ಕೊರೊನಾ ಸೋಂಕು ಹೆಚ್ಚಳ: ಮುಕ್ತ ನ್ಯಾಯಾಲಯ ಕಲಾಪ ರದ್ದು
Team Udayavani, Jul 1, 2020, 8:53 AM IST
ಬೆಂಗಳೂರು: ನಗರದಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಕೀಲರು ಹಾಗೂ ಕೋರ್ಟ್ ಸಿಬಂದಿಯ ಸುರಕ್ಷತೆ ಹಿತದೃಷ್ಟಿಯಿಂದ ಹೈಕೋರ್ಟ್ನ ಬೆಂಗಳೂರು ಪ್ರಧಾನ ಪೀಠದಲ್ಲಿ ಫಿಸಿಕಲ್ (ಮುಕ್ತ ನ್ಯಾಯಾಲಯ) ಕಲಾಪಗಳನ್ನು ರದ್ದುಪಡಿಸಲಾಗಿದೆ.
ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಅವರ ಸೂಚನೆ ಮೇರೆಗೆ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಮಂಗಳ
ವಾರ ನೋಟಿಸ್ ಹೊರಡಿಸಿದ್ದು, ತುರ್ತು ಪ್ರಕರಣಗಳನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತ್ರ ವಿಚಾರಣೆ ನಡೆಸಲಾಗುವುದು. ಇದೇ ವೇಳೆ ಈ ಹಿಂದೆ ಪ್ರಕಟಿಸಿರುವ ವೇಳಾಪಟ್ಟಿಯಂತೆ ಧಾರವಾಡ ಹಾಗೂ ಕಲಬುರಗಿ ನ್ಯಾಯಪೀಠಗಳು ಕಾರ್ಯನಿರ್ವಹಣೆ ಮಾಡಲಿವೆ ಎಂದು ತಿಳಿಸಲಾಗಿದೆ.