ಬೆಳಗಾವಿ ವಿಮಾನ ನಿಲ್ದಾಣಕ್ಕೆ ಚನ್ನಮ್ಮನ ಹೆಸರು
Team Udayavani, Oct 24, 2019, 3:06 AM IST
ಬೆಂಗಳೂರು: ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ಚನ್ನಮ್ಮ ಹೆಸರಿಡುವುದು, ಚನ್ನಮ್ಮನ ಜನ್ಮ ಸ್ಥಳ, ಸಮಾಧಿ ಮತ್ತು ಕೋಟೆಯನ್ನು ರಾಷ್ಟ್ರೀಯ ಸ್ಮಾರಕಗಳೆಂದು ಘೋಷಿಸಲು ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಅಂಗವಾಗಿ ನಗರದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಅವರು ಮಾತನಾಡಿದರು. ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ದಿಟ್ಟ ರಾಣಿ ಕಿತ್ತೂರು ಚನ್ನಮ್ಮ. ಅವರ ಸಾಮರ್ಥ್ಯ, ಸಾಹಸ, ದಿಟ್ಟತನದ ಹೋರಾಟ ಅವಿಸ್ಮರಣೀಯ ಎಂದು ಮುಖ್ಯಮಂತ್ರಿ ಸ್ಮರಿಸಿದರು.
ಹಲವು ದಿನಗಳಿಂದ ರಾಜ್ಯದಲ್ಲಿ ನಿರಂತರ ವಾಗಿ ಮಳೆ ಸುರಿಯುತ್ತಿದೆ. ಉತ್ತರ ಕರ್ನಾಟ ಕ ದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಅಲ್ಲಿನ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ, ಬೇರೆಲ್ಲಾ ಕೆಲಸಗಳಿಗಿಂತ ತುರ್ತಾಗಿ ಪರಿಹಾರ ಕಾರ್ಯದಲ್ಲಿ ತೊಡಗಿಕೊಳ್ಳಬೇಕಿದೆ. ಇಂದು ಯಾವುದೇ ಹೊಸ ಘೋಷಣೆಯನ್ನು ಮಾಡುವುದಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಚನ್ನಮ್ಮಾಜಿಯವರ ಜಯಂತಿಗೆ ಗೌರವ ಕೊಡುವ ರೀತಿಯಲ್ಲಿ ಎಲ್ಲಾ ನೆರವು ನೀಡುತ್ತೇನೆ ಎಂಬ ಭರವಸೆ ನೀಡಿದರು.
ಸ್ವಾಮೀಜಿಗಳಿಂದ ಸರ್ಕಾರಕ್ಕೆ ಮನವಿ: ಕಾರ್ಯ ಕ್ರಮದಲ್ಲಿ ಬಸವ ಜಯ ಮೃತ್ಯುಂ ಜಯ ಸ್ವಾಮೀಜಿ ಮಾತನಾಡಿ, ಕಿತ್ತೂರು ಚನ್ನಮ್ಮ ಸಮಾಧಿ ಸ್ಥಳ, ಚನ್ನಮ್ಮ ಜನ್ಮಸ್ಥಳ ಕಾಕತಿ ಹಾಗೂ ಕಿತ್ತೂರು ಕೋಟೆಗಳನ್ನು ರಾಷ್ಟ್ರೀಯ ಸ್ಮಾರಕಗಳೆಂದು ಘೋಷಿಸಲು ಕೇಂದ್ರಕ್ಕೆ ಶಿಫಾರಸು ಮಾಡಬೇಕು.
ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ಚನ್ನಮ್ಮ ಹೆಸರು, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬೆಳವಾಡಿ ಮಲ್ಲಮ್ಮ ಹೆಸರು ನಾಮಕರಣ ಮಾಡಬೇಕು. ಇಂಗ್ಲೆಂಡಿನಲ್ಲಿರುವ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಬಳಸಿದ ಖಡ್ಗವನ್ನು ವಾಪಸ್ ತರಲು ಕೇಂದ್ರದ ಮೇಲೆ ಒತ್ತಡ ಹೇರಬೇಕು.
ಪ್ರಾಥಮಿಕ, ಪ್ರೌಢಶಾಲೆ, ವಿಶ್ವವಿದ್ಯಾಲಯ ಮಟ್ಟದಲ್ಲಿ ಚನ್ನಮ್ಮ ಜಯಂತಿ ಆಚರಣೆಗೆ ಕ್ರಮ ತೆಗೆದುಕೊಳ್ಳಬೇಕು ಮತ್ತು ಮುಂಬೈ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಬೇಕು ಎಂಬ ಐದು ಬೇಡಿಕೆಗಳನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ ಮೇಯರ್ ಗೌತಮ್ ಕುಮಾರ್ ಜೈನ್, ಮಾಜಿ ಸಚಿವೆ ಲೀಲಾವತಿ ಆರ್. ಪ್ರಸಾದ್, ರಂಗಕರ್ಮಿ ನಾಗರಾಜ ಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಚನ್ನಮ್ಮನ ದಾಖಲೆ ರಾಜ್ಯಕ್ಕೆ ತರಲು ಕ್ರಮ: ಸಿ.ಟಿ.ರವಿ
ಧಾರವಾಡ: ಕಿತ್ತೂರು ರಾಣಿ ಚನ್ನಮ್ಮನ ಸಂಸ್ಥಾನದ ದಾಖಲೆಗಳು, ವಸ್ತುಗಳು ಹಾಗೂ ಧಾರವಾಡ ಜಿಲ್ಲೆಯ ಇತಿಹಾಸಕ್ಕೆ ಸಂಬಂಧಿಸಿದಂತೆ ಮೋಡಿ ಲಿಪಿಯಲ್ಲಿರುವ ದಾಖಲೆಗಳನ್ನು ರಾಜ್ಯಕ್ಕೆ ತರಲು ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಪತ್ರಾಗಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ಬುಧವಾರ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪುಣೆ ಮತ್ತು ಮುಂಬೈನ ಪತ್ರಾಗಾರದಲ್ಲಿರುವ ಧಾರವಾಡ ಜಿಲ್ಲೆಯ ಅನೇಕ ಐತಿಹಾಸಿಕ ದಾಖಲೆಗಳು ಮೋಡಿ ಲಿಪಿಯಲ್ಲಿವೆ. ಬ್ರಿಟಿಷರ ಕಾಲದಲ್ಲಿ ಅವೆಲ್ಲವೂ ಆ ಪತ್ರಾಗಾರ ವ್ಯಾಪ್ತಿಗೆ ಸೇರಿವೆ. ಅವುಗಳನ್ನು ಮರಳಿ ರಾಜ್ಯಕ್ಕೆ ಹಾಗೂ ಜಿಲ್ಲೆಗೆ ತರಲು ಪ್ರಸ್ತಾವನೆ ಸಲ್ಲಿಸಿ, ಈ ಬಗ್ಗೆ ರಾಜ್ಯಮಟ್ಟದಲ್ಲಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.