ಸಂಭ್ರಮದಿಂದ ಜರುಗಿದ ಬಿಳಿಗಿರಿ ರಂಗನಾಥನ ಜಾತ್ರೆ
ಸಾಗರೋಪಾದಿಯಲ್ಲಿ ಆಗಮಿಸಿದ ಭಕ್ತ ಗಡಣ
Team Udayavani, Apr 16, 2022, 9:27 PM IST
ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಬಿಳಿಗಿರಿರಂಗನಾಥಸ್ವಾಮಿಯ ದೊಡ್ಡ ರಥೋತ್ಸವ ಸಂಭ್ರಮ ಸಡಗರಗಳಿಂದ ಶನಿವಾರ ನಡೆಯಿತು.
ಕಳೆದ 5 ವರ್ಷಗಳಿಂದ ದೇಗುಲದ ಜೀರ್ಣೋದ್ಧಾರ, ದೊಡ್ಡ ರಥ ಶಿಥಿಲ ಹಾಗೂ ಕೋವಿಡ್ ಹಿನ್ನೆಲೆಯಿಂದ ಜಾತ್ರೆ ನಡೆದಿರಲಿಲ್ಲ, ಹಾಗಾಗಿ ಈ ಬಾರಿ ಜಾತ್ರೆಗೆ ಸಾಗರೋಪಾದಿಯಲ್ಲಿ ಭಕ್ತ ಗಡಣ ಆಗಮಿಸಿತ್ತು. ಮಧ್ಯಾಹ್ನ ಸಾವಿರಾರು ಸಂಖ್ಯೆಯ ಭಕ್ತರು ಗೋವಿಂದ,ಗೋವಿಂದ ನಾಮಾವಳಿಯನ್ನು ಹಾಡುವ ಮೂಲಕ ರಥವನ್ನು ಎಳೆದು ಪುನೀತರಾದರು.
ರಥ ಮುಗಿದ ನಂತರ ಮಂಟಪದಲ್ಲಿ ಉತ್ಸವಮೂರ್ತಿಯನ್ನು ತಂದು ಮಂಟಪೋತ್ಸವ ಸೇವೆಯನ್ನು ನೆರವೇರಿಸಲಾಯಿತು.ಅಲ್ಲಲ್ಲಿ ಅರವಟ್ಟಿಗೆಗಳನ್ನು ಮಾಡಿಯೇ ನೆರೆದಿದ್ದ ಭಕ್ತರಿಗೆ ನೀರು ಮಜ್ಜಿಗೆ ಪಾನಕ ಕೋಸಂಬರಿ ಹಾಗೂ ಪ್ರಸಾದ ವಿನಿಯೋಗದ ವ್ಯವಸ್ಥೆಯನ್ನು ಮಾಡಲಾಗಿತ್ತು .
ಬಸ್ಸಿಲ್ಲದೆ ಸಾರ್ವಜನಿಕರ ಪರದಾಟ
ರಥೋತ್ಸವಕ್ಕೆ ಬಂದ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ನಿಂದ ಉಚಿತ ಬಸ್ ಗಳ ವ್ಯವಸ್ಥೆಯನ್ನು ಮಾಡಲಾಗಿತ್ತು ಆದರೆ ನಿಗದಿತ ಪ್ರಮಾಣದಲ್ಲಿ ಬಸ್ ಗಳು ಆಗಮಿಸದ ಹಿನ್ನೆಲೆಯಲ್ಲಿ ಭಕ್ತರು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಖಾಸಗಿ ವಾಹನಗಳಿಗೆ ನಿಷೇಧ ಹೇರಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿತು. ನಂತರ ಪರಿಸ್ಥಿತಿಯ ಅವಲೋಕನ ಮಾಡಿದ ಪೊಲೀಸ್ ಇಲಾಖೆಯು ಖಾಸಗಿ ವಾಹನಗಳಿಗೂ ಪ್ರವೇಶವನ್ನು ನೀಡಿತು. ಅಲ್ಲಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯೂ ಕಾಡಿತು. ಬಿಆರ್ ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶವಾಗಿದ್ದರೂ ಕೆಲ ಭಕ್ತರು ಹದಿನೆಂಟು ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ಸಾಗಿದರು.