ಪರಿಪೂರ್ಣತೆಯೊಂದಿಗೆ ಸಮದರ್ಶನ ಕಲಿಸೀತು ಓದು
Team Udayavani, Mar 13, 2021, 5:50 AM IST
ಸುಸಂಸ್ಕೃತ ಸಮಾಜದ ಚಟುವಟಿಕೆಗಳಲ್ಲಿ ಓದು ಅಗ್ರಮಾನ್ಯವಾದುದು ಎಂದರೆ ಒಪ್ಪಬೇಕಾದ್ದೇ. ಲಿಪಿಯ ಉಗಮವಾದಂದಿನಿಂದ (ಸುಮಾರು ಕ್ರಿ.ಪೂ. 3200-ಮೆಸೆಪೇಟೇಮಿಯಾದ ಕ್ಯೂನಿ ಫಾರ್ಮ್ ಲಿಪಿ) ನಿಧಾನವಾಗಿ ಓದುವ ಪ್ರಕ್ರಿಯೆ ಆರಂಭವಾಗಿದ್ದಿರಬೇಕು. ಮೊದಲು ಓದುವ ಪರಿಕರ ಗಳು ಕಡಿಮೆಯಾಗಿದ್ದರಿಂದ ವಾಚನ, ಪಠಣ, ಪ್ರವಚನ ಗಳನ್ನು ಆಲಿಸುವವರೇ ಹೆಚ್ಚಾಗಿದ್ದಿರಬೇಕು. ಮುಂದೆ ಲಿಪಿ ಕ್ರಾಂತಿಯಾಗಿ ಅಕ್ಷರಗಳು ಮುದ್ರಿತವಾಗಿ ಪುಸ್ತಕಗಳ ರೂಪದಲ್ಲಿ ದೊರಕಲಾರಂಭಿಸಿದಂದಿನಿಂದ ಓದುವ ಪ್ರಕ್ರಿಯೆಯಲ್ಲಿ ಆಮೂಲಾಗ್ರ ಬದಲಾವಣೆಗಳಾದವು.
ಓದು ಮತ್ತು ವಿದ್ಯೆಗೆ ಅವಿನಾಭಾವ ಸಂಬಂಧ. ಆಧುನಿಕ ಪ್ರಪಂಚದಲ್ಲಿ ಓದಿನ ಪರಿಕರಗಳು ಅಸಂಖ್ಯ, ವೈವಿಧ್ಯಮಯ. ಪ್ರಾಚೀನ ಗ್ರಂಥಗಳು, ಕಾವ್ಯ-ಪುರಾಣಗಳು, ಸಾಹಿತ್ಯ, ವಿಜ್ಞಾನ, ಕಾದಂಬರಿ, ಕತೆ, ಪ್ರವಾಸಕಥನ ಮುಂತಾದ ಜೀವನಾನುಭವಗಳ ಮೂರ್ತರೂಪವಾಗಿ ಮೂಡಿಬರುವ ಪುಸ್ತಕಗಳ ಪುಟ ಬಿಡಿಸಿದಂತೇ ಮನದ ಕಣ್ಣಿಗೆರಗುವ ನವಲೋಕದ ದರ್ಶನ ಯಾವ “ವಿಶ್ವರೂಪ ದರ್ಶನ’ಕ್ಕೂ ಕಡಿಮೆಯೆನಿಸದು ಎಂಬುದು ಪ್ರಾಮಾಣಿಕ ಓದುಗನಿಗಷ್ಟೇ ಅರ್ಥವಾದೀತು. ಮನುಷ್ಯನ ಓದು ಸೀಮಿತವಾದರೂ ಓದಿನ ದಾರಿಯಲ್ಲಿ ಹೊಸ ಹೊಸ ವಿಚಾರಗಳು ಮೊಳೆತಾವು. ಸೊರಗಿದ ಮನಸ್ಸಿಗೆ ತಂಪೆರೆ ದಾವು. ಚಿಂತನೆಗೆ ಹಚ್ಚುವ ಪ್ರತಿಯೊಂದು ಕೃತಿಯೂ ಓದುಗನನ್ನು ಚುರುಕಾಗಿರಿಸುವುದರೊಂದಿಗೆ ಅಸದೃಶ ಆನಂದವನ್ನು ನೀಡುವುದಂತೂ ಖಂಡಿತ.
ದಿನಪತ್ರಿಕೆಯ ಓದಿನಿಂದ ದಿನಾರಂಭ
ವಿದ್ಯುನ್ಮಾನ ಉಪಕರಣಗಳನ್ನು ಬಿಟ್ಟರೆ ಸಮಕಾಲೀನ ಜಗತ್ತಿಗೆ ನೇರ ಸಂಪರ್ಕ ಕಲ್ಪಿಸುವ ಸೇತುವೆ ಎಂದರೆ ಅದು ದಿನಪತ್ರಿಕೆಗಳೇ. ಜಗತ್ತಿನ ಆಗುಹೋಗುಗಳನ್ನು ಮೈತುಂಬಿ ಮನೆಯೊಳಗೆ ಬಂದು ಲೋಕದರ್ಶನ ಮಾಡಿಸುವ ಈ “ಪವಾಡ ಪುರುಷ’ನ ದರ್ಶನ ಬೆಳಗಿನ ವೇಳೆ ಆಗಲಿಲ್ಲವೆಂದಾದರೆ ಓದುಗನಿಗೆ ಅದೇನೋ ಚಡಪಡಿಕೆ. ಸದಾ ಮೊಬೈಲ್, ಐಪಾಡ್ಗಳಲ್ಲೇ ತಡಕಾ ಡುವ ನಮ್ಮ ಬಾಲರಿಗೆ, ಯುವಕರಿಗೆ ದಿನಪತ್ರಿಕೆ ಓದಿಸುವ ಪ್ರಯತ್ನ ಹಿರಿಯರು ಮಾಡಬೇಕಿದೆ.
ಹಿರಿಯರ ಮಾರ್ಗದರ್ಶನದೊಂದಿಗೆ ಉತ್ತಮ ಆಯ್ಕೆ ಮಾಡಿ ತೊಡಗುವ ಪುಸ್ತಕದ ಓದು, ಹೊಸ ಲೋಕ ದರ್ಶನ ಮಾಡಿಸುವ ಮಾಹಾ ಮಾಂತ್ರಿಕ; ತಲೆಕೆಡಿಸುವ ಯೋಚನೆಗಳಿಗೆ ತಡೆಯೊಡ್ಡಿ ನೇರ್ಪುಗೊಳಿಸುವ ಚಿಕಿತ್ಸಕ; ಮನಸ್ಸಿಗೆ ಮುದ ನೀಡಿ ಹುರುಪುಗೊಳಿಸುವ ಜೀವರಸ; ಎಲ್ಲೆಲ್ಲೋ ಓಡುವ ಮನಸ್ಸೆಂಬ ಹುಚ್ಚು ಕುದುರೆಗೆ ಬೆಸೆದ ಕಡಿವಾಣ; ಉದ್ವೇಗಗಳಿಗೆ ತಂಪೆರೆದು ಶಾಂತಗೊಳಿಸುವ ಮಹಾಮಂತ್ರ; ಮುದುಡಿ ಕುಳಿತ ಮನಸ್ಸಿಗೆ ಖುಶಿ ಕೊಡುವ ಮನರಂಜನೆ, ನೋವುಗಳಿಗೆ ಮದ್ದು ಹಚ್ಚಿ ಮರೆಸುವ ಮನೋವೈದ್ಯ; ವಿವಿಧ ಸಾಧ್ಯತೆಗಳಿಗೆ ಬೆಳಕು ಹಿಡಿಯುವ ದೀವಟಿಗೆ.
ಉತ್ತಮ ಓದು ಬಾಯ್ಬಡುಕನನ್ನು ಮೌನಿಯಾಗಿಸೀತು, ವಿಚಾರ ವಿಮರ್ಶೆಗೆ ಪ್ರೇರೇಪಿಸೀತು, ಪರಿಪೂರ್ಣತೆಯೊಂದಿಗೆ ಸಮದರ್ಶನ ಕಲಿಸೀತು. ಶಬ್ದ ಸಂಪತ್ತು, ವಾಗ್ಮಿತೆ ಓದಿನ ಕೊಡುಗೆ, ಸಮಸ್ಯೆಗಳಿಗೆ ಸುಲಭ ನಿವಾರಣ ಸೂತ್ರ ಓದಿನಿಂದ. ಮಾಹಿತಿಗಳ ನಿಖರತೆಗೆ ಓದಬೇಕು. ಅದೆಷ್ಟೋ ಬದುಕಿನ ಪ್ರಶ್ನೆಗಳಿಗೆ ಓದು ಉತ್ತರ ನೀಡೀತು. ದಿನ ಬೆಳಗಾದರೆ ದ್ವೇಷ, ಮತ್ಸರ, ತಾರತಮ್ಯ, ಗೊಂದಲಗಳಿಗೆ ಎಣೆಯಾಗುವ ಮನಸ್ಸಿಗೆ ಕಿಂಚಿತ್ತಾದರೂ ಶಾಂತಿ ನೀಡುವ ಹವ್ಯಾಸ ಅದು ಉತ್ತಮ ಓದೇ ಸರಿ. ಆದುದರಿಂದಲೇ ಇದು ಬರೀ ಓದಲ್ಲೋ ಅಣ್ಣ !
– ಪದ್ಯಾಣ ಪರಮೇಶ್ವರ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ
MUST WATCH
ಹೊಸ ಸೇರ್ಪಡೆ
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ