ಭಟ್ಕಳ: ಗಾಂಧಿ ಜಯಂತಿಯ ಪ್ರಯುಕ್ತ ಸ್ವಚ್ಛತಾ ಜಾಥಾ
Team Udayavani, Oct 2, 2021, 5:35 PM IST
ಭಟ್ಕಳ: ಗಾಂಧಿ ಜಯಂತಿಯ ಪ್ರಯುಕ್ತ ತಾಲೂಕಾ ಆಡಳಿತ ಹಾಗೂ ವಿವಿಧ ಇಲಾಖೆಯ ಸಹಯೋಗದಲ್ಲಿ ಪುರಸಭೆಯ ವತಿಯಿಂದ ಶನಿವಾರ ಸ್ವಚ್ಛತಾ ಜಾಥಾ ನಡೆಸಲಾಯಿತು.
ಜಾಥಾವನ್ನು ಶಂಶುದ್ದೀನ್ ವೃತ್ತದಲ್ಲಿ ಪುರಸಭಾ ಅಧ್ಯಕ್ಷ ಪರ್ವೇಜ್ ಕಾಶಿಮಜಿ ಅವರು ಹಸಿರು ನಿಶಾನೆ ತೋರಿಸುವುದರ ಮೂಲಕ ಉದ್ಘಾಟಿಸಿದರು.ಮಿನಿ ವಿಧಾನ ಸೌಧದ ಆವರಣದಲ್ಲಿ ಜಾಥಾ ಮುಕ್ತಾಯಗೊಂಡಿತು.
ಕಾರ್ಯಕ್ರಮವನ್ನು ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರು ದೀಪ ಬೆಳಗಿಸಿ, ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ಆರತಿ ಬೆಳಗುವ ಮೂಲಕ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ಕೇಂದ್ರ ಹಾಗೂ ರಾಜ್ಯ ಸರಕಾರದ ಆಶಯದಂತೆ ಒಂದು ವಾರಗಳ ಕಾಲ ಉಪವಿಭಾಗದ ಹಾಗೂ ತಾಲೂಕಿನ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಆದರೆ ಇದು ಕೇವಲ ಮಾದರಿಯಷ್ಟೇ ಆಗಿದೆ. ಪ್ರತಿಯೋರ್ವ ನಾಗರೀಕರು ತಮ್ಮ ತಮ್ಮ ಸ್ಥಳ, ರಸ್ತೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಸಹಕರಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಪರ್ವೇಜ್ ಕಾಶಿಮಜಿ, ತಹಸೀಲ್ದಾರ್ ಎಸ್. ರವಿಚಂದ್ರ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಫಯಾಜ್ ಮುಲ್ಲಾ, ಪುರಸಭಾ ಸದಸ್ಯರು, ವಿವಿಧ ಇಲಾಖೆಯ ಮುಖ್ಯಸ್ಥರು, ಸಿಬ್ಬಂದಿಗಳು ಉಪಸ್ಥಿತರಿದ್ದರು.