ಇಂದಿನಿಂದ ಬೀಡಿ ಉದ್ಯಮ ಪುನರಾರಂಭ
Team Udayavani, Apr 20, 2020, 5:12 AM IST
ಸಾಂದರ್ಭಿಕ ಚಿತ್ರ..
ಮಂಗಳೂರು: ಅವಿ ಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ (ಎ. 20)ದಿಂದ ಬೀಡಿ ಉದ್ಯಮ ಪುನರಾರಂಭಗೊಳ್ಳಲಿದೆ. ಈ ಮೂಲಕ ಕರಾವಳಿಯ ಲಕ್ಷಾಂತರ ಜನರಿಗೆ ಉದ್ಯೋಗ ದೊರಕಿಸುತ್ತಿದ್ದ ಬೀಡಿ ಉದ್ಯಮದಿಂದಾಗಿ ಗ್ರಾಮೀಣ ಭಾಗದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ದ.ಕ. ಜಿಲ್ಲೆಯಲ್ಲಿ 1.90 ಲಕ್ಷ ಹಾಗೂ ಉಡುಪಿ ಜಿಲ್ಲೆಯಲ್ಲಿ 21 ಸಾವಿರದಷ್ಟು ಬೀಡಿ ಕಾರ್ಮಿಕರಿದ್ದಾರೆ. ಆದರೆ, ಕೋವಿಡ್ 19 ಹಿನ್ನೆಲೆಯಲ್ಲಿ ಬೀಡಿ ಉದ್ಯಮ ಸಂಪೂರ್ಣ ಸ್ಥಗಿತಗೊಂಡಿದ್ದು, ಬಡವರ ಜೀವನಾಧಾರಕ್ಕೆ ಸಮಸ್ಯೆಯಾಗಿತ್ತು. ಈ ಸಂಬಂಧ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಶನಿವಾರ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೀಡಿ ಕಂಪೆನಿಗಳ ಮಾಲಕರು, ಬೀಡಿ ಕಾರ್ಮಿಕ ಮುಖಂಡರ ಜತೆಗೆ ಸಭೆಯನ್ನು ನಡೆಸಿದ್ದರು. ಬೀಡಿ ಉದ್ಯಮ ಪುನರಾರಂಭಿಸುವ ಬಗ್ಗೆ ಕಾರ್ಮಿಕರು, ಕಂಟ್ರಾಕುrದಾರರು ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಸೋಮವಾರದಿಂದಲೇ ಉದ್ಯಮ ಪುನರಾರಂಭಗೊಳ್ಳಲಿದೆ. ಕಾರ್ಮಿಕರಿಗೆ ಶೇ. 50ರಷ್ಟು ಕೆಲಸ ನೀಡಲು ಮಾಲಕರು ಒಪ್ಪಿಕೊಂಡಿರುವ ಬಗ್ಗೆ ಸಚಿವರು ತಿಳಿಸಿದ್ದರು.
ಬೀಡಿ ಕಾರ್ಮಿಕರಿಗೆ ಪ್ರತೀ ವರ್ಷ ಅಷ್ಟಮಿ ಅಥವಾ ಚೌತಿ ಸಂದರ್ಭ ಬೋನಸ್ ನೀಡಲಾಗುತ್ತಿದೆ. ಈ ಸಲ ಇದನ್ನು ಸ್ವಲ್ಪ ಬೇಗನೇ ನೀಡುವಂತೆ ಮಾಲಕರನ್ನು ಕೋರಲಾಗಿದೆ. ಈ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. 15 ದಿನಗಳ ಬಳಿಕ ಮತ್ತೆ ಸಭೆ ಸೇರಿ ಬೀಡಿ ಉದ್ಯಮದ ಪ್ರಗತಿ ಪರಿಶೀಲಿಸುವ ಬಗ್ಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಬೀಡಿ ಕಾರ್ಮಿಕರಿಗೆ ಅನುಕೂಲ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರದಿಂದ ಬೀಡಿ ಉದ್ಯಮ ಪುನರಾರಂಭಗೊಳ್ಳುವುದು ಉತ್ತಮ ಬೆಳವಣಿಗೆ. ಕೋವಿಡ್ 19ದಿಂದಾಗಿ ಕೆಲಸವಿಲ್ಲದೆ ಕಂಗೆಟ್ಟಿರುವ ಬೀಡಿ ಕಾರ್ಮಿಕರಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ. ಶೀಘ್ರದಲ್ಲಿ ಕಾರ್ಮಿಕರಿಗೆ ವರ್ಷದ ಬೋನಸ್ ಕೂಡ ದೊರೆಯಲಿ.
– ಮಹಮ್ಮದ್ ರಫಿ,ಅಧ್ಯಕ್ಷರು,
ಕರ್ನಾಟಕ ಕರಾವಳಿ ಬೀಡಿ ವರ್ಕರ್ ಯೂನಿಯನ್ (ಎಚ್.ಎಂ.ಎಸ್.)