ಇಬ್ಬರು ಹೆಣ್ಣು ಮಕ್ಕಳಿರುವವರಿಗೂ ವಿನಾಯ್ತಿ ಇಲ್ಲ
ಜನಸಂಖ್ಯಾ ನಿಯಂತ್ರಣ ಕರಡು ವಿಧೇಯಕದ ಪ್ರತಿ ಸಿಎಂಗೆ ಸಲ್ಲಿಕೆ
Team Udayavani, Aug 17, 2021, 10:30 PM IST
ಲಕ್ನೋ: ವಿವಾದಿತ ಜನಸಂಖ್ಯಾ ನಿಯಂತ್ರಣ ವಿಧೇಯಕದ ಕರಡು ಪ್ರತಿಯನ್ನು ಸೋಮವಾರ ಉತ್ತರಪ್ರದೇಶ ಕಾನೂನು ಆಯೋಗವು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಲ್ಲಿಸಿದೆ.
ಕಳೆದ 10 ದಿನಗಳಿಂದ ಸಾರ್ವಜನಿಕರಿಂದ ಬಂದ ಸುಮಾರು 8,500 ಸಲಹೆಗಳನ್ನು ಪರಿಶೀಲಿಸಿದ ಬಳಿಕ ಕರಡು ಪ್ರತಿಯನ್ನು ಅಂತಿಮಗೊಳಿಸಲಾಗಿದೆ. ವಿಶೇಷವೆಂದರೆ, ಇಬ್ಬರು ಹೆಣ್ಣುಮಕ್ಕಳನ್ನು ಹೊಂದಿರುವ ವ್ಯಕ್ತಿಗಳನ್ನು ಈ ಕಾನೂನಿನ ವ್ಯಾಪ್ತಿಯಿಂದ ಹೊರಗಿಡಬೇಕು ಎಂಬ ಸಲಹೆಗಳನ್ನು ತಿರಸ್ಕರಿಸಲಾಗಿದೆ.
“ಪ್ರತಿಯೊಬ್ಬ ರಾಷ್ಟ್ರೀಯವಾದಿಗೂ ಜನಸಂಖ್ಯೆ ಹೆಚ್ಚಳವು ದೊಡ್ಡ ಕಳವಳಕಾರಿ ಸಂಗತಿ. ಸಮಿತಿಯು ಎಲ್ಲರ ಸಲಹೆಗಳನ್ನೂ ಪರಿಶೀಲಿಸಿ, ವಿಸ್ತೃತ ಅಧ್ಯಯನ ಮಾಡಿ ಸೂಕ್ತ ತಿದ್ದುಪಡಿಗಳನ್ನು ಮಾಡಿದೆ’ ಎಂದು ಸಿಎಂಗೆ ಬರೆದಿರುವ ಲಿಖಿತ ಸಂದೇಶದಲ್ಲಿ ಸಮಿತಿಯ ಮುಖ್ಯಸ್ಥ ನಿವೃತ್ತ ನ್ಯಾಯಮೂರ್ತಿ ಎ.ಎನ್.ಮಿತ್ತಲ್ ಹೇಳಿದ್ದಾರೆ.
ಇದನ್ನೂ ಓದಿ:ನಥಿಂಗ್ ಇಯರ್ (1) ಎರಡೇ ನಿಮಿಷಕ್ಕೆ ಸೋಲ್ಡ್ ಔಟ್!
ಕೇವಲ 300 ಮಂದಿ ವಿರೋಧ:
ಆ.17ರಿಂದ 24ರವರೆಗೆ ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನ ನಡೆಯಲಿದ್ದು, ಸದ್ಯದಲ್ಲೇ ಸರ್ಕಾರವು ಈ ಕರಡು ವಿಧೇಯಕವನ್ನು ಮಂಡಿಸಲಿದೆ ಎಂದು ಮೂಲಗಳು ತಿಳಿಸಿವೆ. ಜುಲೈ 9ರಂದು ಆಯೋಗವು ಕರಡನ್ನು ಅಧಿಕೃತ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿ, ಸಾರ್ವಜನಿಕರಿಂದ ಅಭಿಪ್ರಾಯ ಕೇಳಿತ್ತು. 8500 ಪ್ರತಿಕ್ರಿಯೆಗಳು ಬಂದಿದ್ದು, ಆ ಪೈಕಿ 8,200 ಮಂದಿ ವಿಧೇಯಕವನ್ನು ಬೆಂಬಲಿಸಿದ್ದರೆ, 300 ಮಂದಿ ಮಾತ್ರ ವಿರೋಧಿಸಿದ್ದರು ಎಂದು ಆಯೋಗ ತಿಳಿಸಿದೆ. ಇದೇ ವೇಳೆ, ಈ ವಿಧೇಯಕವು ಜನರ ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತದೆ ಎಂಬ ಆರೋಪವನ್ನು ಸಮಿತಿ ಅಲ್ಲಗಳೆದಿದೆ.