಈಜುಗಾರರು ಕಳೆದ ಎರಡು ದಿನಗಳಿಂದ ಬಾಲಕನ ಶವಕ್ಕಾಗಿ ಶೋಧ ನಡೆಸಿದ್ದರು. ಸೋಮವಾರ ಸಂಜೆ, ಬಾಲಕನ ಶವ ಕಾಲುವೆಯಲ್ಲಿ ಕಂಡು ಬಂದಿದ್ದು, ಸಿಬ್ಬಂದಿ ಹೊರ ತೆಗೆದು, ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಕ್ಕೆ ಒಪ್ಪಿಸಿದರು.