ಸಾಹಾಗೆ ಬೆದರಿಕೆಯೊಡ್ಡಿದ ಪತ್ರಕರ್ತ ಮಜುಂದಾರ್ ಗೆ 2 ವರ್ಷ ನಿಷೇಧ
Team Udayavani, May 5, 2022, 12:00 AM IST
ಮುಂಬಯಿ: ಟೀಮ್ ಇಂಡಿಯಾದ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾಗೆ ಬೆದರಿಕೆಯೊಡ್ಡಿದ ಪತ್ರಕರ್ತ ಬೋರಿಯಾ ಮಜುಂದಾರ್ ಅವರಿಗೆ ಬಿಸಿಸಿಐ ಎರಡು ವರ್ಷಗಳ ನಿಷೇಧ ಹೇರಿದೆ. ಸಂದರ್ಶನ ನೀಡದ ಕಾರಣಕ್ಕಾಗಿ ಸಾಹಾಗೆ ಮಜುಂದಾರ್ ಬೆದರಿಕೆಯೊಡ್ಡಿದ್ದರು.
ಖ್ಯಾತ ಕ್ರೀಡಾ ಪತ್ರಕರ್ತರಾಗಿರುವ ಬೋರಿಯಾ ಮಜುಂದಾರ್ ಅವರಿನ್ನು 2 ವರ್ಷಗಳ ಕಾಲ ಕ್ರಿಕೆಟ್ ವರದಿಗಾರಿಕೆ ಮಾಡುವಂತಿಲ್ಲ. ಹಾಗೆಯೇ ಯಾವುದೇ ಭಾರತೀಯ ಕ್ರಿಕೆಟಿಗರನ್ನು ಸಂದರ್ಶಿಸುವಂತಿಲ್ಲ. ಹಾಗೆಯೇ ಬಿಸಿಸಿಐ ಸದಸ್ಯ ಅಥವಾ ರಾಜ್ಯ ಕ್ರಿಕೆಟ್ ಮಂಡಳಿಗಳ ಅಧಿಕಾರಿಗಳೊಂದಿಗೆ ಸಂವಹನವನ್ನೂ ನಡೆಸುವಂತಿಲ್ಲ.
ತ್ರಿಸದಸ್ಯ ಸಮಿತಿ
ಇದರ ತನಿಖೆಗಾಗಿ ಬಿಸಿಸಿಐ ಫೆ. 25ರಂದು ತ್ರಿಸದಸ್ಯ ಸಮಿತಿಯೊಂದನ್ನು ರಚಿಸಿತ್ತು. ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಖಜಾಂಚಿ ಅರುಣ್ ಸಿಂಗ್ ಧುಮಾಲ್ ಮತ್ತು ಕೌನ್ಸಿಲರ್ ಪ್ರಭ್ತೇಜ್ ಸಿಂಗ್ ಭಾಟಿಯಾ ಈ ಸಮಿತಿಯ ಸದಸ್ಯರಾಗಿದ್ದರು. ಸಮಿತಿಯು ಮಜುಂದಾರ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಿದೆ. ಫೆ. 23ರಂದು ಸಾಹಾ ಟ್ವೀಟ್ ಮೂಲಕ ಪತ್ರಕರ್ತನಿಂದ ತನಗಾದ ತೊಂದರೆಯನ್ನು ಹೇಳಿಕೊಂಡಿದ್ದರು. ಆದರೆ ಆ ಪತ್ರಕರ್ತನ ಹೆಸರನ್ನು ಬಹಿರಂಗಗೊಳಿಸಿರಲಿಲ್ಲ. ವಿಚಾರಣೆ ವೇಳೆ ಬೋರಿಯಾ ಮಜುಂದಾರ್ ಹೆಸರು ಹೊರಬಿತ್ತು.