ಬಳ್ಳಾರಿಗೂ ಸುಷ್ಮಾ ಸ್ವರಾಜ್ಗೂ ಅವಿನಾಭಾವ ನಂಟು
Team Udayavani, Aug 7, 2019, 5:57 AM IST
ಬಳ್ಳಾರಿ/ಬೆಂಗಳೂರು: ವಿದೇಶಾಂಗ ಖಾತೆ ಮಾಜಿ ಸಚಿವೆ ಸುಷ್ಮಾಸ್ವರಾಜ್ ಅವರಿಗೂ ಗಣಿಜಿಲ್ಲೆ ಬಳ್ಳಾರಿಗೂ ಅವಿನಾಭಾವ ನಂಟು. 1999ರಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವ ಗೊಂಡರೂ, ಸತತ 10 ವರ್ಷ ವರಮಹಾಲಕ್ಷ್ಮೀಪೂಜೆಗೆ ಆಗಮಿಸಿ ಇಲ್ಲಿಯ ಜನರೊಂದಿಗೆ ಬೆರೆಯುತ್ತಿದ್ದರು.
ಒಂದು ಕಾಲದಲ್ಲಿ ಗಣಿಗಾರಿಕೆಯಿಂದ ರಾಜ್ಯ-ರಾಷ್ಟ್ರದ ಗಮನ ಸೆಳೆದಿದ್ದ ಬಳ್ಳಾರಿ ಮೊದಲಿನಿಂದಲೂ ಕಾಂಗ್ರೆಸ್ನ ಭದ್ರಕೋಟೆ. ಇಲ್ಲಿ ಬಿಜೆಪಿ ಭದ್ರವಾಗಿ ನೆಲೆಯೂರುವಲ್ಲಿ ಸುಷ್ಮಾ ಅವರ ಕೊಡುಗೆಯೂ ಇದೆ ಎಂದರೆ ತಪ್ಪಲ್ಲ. ಸತತ ಐದು ದಶಕಗಳ ಕಾಲ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ 1999ರಲ್ಲಿ ಅಂದಿನ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸ್ಪರ್ಧಿಸಿದ್ದರು. ಅವರ ವಿರುದ್ಧ ಬಿಜೆಪಿಯಿಂದ ಸುಷ್ಮಾ ಸ್ವರಾಜ್ ಕಣಕ್ಕಿಳಿದಿದ್ದರು. ಶಾಸಕ ಬಿ.ಶ್ರೀರಾಮುಲು ಸೇರಿ ಆಗತಾನೆ ರಾಜಕೀಯಕ್ಕೆ ಪ್ರವೇಶ ನೀಡಿದ್ದ ರೆಡ್ಡಿ ಸಹೋದರರು ಸುಷ್ಮಾ ಅವರ ಬೆನ್ನಿಗೆ ನಿಂತು ಜಿಲ್ಲಾದ್ಯಂತ ಪ್ರಚಾರ ನಡೆಸಿದ್ದರು. ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಪರಾಭವಗೊಂಡರೂ ಸೋನಿಯಾ ಅವರಿಗೆ ಸಾಕಷ್ಟು ಪೈಪೋಟಿ ನೀಡಿದ್ದರು. ಆದರೆ, ಜಿಲ್ಲೆಯಲ್ಲಿ ಬಿಜೆಪಿ ಗಟ್ಟಿಯಾಗಿ ನೆಲೆ ಕಂಡುಕೊಳ್ಳಲು ಕಾರಣರಾದರು. ಸೋನಿಯಾ-ಸುಷ್ಮಾ ಅವರ ಸ್ಪರ್ಧೆಯಿಂದಾಗಿ ದೇಶವೇ ಬಳ್ಳಾರಿಯತ್ತ ತಿರುಗಿ ನೋಡುವಂತಾಗಿತ್ತು.
1999ರ ಲೋಕಸಭೆ ಚುನಾವಣೆಯಲ್ಲಿ ಪರಭಾವಗೊಂಡರೂ ಬಳ್ಳಾರಿ ಜಿಲ್ಲೆಯಿಂದ ವಿಮುಖರಾಗದ ಸುಷ್ಮಾಸ್ವರಾಜ್ ಅವರು, ಪ್ರತಿವರ್ಷ ವರಮಹಾಲಕ್ಷ್ಮೀ ವ್ರತದಂದು ಜಿಲ್ಲೆಗೆ ಆಗಮಿಸುತ್ತಿದ್ದರು. ಜತೆಗೆ ಬಳ್ಳಾರಿ ನಗರದಲ್ಲಿ ರೆಡ್ಡಿ ಸಹೋದರರು ಬೃಹತ್ ಮಟ್ಟದಲ್ಲಿ ಆಯೋಜಿಸುತ್ತಿದ್ದ ಸಾಮೂಹಿಕ ವಿವಾಹಕ್ಕೆ ಆಗಮಿಸುತ್ತಿದ್ದ ಅವರು, ಇಲ್ಲಿನ ಖ್ಯಾತ ವೈದ್ಯರಾದ ಡಾ| ಬಿ.ಕೆ.ಶ್ರೀನಿವಾಸ್ ಅವರ ನಿವಾಸದಲ್ಲಿ ವರಮಹಾಲಕ್ಷ್ಮೀಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ಹೀಗೆ ಸತತ 10 ವರ್ಷಗಳ ಕಾಲ ಆಗಮಿಸುವ ಮೂಲಕ ಬಳ್ಳಾರಿ ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದರು. ಆದರೆ ರೆಡ್ಡಿ ಸಹೋದರರು ಅಕ್ರಮ ಗಣಿಗಾರಿಕೆ ಆರೋಪ ಹೊತ್ತ ಬಳಿಕ 2011ರಿಂದ ಜಿಲ್ಲೆಗೆ ಬರುವುದನ್ನು ನಿಲ್ಲಿಸಿದರು. ಜತೆಗೆ ರೆಡ್ಡಿ ಸಹೋದರರ ಸಂಪರ್ಕದಿಂದ ದೂರ ಉಳಿದರು.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ: 2010ರಲ್ಲಿ ರೆಡ್ಡಿ ಸಹೋದರರು ಆಯೋಜಿಸಿದ್ದ ಸಾಮೂಹಿಕ ವಿವಾಹಕ್ಕೆ ಆಗಮಿಸಿದ್ದ ಸುಷ್ಮಾ ಸ್ವರಾಜ್, ನಗರದ ಟಿಬಿ ಸ್ಯಾನಿಟೋರಿಯಂ ಆಸ್ಪತ್ರೆ ಆವರಣದಲ್ಲಿ ಇದೀಗ ಅರ್ಧಕ್ಕೆ ನಿಂತಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಜಿಲ್ಲಾ ಕ್ರೀಡಾಂಗಣವನ್ನು ಅಂತಾರಾಷ್ಟ್ರೀಯ ಕ್ರೀಡಾಂಗಣವಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಅಲ್ಲದೆ, ಕೇಂದ್ರದಲ್ಲಿ ವಾರ್ತಾ ಸಚಿವರಾಗಿದ್ದಾಗ ಜಿಲ್ಲೆಗೆ ದೂರದರ್ಶನ ಮರುಪ್ರಸಾರ ಕೇಂದ್ರ, ಬಳ್ಳಾರಿ ನಗರದಲ್ಲಿ ಎಫ್ಎಂ ರೇಡಿಯೋ ಕೇಂದ್ರ ಆರಂಭಿಸಿದ್ದರು. ಆರೋಗ್ಯ ಸಚಿವರಾಗಿ ಬೃಹತ್ ಆರೋಗ್ಯ ಮೇಳವನ್ನು ನಡೆಸಿಕೊಟ್ಟಿದ್ದರು.ಸುಷ್ಮಾಸ್ವರಾಜ್ ಅವರು, ಶ್ರೀರಾಮುಲು ಮತ್ತು ಮಾಜಿ ಸಚಿವ ಜನಾರ್ದನರೆಡ್ಡಿ ಅವರನ್ನು ಸಹೋದರರು ಎಂದು ಕರೆಯುತ್ತಿದ್ದರೆ, ರೆಡ್ಡಿ ಸಹೋದರರು ಸುಷ್ಮಾಸ್ವರಾಜ್ ಅವರನ್ನು ನಮ್ಮ ತಾಯಿ ಎಂದು ಕರೆಯುತ್ತಿದ್ದರು. 2009ರ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯ ಸಿರಗುಪ್ಪದಲ್ಲಿ ಮಾಜಿ ಜನಾರ್ದನರೆಡ್ಡಿಯವರು ಚುನಾವಣಾ ಪ್ರಚಾರ ಕಾರ್ಯ ಕ್ರಮದಲ್ಲಿ ‘ಸುಷ್ಮಾ ದೆಹಲಿಗೆ, ಸೋನಿಯಾ ಇಟಲಿಗೆ’ ಎಂದು ಹೇಳುವ ಮೂಲಕ ಸುಷ್ಮಾ ಅವರನ್ನು ಪ್ರಧಾನಿ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು.
ಅಂದಿನ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗಿಂತಲೂ ಜನಾರ್ದನರೆಡ್ಡಿ ಅವರ ಹೆಚ್ಚು ನಿಕಟವಾಗಿದ್ದರು. 2010ರಲ್ಲಿ ಜನಾರ್ದನ ರೆಡ್ಡಿ ಯಡಿಯೂರಪ್ಪ ಸರ್ಕಾರದ ಜೊತೆಗೆ ಮುನಿಸಿಕೊಂಡಾಗ ಸುಷ್ಮಾಸ್ವರಾಜ್ ಅವರೇ ಸಂಧಾನ ಮಾಡಿದ್ದರು. ಅವರ ಮಾತಿಗೆ ಮಣಿದ ರೆಡ್ಡಿ ಹೈದ್ರಾಬಾದ್ಗೆ ಕರೆದುಕೊಂಡು ಹೋದ ಎಲ್ಲಾ ಶಾಸಕರನ್ನು ವಾಪಸ್ ಕರೆದುಕೊಂಡು ಬಂದಿದ್ದರು.
ಕನ್ನಡ ಕಲಿತು ಮಾತನಾಡಿದ್ದರು
ಬಳ್ಳಾರಿಯಲ್ಲಿ ಸೋನಿಯಾ ವಿರುದ್ಧ ಸ್ಪರ್ಧಿಸಿ ಸೋತಿದ್ದ ಅವರು ಪ್ರಚಾರ ನಡೆಸಿದ್ದು ಕೇವಲ 12 ದಿನಗಳು. ಸಂದರ್ಭದಲ್ಲಿ ಅವರು ಕನ್ನಡವನ್ನು ಕಲಿತು ಚುನಾವಣಾ ಪ್ರಚಾರ ಭಾಷಣ ನಡೆಸಿದ್ದು ಅವರ ಹೆಗ್ಗಳಿಕೆ.
ಕೊಟ್ಟ ಮಾತು ತಪ್ಪಲಿಲ್ಲ
ಜನಾರ್ಧನ ರೆಡ್ಡಿ, ಮಾಜಿ ಸಚಿವ
1999ರಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ ಸೋನಿಯಾ ಗಾಂಧಿಯವರು ಕಣಕ್ಕಿಳಿದಿದ್ದ ಸಂದರ್ಭದಲ್ಲಿ ಬಿಜೆಪಿಯಿಂದ ಸುಷ್ಮಾ ಸ್ವರಾಜ್ ಸ್ಪರ್ಧಿಸಿದ್ದರು. ಅಷ್ಟು ಮಾತ್ರವಲ್ಲದೆ, ತಾವೇ ರಚಿಸಿದ್ದ ವಿದೇಶಿ ಎದುರು ಸ್ವದೇಶಿ ಎಂಬ ಸ್ಲೋಗನ್ ಅಡಿಯಲ್ಲಿ ಚುನಾವಣೆ ಎದುರಿಸಿದರು. 18 ದಿನಗಳ ಕಾಲ ಬಳ್ಳಾರಿಯಲ್ಲೇ ಇದ್ದು, ಅಂತಿಮವಾಗಿ ಸೋಲು ಕಂಡರೂ, ಅವರು ಧೃತಿಗೆಡಲಿಲ್ಲ.
ಚುನಾವಣೆ ಮುಗಿಸಿ ವಾಪಾಸ್ ಹೋಗುವ ಸಂದರ್ಭದಲ್ಲಿ ಜನಾರ್ಧನ್ ರೆಡ್ಡಿ ಹಾಗೂ ಶ್ರೀರಾಮು ಅವರು ಹೆಲಿಪ್ಯಾಡ್ ಹತ್ತಿರ ಅಳುತ್ತಿದ್ದನ್ನು ಕಂಡು ಹೆಲಿಕಾಪ್ಟರ್ ಹತ್ತಿದವರು ವಾಪಾಸ್ ಬಂದು ಅವರಿಬ್ಬರಲ್ಲೂ ಧೈರ್ಯ ತುಂಬಿದ್ದರು. ಅಷ್ಟು ಮಾತ್ರವಲ್ಲದೆ ಪ್ರತಿ ವರ್ಷ ಬಳ್ಳಾರಿಗೆ ಬರುವುದಾಗಿ ಮಾತು ಕೊಟ್ಟಿದ್ದರು.
ಅದರಂತೆ ಮುಂದಿನ 13 ವರ್ಷಗಳ ಕಾಲ ವರಮಹಾಲಕ್ಷ್ಮೀ ಪೂಜೆಯ ದಿನ ಬಳ್ಳಾರಿಗೆ ಬಂದು ಪೂಜೆ ನಡೆಸುತ್ತಿದ್ದರು. ಕೊಟ್ಟ ಮಾತನ್ನು ತಪ್ಪಿದವರಲ್ಲ. ಜನ್ಮ ಕೊಟ್ಟ ತಾಯಿಯ ನಂತರ ಪ್ರೀತಿ, ಮಮತೆ ಕೊಟ್ಟವರು ಸುಷ್ಮಾ ಸ್ವರಾಜ್, 13 ವರ್ಷ ನಮ್ಮ ಕುಟುಂಬದ ಒಡನಾಡ ಹೊಂದಿದ್ದರು.
ರಾಜಕೀಯದಲ್ಲಿದ್ದರೂ ರಾಜಕಾರಣಿಯಂತೆ ಇರಲಿಲ್ಲ. ಮಾನವೀಯತೆಯಲ್ಲಿ ದೇವರ ನಂತರದ ಸ್ಥಾನ ಪಡೆದವರಾಗಿದ್ದರು. ಮೋಸ, ಸುಳ್ಳು, ವಂಚನೆ ಇಲ್ಲದ ನಿರ್ಮಲ ಮನಸ್ಸು ಅವರದ್ದಾಗಿತ್ತು. ಅವರ ಹೋರಾಟ, ದೇಶಭಕ್ತಿ ಪ್ರೇರಣೆಯಾಗಿತ್ತು. ಅವರು ಇಂದು ನಮ್ಮೊಂದಿಗೆ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
MUST WATCH
ಹೊಸ ಸೇರ್ಪಡೆ
India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್ ಹೇಳಿಕೆಗೆ ಆಕ್ರೋಶ
North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ
Bullet train ಮೊದಲ ಬಾರಿಗೆ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್: ರೈಲ್ವೇ ಸಚಿವ ವೈಷ್ಣವ್
Mumbai Indians: ಸೂರ್ಯಕುಮಾರ್ ಶೀಘ್ರ ಚೇತರಿಕೆ ಸಾಧ್ಯತೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ