ಬ್ರಹ್ಮನಗರ ಕಾಲನಿ: ಹಕ್ಕುಪತ್ರಕ್ಕೆ ಕಂದಾಯ ಇಲಾಖೆ ಪ್ರಸ್ತಾವನೆ
150 ವರ್ಷಗಳಿಂದ ಹಕ್ಕುಪತ್ರ ರಹಿತ ವಾಸ, ಖಾಸಗಿ ಆಸ್ತಿ ಮುಟ್ಟುಗೋಲಿಗೆ ಸಿದ್ಧತೆ
Team Udayavani, Jul 3, 2020, 6:32 AM IST
ಪುತ್ತೂರು: ಬ್ರಹ್ಮನಗರದ ಖಾಸಗಿ ಸ್ಥಳ ಹಕ್ಕುದಾರರ ಸ್ವಾಧೀನ ಇಲ್ಲದ ಕಾರಣ ಕಂದಾಯ ಇಲಾಖೆ ಮುಟ್ಟುಗೋಲು ಹಾಕಿ ಸುಮಾರು 150 ವರ್ಷಗಳಿಂದ ಈ ಸ್ಥಳದಲ್ಲಿ ಹಕ್ಕುಪತ್ರ ರಹಿತವಾಗಿ ವಾಸಿಸುತ್ತಿರುವ ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಹಕ್ಕುಪತ್ರ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲು ಪ್ರಸ್ತಾವನೆ ಸಲ್ಲಿಸಿದೆ.
ನಗರದ ಕೇಂದ್ರ ಸ್ಥಾನದಲ್ಲಿದ್ದುಕೊಂಡು ಹಕ್ಕುಪತ್ರವಿಲ್ಲದೆ, ಸರಕಾರದ ಸವಲತ್ತು ಪಡೆಯಲಾಗದೆ ಬಿರುಕು ಬಿಟ್ಟ ಮಣ್ಣಿನ ಗೋಡೆಯ ಮನೆಯಲ್ಲಿ ಬದುಕು ಸಾಗಿಸುತ್ತಿ ರುವ 52 ಕುಟುಂಬಗಳಿಗೆ ಹಕ್ಕುಪತ್ರ ಸಹಿತ ಮನೆ ಒದಗಿಸಲು ಪ್ರಯತ್ನ ನಡೆದಿದೆ.
ಕಾಲನಿಯ ಕಥೆ
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ತಾಗಿಕೊಂಡಿರುವ ಈ ಕಾಲನಿಯ ಹಳೆಯ ಹೆಸರು ಬೊಟ್ಟತ್ತಾರು. ಕೆಲವು ವರ್ಷಗಳಿಂದ ಬ್ರಹ್ಮನಗರ ಎನ್ನಲಾಗುತ್ತಿದೆ. ಎಪಿಎಂಸಿ ರಸ್ತೆ, ಬಸ್ ನಿಲ್ದಾಣ ಹಾಗೂ ಹೂ ಮಾರುಕಟ್ಟೆಯ ಬಳಿಯಿಂದ ಈ ಕಾಲನಿಗೆ ಸಂಪರ್ಕ ರಸ್ತೆ ಇದೆ. ಸುಮಾರು 52 ಕುಟುಂಬಗಳಿದ್ದು, 350ಕ್ಕೂ ಅಧಿಕ ಜನರಿದ್ದಾರೆ. 100 ವರ್ಷಗಳ ಹಿಂದೆ ಒಂದಕ್ಕೊಂದು ತಾಗಿಕೊಂಡಂತೆ ಮೂರು ಸಾಲಿನಲ್ಲಿ ಕಟ್ಟಿದ 30ಕ್ಕೂ ಅಧಿಕ ಮನೆಗಳಿವೆ. ಕೆಲವು ಮನೆಗಳಲ್ಲಿ ಎರಡು-ಮೂರು ಕುಟುಂಬಗಳಿವೆ.
ಮಳೆಗಾಲದಲ್ಲಿ ಈ ಹರಕಲು ಮನೆಯಲ್ಲಿ ಆತಂಕದಿಂದಲೇ ದಿನದೂಡಬೇಕಾಗುತ್ತದೆ. ದುರಸ್ತಿಗಾಗಿ ನಗರಸಭೆ ಅಲ್ಪ ಹಣ ಕೊಟ್ಟರೂ ಪ್ರಯೋಜನ ಅಷ್ಟಕ್ಕಷ್ಟೆ. ಜತೆಗೆ ಶೌಚಾಲಯ ಕೊರತೆ, ಚರಂಡಿ ದುರವಸ್ಥೆ ಸಹಿತ ಸಮಸ್ಯೆ ಹಲವಾರಿವೆ.
ಇದಕ್ಕೆ ಮುಖ್ಯ ಕಾರಣ ಈ ಜಾಗ ಇಲ್ಲಿನ ನಿವಾಸಿಗಳ ಹೆಸರಿನಲ್ಲಿ ಆಗದಿರುವುದು.
ಈ ಜಾಗ ಪ್ರಭಾಕರ್ ರಾವ್ ಅವರಿಗೆ ಸೇರಿದ ಸ್ಥಳ. ಅವರು ನಮಗೆ ಇಲ್ಲಿರಲು ಅವಕಾಶ ಕಲ್ಪಿಸಿದ್ದರು. ಅವರೆ ಕ್ವಾಟ್ರಸ್ ವ್ಯವಸ್ಥೆ ಮಾಡಿಸಿದ್ದರು. ಅದಕ್ಕಿಂತ ಮೊದಲು ಇಲ್ಲಿ ಮುಳಿ ಮಾಡಿನ ಮನೆ ಇತ್ತು ಎನ್ನುತ್ತಾರೆ ಕಾಲನಿಯ ಹಿರಿಯರು. ಈ ಜಾಗದ ಹಕ್ಕು ದಾರರು ಎಲ್ಲಿದ್ದಾರೆ ಎನ್ನುವುದು ಗೊತ್ತಿಲ್ಲ. ಕಂದಾಯ ಇಲಾಖೆ ಮೂಲಕ ಹುಡುಕುವ ಪ್ರಯತ್ನ ಮಾಡಿದರೂ ಪ್ರಯೋ ಜನ ವಾಗಿಲ್ಲ. ಹೀಗಾಗಿ ಹಕ್ಕುದಾರರಿಂದ ಜಾಗ ವನ್ನು ಪಡೆದು ಇಲ್ಲಿನ ನಿವಾಸಿಗಳಿಗೆ ನೀಡುವ ಪ್ರಯತ್ನ ದಶಕಗಳಿಂದ ನನೆಗುದಿಗೆ ಬಿದ್ದಿದೆ.
ಸ್ವಾಧೀನದಾರರ ಕೈಯಲ್ಲಿ ಈ ಜಾಗ ಇಲ್ಲದಿರುವ ಕಾರಣ ಕಂದಾಯ ಇಲಾಖೆ ಇದನ್ನು ಮುಟ್ಟುಗೋಲು ಹಾಕಿ ಸರಕಾರದ ವಶಕ್ಕೆ ಪಡೆದು ಇಲ್ಲಿನ ನಿವಾಸಿಗಳಿಗೆ ಹಕ್ಕು ಪತ್ರ ಸಹಿತ ಮನೆ ನೀಡಲು ನಿರ್ಧರಿಸಿದೆ. ಅದಕ್ಕಾಗಿ ತಹಶೀಲ್ದಾರ್ ನೇತೃತ್ವದಲ್ಲಿ ಸ್ಥಳ ಸರ್ವೆ ನಡೆದು ಸ್ಕೆಚ್ ಆಗಿದೆ. ಒಟ್ಟು 1.50 ಎಕ್ರೆ ಜಾಗ ಗುರುತಿಸಿ ಮುಂದಿನ ಪ್ರಕ್ರಿಯೆಗೆ ಸಹಾಯಕ ಆಯುಕ್ತರಿಗೆ ಕಳುಹಿಸಲಾಗಿದೆ. ಲ್ಯಾಂಡ್ ಆ್ಯಕ್ಟ್ ಪ್ರಕಾರ 5 ವರ್ಷಗಳ ತನಕ ಸಾಗುವಳಿ ಮಾಡದೆ ಇರುವ ಜಮೀನನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ ಎಂದು ಕಂದಾಯ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜೀ-ಮಾದರಿಯಡಿ ವಸತಿಗೃಹ
ಜಾಗ ಸರಕಾರದ ಸ್ವಾಧೀನಕ್ಕೆ ಬಂದ ಬಳಿಕ ಶಾಸಕರ ಸಹಕಾರದಿಂದ ಇಲ್ಲಿ ಸ್ಲಂ ಬೋರ್ಡ್ ಮೂಲಕ ಜೀ-ಮಾದರಿ ವಸತಿಗೃಹ ನಿರ್ಮಿಸಲು ಉದ್ದೇಶಿಸಲಾಗಿದೆ. ಸರ್ವೆ ಪ್ರಕಾರ 1.50 ಎಕ್ರೆ ಜಾಗ ಇದ್ದರೂ, 75 ಸೆಂಟ್ಸ್ ಜಾಗ ಮನೆ ಕಟ್ಟಲು ದೊರೆಯಲಿದೆ. ಉಳಿದ ಜಾಗದಲ್ಲಿ ದೈವಸ್ಥಾನ ಇತ್ಯಾದಿಗಳಿವೆ.
ಸರ್ವೆ ಪೂರ್ಣ
ಬ್ರಹ್ಮನಗರ ಕಾಲನಿಯಲ್ಲಿನ ಜಾಗದ ಸ್ವಾಧೀನದಾರರು ಇಲ್ಲದ ಕಾರಣ ಅದನ್ನು ಸರಕಾರ ವಶಕ್ಕೆ ಪಡೆದು ಈಗ ವಾಸಿಸುತ್ತಿರುವ ಕುಟುಂಬಗಳಿಗೆ ಜೀ- 3 ಅಥವಾ 4 ಮಾದರಿಯಡಿ ಮನೆ ನಿರ್ಮಿಸಿ ಕೊಡಲು ಶಾಸಕರ ನೇತೃತ್ವದಲ್ಲಿ ಯೋಜನೆ ರೂಪಿಸಲಾಗಿದೆ. ಜಾಗದ ಸರ್ವೆ ಪೂರ್ಣ ಗೊಳಿಸಿ ಸ್ಕೆಚ್ ತಯಾರಿಸಿಲಾಗಿದೆ. ಇದನ್ನು ಸಹಾಯಕ ಆಯುಕ್ತರಿಗೆ ಸಲ್ಲಿಸಲಾಗಿದೆ.
-ರಮೇಶ ಬಾಬು,
ತಹಶೀಲ್ದಾರ್, ಪುತ್ತೂರು.