ಕೊನೆಗೂ ಬದುಕಿ ಬರಲಿಲ್ಲ ಉದ್ಯಮಿ ಸಿದ್ಧಾರ್ಥ್
Team Udayavani, Aug 1, 2019, 3:09 AM IST
ಮಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ, ಕೆಫೆ ಕಾಫಿ ಡೇ ಸ್ಥಾಪಕ ಸಿದ್ಧಾರ್ಥ್ ಹೆಗ್ಡೆ ಅವರ ಮೃತದೇಹ ಬುಧವಾರ ಮುಂಜಾನೆ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಉಳ್ಳಾಲ ಸೇತುವೆಯಿಂದ ಹಾರಿದ್ದರು ಎನ್ನಲಾದ ಜಾಗದಿಂದ ಸುಮಾರು 4.5 ಕಿ.ಮೀ.ದೂರದ ಹೊಗೆ ಬಜಾರ್ ಐಸ್ಪ್ಲಾಂಟ್ ಬಳಿ ಹಿನ್ನೀರಿನಲ್ಲಿ ಮೃತದೇಹ ಪತ್ತೆಯಾಗಿದ್ದು, ಇದರೊಂದಿಗೆ ಅವರ ನಿಗೂಢ ಕಣ್ಮರೆ ಪ್ರಕರಣಕ್ಕೆ ಸುಮಾರು 36 ತಾಸುಗಳಲ್ಲಿ ತೆರೆ ಬಿದ್ದಿದೆ.
ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆಯಂತೆ ಕಂಡು ಬಂದಿದ್ದರೂ ಸಿದ್ಧಾರ್ಥ್ ಸಾವಿಗೆ ನಿಜವಾದ ಕಾರಣ ಏನು ಎಂಬುದು ಮರಣೋತ್ತರ ಪರೀಕ್ಷೆ ವರದಿ ಹಾಗೂ ಪೊಲೀಸ್ ತನಿಖೆಯಿಂದಷ್ಟೇ ಗೊತ್ತಾಗಬೇಕಾಗಿದೆ. ಜು.29ರಂದು ಮಧ್ಯಾಹ್ನ ಬೆಂಗಳೂರಿನಿಂದ ಮಂಗಳೂರಿಗೆ ಹೊರಟಿದ್ದ ಸಿದ್ಧಾರ್ಥ್, ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿ ನದಿಯ ಉಳ್ಳಾಲ ಸೇತುವೆ ಮೇಲಿಂದ ರಾತ್ರಿ ಸುಮಾರು 7 ಗಂಟೆ ಹೊತ್ತಿಗೆ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿತ್ತು.
ಅದೇ ಸಮಯದಲ್ಲಿ ವ್ಯಕ್ತಿಯೊಬ್ಬರು ನದಿಗೆ ಹಾರಿರುವುದನ್ನು ನೋಡಿರುವುದಾಗಿ ಸ್ಥಳೀಯ ಮೀನುಗಾರರೊಬ್ಬರು ಹೇಳಿದ್ದರು. ಕಾರು ಚಾಲಕ ಬಸವರಾಜ ಕೂಡ ಅದೇ ಸೇತುವೆಯಿಂದ ಸಿದ್ದಾರ್ಥ್ ನಾಪತ್ತೆಯಾಗಿರುವುದಾಗಿ ಹೇಳಿಕೆ ನೀಡಿದ್ದರು. ಇದನ್ನೆಲ್ಲ ಆಧರಿಸಿ ಸೋಮವಾರ ತಡರಾತ್ರಿ ಹಾಗೂ ಮಂಗಳವಾರ ಇಡೀ ದಿನ ಪೊಲೀಸರು, ಮುಳುಗು ತಜ್ಞರು, ಸ್ಥಳೀಯ ಮೀನುಗಾರರು, ಅಗ್ನಿ ಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದರು. ಆದರೆ, ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಬುಧವಾರ ಬೆಳಗ್ಗೆ 6.30ರ ವೇಳೆಗೆ ಮೀನುಗಾರಿಕೆಗೆ ತೆರಳಿದ್ದ ಹೊಗೆ ಬಜಾರಿನ ರಿತೇಶ್ ಡಿ’ಸೋಜಾ (34) ಪ್ರಾಣೇಶ್ (44) ಮತ್ತು ಸಾರಥಿ (40) ಎಂಬುವರಿಗೆ ನದಿಯ ದಡದಿಂದ ಸುಮಾರು ಅರ್ಧ ಕಿ.ಮೀ.ದೂರದಲ್ಲಿ ಮೃತದೇಹ ಕಂಡಿದ್ದು, ದಡಕ್ಕೆ ತಂದು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಪೊಲೀಸರು ಮೃತ ದೇಹವನ್ನು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿದರು. ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳಕ್ಕೆ ತೆರಳಿ ಮೃತದೇಹವು ಸಿದ್ಧಾರ್ಥ್ ಅವರದ್ದೆಂದು ಗುರುತಿಸಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಮೊಬೈಲ್ ಫೋನ್ ಪತ್ತೆ: ಮೃತ ದೇಹದಲ್ಲಿ ಕಪ್ಪು ಜೀನ್ಸ್ ಪ್ಯಾಂಟ್, ಬೆಲ್ಟ್, ಕಪ್ಪು ಶೂಸ್, ಸ್ಮಾರ್ಟ್ ವಾಚ್, ಎರಡು ಉಂಗುರ ಇದ್ದು, ಬಲಗೈಗೆ ನೂಲು ಕಟ್ಟಿತ್ತು. ದೇಹದ ಮೇಲೆ ಶರ್ಟ್ ಅಥವಾ ಟಿ-ಶರ್ಟ್ ಇರಲಿಲ್ಲ. ಮುಖದ ಮೇಲೆ ಮತ್ತು ಮೂಗಿನಿಂದ ರಕ್ತಸ್ರಾವವಾಗುತ್ತಿತ್ತು. ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಫೋನ್, ಕ್ರೆಡಿಟ್ ಕಾರ್ಡ್, ಪರ್ಸ್ ಸಿಕ್ಕಿದೆ.
ಮೃತದೇಹ ತೇಲುತ್ತಿತ್ತು: ಸಾಮಾನ್ಯವಾಗಿ ನೀರಿಗೆ ಬಿದ್ದು ಸತ್ತರೆ 24 ಗಂಟೆಗಳೊಳಗೆ ಮೃತದೇಹ ಮೇಲಕ್ಕೆ ಬರುತ್ತದೆ. ಆದರೆ, ಈಗ ಮಳೆ ಬರುತ್ತಿದ್ದು, ನೀರು ಹೆಚ್ಚು ತಂಪು ಆಗಿರುವುದರಿಂದ ಸಿದ್ಧಾರ್ಥ್ ಮೃತದೇಹ ಮೇಲಕ್ಕೆ ಬರಲು ಸ್ವಲ್ಪ ಜಾಸ್ತಿ ಸಮಯ ತೆಗೆದುಕೊಂಡಿರಬಹುದು ಎಂದು ಮೀನುಗಾರರು ತಿಳಿಸಿದ್ದಾರೆ. ಸಿದ್ಧಾರ್ಥ್ ಅವರು ತಲೆಕೆಳಗಾಗಿ ನೀರಿಗೆ ಬಿದ್ದಿರುವ ಸಂಶಯವಿದೆ. ಬೀಳುವ ರಭಸಕ್ಕೆ ತಲೆಗೆ ಏಟು ಬಿದ್ದ ಸಾಧ್ಯತೆ ಇದ್ದು, ಮೂಗಿನಿಂದ ರಕ್ತಸ್ರಾವವಾಗಲು ಅದು ಕಾರಣವಾಗಿರಬಹುದು ಎಂದು ಸ್ಥಳೀಯ ಮೀನುಗಾರ ರಿತೇಶ್ ಅಭಿಪ್ರಾಯಪಟ್ಟರು.
ಸಿದ್ಧಾರ್ಥ್ ನೀರಿಗೆ ಬಿದ್ದರೆನ್ನಲಾದ ನೇತ್ರಾವತಿ ಸೇತುವೆಯ ತಳ ಭಾಗದಲ್ಲಿ ಸುಮಾರು 30 ಅಡಿ ನೀರಿದೆ. ಆದರೆ, ಮೃತದೇಹ ಸಿಕ್ಕಿದ ಹೊಗೆ ಬಜಾರ್ ಐಸ್ ಪ್ಲಾಂಟ್ ಬಳಿ ನೀರು 10 ಅಡಿಯಷ್ಟೇ ಇದೆ. ನದಿಗೆ ಬಿದ್ದಲ್ಲಿಯೇ ಸಿದ್ಧಾರ್ಥ್ ಸಾವನ್ನಪ್ಪಿರಬೇಕು ಹಾಗೂ ಬಳಿಕ ಅಲ್ಲಿಂದ ಅವರ ದೇಹ ನೀರಿನ ಮೇಲ್ಭಾಗದಲ್ಲಿಯೇ ತೇಲಿ ಹೊಗೆ ಬಜಾರ್ನಲ್ಲಿ ನೀರಿನಡಿಯಲ್ಲಿ ನಿಂತಿರುವ ಸಾಧ್ಯತೆ ಇದೆ. ಸೇತುವೆ ಬಳಿಯಿಂದ ನೀರಿನ ಒಳಗಿಂದಲೇ ಮೃತದೇಹ ಕೆಳ ಭಾಗಕ್ಕೆ ಹೋಗಿರುತ್ತಿದ್ದರೆ ಅದು ನೇರವಾಗಿ ಅಳಿವೆ ಬಾಗಿಲು ದಾಟಿ ಸಮುದ್ರ ಸೇರುವ ಸಾಧ್ಯತೆ ಇತ್ತು ಎನ್ನುತ್ತಾರೆ ಸ್ಥಳೀಯರು.
ಮರಣೋತ್ತರ ಪರೀಕ್ಷೆ ಚಿತ್ರೀಕರಣ: ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, 2 ಗಂಟೆ ಕಾಲ ನಡೆದ ಪ್ರಕ್ರಿಯೆಯನ್ನು ಚಿತ್ರೀಕರಿಲಾಗಿದೆ. ಇದು ವಿಶೇಷ ಪ್ರಕರಣ ಆಗಿರುವುದರಿಂದ ಇಬ್ಬರು ಪೊರೆನ್ಸಿಕ್ ತಜ್ಞರನ್ನು ನಿಯೋಜಿಸಲಾಗಿತ್ತು. ಮರಣೋತ್ತರ ಪರೀಕ್ಷೆಯ ವರದಿ ಬರಲು ಸುಮಾರು 30 ದಿನಗಳು ಬೇಕಾಗುತ್ತವೆ. ಆದರೆ, ತುರ್ತು ಸಂದರ್ಭಗಳಲ್ಲಿ ಸ್ವಲ್ಪ ಬೇಗನೆ ವರದಿ ಕೊಡಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ವೆನ್ಲಾಕ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಸಿದ್ಧಾರ್ಥ್ ನಾಪತ್ತೆ ಬಗ್ಗೆ ಸೋಮವಾರ ರಾತ್ರಿ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.