ವಿಶ್ವ ವಿಜೇತ ಕಿರಿಯ ಕ್ರಿಕೆಟಿಗರಿಗೆ ಬಿಸಿಸಿಐ ಸಮ್ಮಾನ
Team Udayavani, Feb 8, 2022, 5:00 AM IST
ಹೊಸದಿಲ್ಲಿ: ಅಂಡರ್-19 ವಿಶ್ವಕಪ್ ಗೆದ್ದ ಯಶ್ ಧುಲ್ ಸಾರಥ್ಯದ ಭಾರತ ತಂಡಕ್ಕೆ ಈಗಾಗಲೇ ಬಿಸಿಸಿಐ ಭಾರೀ ಬಹುಮಾನ ಘೋಷಿಸಿದೆ.
ತಂಡದ ಪ್ರತಿಯೊಬ್ಬ ಆಟಗಾರನಿಗೆ ತಲಾ 40 ಲಕ್ಷ ರೂ., ಸಹಾಯಕ ಸಿಬಂದಿಗೆ ತಲಾ 25 ಲಕ್ಷ ರೂ. ನಗದು ಬಹುಮಾನ ನೀಡಲಿದೆ. ಇದರ ಬೆನ್ನಲ್ಲೇ ತಂಡ ಭಾರತಕ್ಕೆ ಮರಳಿದ ಬಳಿಕ ಅದ್ಧೂರಿ ಸಮ್ಮಾನ ಸಮಾರಂಭ ಏರ್ಪಡಿಸುವುದಾಗಿ ತಿಳಿಸಿದೆ.
ಈ ಸಮಾರಂಭ ಅಹ್ಮದಾಬಾದ್ನಲ್ಲಿ ನಡೆಯಲಿದೆ. ಆದರೆ ದಿನಾಂಕವಿನ್ನೂ ನಿಗದಿಯಾಗಿಲ್ಲ. ಈ ಸಂದರ್ಭದಲ್ಲಿ ವಿಶ್ವವಿಜೇತರು ಭಾರತದ ಸೀನಿಯರ್ ತಂಡವನ್ನು ಭೇಟಿಯಾಗುವುದು ಕೂಡ ಖಾತ್ರಿಯಾಗಿಲ್ಲ. ವೆಸ್ಟ್ ಇಂಡೀಸ್ ಎದುರಿನ ಏಕದಿನ ಸರಣಿಗಾಗಿ ರೋಹಿತ್ ಶರ್ಮ ನಾಯಕತ್ವದ ಟೀಮ್ ಇಂಡಿಯಾ ಸದ್ಯ ಅಹ್ಮದಾಬಾದ್ನಲ್ಲೇ ಇದೆ. ಫೆ. 11ರಂದು ಅಂತಿಮ ಪಂದ್ಯ ನಡೆಯಲಿದ್ದು, ಅನಂತರ ರೋಹಿತ್ ಪಡೆ ಕೋಲ್ಕತಾಕ್ಕೆ ತೆರಳಲಿದೆ.
ಗಯಾನಾದಲ್ಲಿ ಔತಣ
ಅಂಡರ್-19 ತಂಡಕ್ಕೆ ಗಯಾನಾದ ಭಾರತೀಯ ರಾಯಭಾರ ಕಚೇರಿಯಲ್ಲಿ ವಿಶೇಷ ಔತಣ ಕೂಟವನ್ನು ಏರ್ಪಡಿಸ ಲಾಯಿತು. ಭಾರತೀಯ ಕಾಲಮಾನ ಪ್ರಕಾರ ತಂಡ ಸೋಮವಾರ ಬೆಳಗ್ಗೆ ಗಯಾನಾದಿಂದ ಭಾರತದತ್ತ ಹೊರ ಟಿದೆ. ಇದೊಂದು ಸುದೀರ್ಘ ಪ್ರಯಾಣ ವಾಗಿದ್ದು, ಆ್ಯಮ್ಸ್ಟರ್ಡಮ್ ಮೂಲಕ ಬೆಂಗಳೂರಿಗೆ ಬಂದು, ಅಲ್ಲಿಂದ ಅಹ್ಮದಾಬಾದ್ಗೆ ಆಗಮಿಸಬೇಕಿದೆ.
ಆದರೆ ಭಾರತಕ್ಕೆ ಆಗಮಿಸಿದ ಬಳಿಕ ಕ್ರಿಕೆಟಿಗರಿಗೆ ಸುದೀರ್ಘ ವಿಶ್ರಾಂತಿಯ ಅಗತ್ಯವಿದ್ದು, ಅನಂತರವೇ ಸಮ್ಮಾನ ಸಮಾರಂಭ ಏರ್ಪಡಲಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಪ್ರೊ ಕಬಡ್ಡಿ : ಜೈಪುರ್ ಪಿಂಕ್ ಪ್ಯಾಂಥರ್ ಎಂಟನೇ ಗೆಲುವು
“ಇದೊಂದು ಅವಿಸ್ಮರಣೀಯ ಕ್ಷಣ. ಸೂಕ್ತ ಕಾಂಬಿನೇಶನ್ ಒಂದನ್ನು ರೂಪಿಸುವುದು ಸವಾಲಾಗಿ ಕಾಡಿತು. ಕ್ರಮೇಣ ಇದರಲ್ಲಿ ಯಶಸ್ವಿಯಾದೆವು. ನಮ್ಮ ಯಶಸ್ಸಿನಲ್ಲಿ ತಂಡದ ಸಹಾಯಕ ಸಿಬಂದಿಯ ಪಾತ್ರ ಮಹತ್ವದಾಗಿತ್ತು. ಅವರಿಗೆ ಕೃತಜ್ಞತೆಗಳು’ ಎಂಬುದಾಗಿ ನಾಯಕ ಯಶ್ ಧುಲ್ ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದರು.
ಭಾರತದ ಮಾಜಿ ಕ್ರಿಕೆಟಿಗರಾದ ಹೃಷಿಕೇಶ್ ಕಾನಿಟ್ಕರ್ ತಂಡದ ಪ್ರಧಾನ ಕೋಚ್ ಆಗಿದ್ದರು. ಮಾಜಿ ಸ್ಪಿನ್ನರ್ ಸಾಯಿರಾಜ್ ಬಹುತುಳೆ ಕೂಡ ಈ ತಂಡದಲ್ಲಿದ್ದರು.
ಇವರೆಲ್ಲರಿಗಿಂತ ಮಿಗಿಲಾಗಿ, ಮಾಜಿ ಆಟಗಾರ, ಎನ್ಸಿಎಯ ಹಾಲಿ ಅಧ್ಯಕ್ಷ ವಿವಿಎಸ್ ಲಕ್ಷ್ಮಣ್ ತಂಡದ ಮೆಂಟರ್ ಆಗಿದ್ದುದು ಕಿರಿಯ ಕ್ರಿಕೆಟಿಗರ ಆತ್ಮವಿಶ್ವಾಸವನ್ನು ಹೆಚ್ಚಿಸುವಂತೆ ಮಾಡಿತು.