ಟಿ20 ವಿಶ್ವಕಪ್ ವಿಳಂಬನೀತಿ: ಐಸಿಸಿ ವಿರುದ್ಧ ಬಿಸಿಸಿಐ ಅಸಮಾಧಾನ
Team Udayavani, Jun 23, 2020, 5:45 AM IST
ಹೊಸದಿಲ್ಲಿ: ಟಿ20 ವಿಶ್ವಕಪ್ ಪಂದ್ಯಾವಳಿ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವಲ್ಲಿ ಐಸಿಸಿ ವಿಳಂಬನೀತಿ ಅನುಸರಿಸುತ್ತಿರುವ ಬಗ್ಗೆ ಬಿಸಿಸಿಐ ಗರಂ ಆಗಿದೆ.
ನಿರ್ಗಮನ ಅಧ್ಯಕ್ಷ, ಭಾರತದವರೇ ಆದ ಶಶಾಂಕ್ ಮನೋಹರ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇದರಿಂದ ಐಪಿಎಲ್ ಆಯೋಜನೆಗೆ ಹಿನ್ನಡೆ ಆಗುತ್ತಿರುವುದು ಬಿಸಿಸಿಐ ಗಡಿಬಿಡಿಗೆ ಕಾರಣ.
ಈಗಾಗಲೇ ಕ್ರಿಕೆಟ್ ಆಸ್ಟ್ರೇಲಿಯದ ಅಧ್ಯಕ್ಷ ಅರ್ಲ್ ಎಡ್ಡಿಂಗ್ಸ್ ಅ. 18-ನ. 15ರ ಅವಧಿಯಲ್ಲಿ ಟಿ20 ವಿಶ್ವಕಪ್ ಆಯೋಜನೆ ಕಷ್ಟ ಎಂದು ಹೇಳಿಕೆ ನೀಡಿದ್ದನ್ನು ಬಿಸಿಸಿಐ ಉಲ್ಲೇಖೀಸಿದ್ದು, ಆದರೂ ಐಸಿಸಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದಿರುವುದು ಸರಿಯಲ್ಲ ಎಂದಿದೆ.
ಒಂದು ತಿಂಗಳ ಅವಧಿ ಏಕೆ?
“ಐಸಿಸಿ ಏಕೆ ವಿಳಂಬನೀತಿ ಅನುಸರಿ ಸುತ್ತಿದೆ? ನಿರ್ಗಮನ ಅಧ್ಯಕ್ಷ ಶಶಾಂಕ್ ಮನೋಹರ್ ಸುಮ್ಮನೆ ಗೊಂದಲ ಉಂಟುಮಾಡುತ್ತಿದ್ದಾರೇಕೆ? ನಿಗದಿತ ವೇಳಾಪಟ್ಟಿಯಲ್ಲಿ ಟಿ20 ವಿಶ್ವಕಪ್ ಆಯೋಜನೆ ಕಷ್ಟ ಎಂದು ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿಯೇ ಹೇಳಿರುವಾಗ, ಈ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಲು ಐಸಿಸಿ ಒಂದು ತಿಂಗಳ ಸಮಯ ತೆಗೆದುಕೊಂಡಿರುವುದು ಏಕೆ?’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಕೇಳಿದ್ದಾರೆ.
“ಬಿಸಿಸಿಐ ವರ್ಸಸ್ ಮನೋಹರ್’ ಕದನ ಇದೇ ಮೊದಲೇನಲ್ಲ. ಬಿಸಿಸಿಐ ಮಾಜಿ ಅಧ್ಯಕ್ಷರಾಗಿದ್ದ ಮನೋಹರ್ ಆಗಲೂ ಮಂಡಳಿ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡಿದ್ದರು ಎಂದು ಅಧಿಕಾರಿ ಹೇಳಿಕೊಂಡರು.