ವೈಫಲ್ಯದ ವಿರುದ್ಧ ಹೋರಾಡಲು ಕೈ ತೀರ್ಮಾನ
Team Udayavani, Oct 10, 2019, 3:09 AM IST
ಬೆಂಗಳೂರು: ಪ್ರವಾಹ ಪರಿಹಾರ ವಿತರಣೆ, ಪ್ರತಿಪಕ್ಷಗಳ ಶಾಸಕರ ಕ್ಷೇತ್ರಗಳಿಗೆ ಅನುದಾನ ಕಡಿತ ಹಾಗೂ ಕಲಾಪ ಚಿತ್ರೀಕರಣಕ್ಕೆ ಖಾಸಗಿ ಮಾಧ್ಯಮಗಳ ನಿಷೇಧವನ್ನು ಸರ್ಕಾರದ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಅಗತ್ಯ ಬಿದ್ದರೆ ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ಮಾಡುವ ಕುರಿತಂತೆಯೂ ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದಾರೆ.
ಆದರೆ, ಈ ಕುರಿತು ಚರ್ಚಿಸಲು ಗುರುವಾರ ಬೆಳಗ್ಗೆ ಮತ್ತೂಮ್ಮೆ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದ್ದು, ಅಲ್ಲಿ ಅಧಿಕೃತ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಗರದ ಖಾಸಗಿ ಹೋಟೆಲ್ನಲ್ಲಿ ಬುಧವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಒಗ್ಗಟ್ಟು ಪ್ರದರ್ಶಿಸಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದರು.
ರಾಜ್ಯದಲ್ಲಿ ಉಂಟಾಗಿರುವ ಪ್ರವಾಹಕ್ಕೆ ಕೇಂದ್ರ ಸರ್ಕಾರ ನೀಡಿರುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಅಲ್ಲದೆ, ರಾಜ್ಯ ಸರ್ಕಾರ ಪ್ರತಿ ಕುಟುಂಬಕ್ಕೆ ನೀಡಿರುವ 10 ಸಾವಿರ ರೂ.ಎಲ್ಲರಿಗೂ ತಲುಪಿಲ್ಲ. ಮನೆ ಕಳೆದುಕೊಂಡವರಿಗೆ 5 ಲಕ್ಷ ಹಾಗೂ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತಾದರೂ ಯಾವುದೇ ರೀತಿಯ ಪರಿಹಾರ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ.
ಅದರೊಂದಿಗೆ ಬರ ಪರಿಸ್ಥಿತಿಯೂ ಉಂಟಾಗಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪರಿಹಾರ ವಿತರಿಸುವಲ್ಲಿ ಸಂಪೂರ್ಣ ವಿಫಲವಾಗಿವೆ ಎನ್ನುವುದನ್ನೇ ಪ್ರಮುಖ ವಿಷಯವನ್ನಾಗಿಟ್ಟುಕೊಂಡು ಸದನದಲ್ಲಿ ಹೋರಾಟ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ. ತಮ್ಮ ಬೇಡಿಕೆಗೆ ಸರ್ಕಾರ ಸರಿಯಾಗಿ ಸ್ಪಂದಿಸದೆ ಹೋದರೆ ವಿಧಾನಸಭೆಯಲ್ಲಿಯೇ ಅಹೋರಾತ್ರಿ ಧರಣಿ ಮಾಡುವ ಬಗ್ಗೆಯೂ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.
ಇದಲ್ಲದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರತಿಪಕ್ಷಗಳ ಶಾಸಕರ ಕ್ಷೇತ್ರಗಳಿಗೆ ನೀಡುತ್ತಿದ್ದ ಅನುದಾನ ಕಡಿತಗೊಳಿಸಿ, ಬಿಜೆಪಿ ಶಾಸಕರು ಹಾಗೂ ಕಾಂಗ್ರೆಸ್, ಜೆಡಿಎಸ್ನಿಂದ ಅನರ್ಹಗೊಂಡಿರುವ ಶಾಸಕರ ಕ್ಷೇತ್ರ ಗಳಿಗೆ ನೀಡುವ ಮೂಲಕ ತಾರತಮ್ಯ ಮಾಡುತ್ತಿದೆ. ಸರ್ಕಾ ರದ ಈ ತಾರತಮ್ಯ ಧೋರಣೆಯನ್ನು ಖಂಡಿಸಿ, ಸರಿ ಪಡಿಸಲು ಒತ್ತಾಯಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ಇದೇ ವೇಳೆ, ದೃಶ್ಯ ಮಾಧ್ಯಮಗಳಿಗೆ ಕಲಾಪದ ಚಿತ್ರೀಕರಣಕ್ಕೆ ನಿರ್ಬಂಧ ಹೇರಿ, ಮಾಧ್ಯಮಗಳನ್ನು ದೂರ ಇಡುವ ಪ್ರಯತ್ನ ಮಾಡಲಾಗಿದೆ. ಸರ್ಕಾರ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಮಾಧ್ಯಮಗಳ ಮೇಲೆ ನಿರ್ಬಂಧ ಹೇರುವ ಯತ್ನ ಮಾಡುತ್ತಿದೆ. ಇದು ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದ್ದು, ಈ ಬಗ್ಗೆಯೂ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ಬೆಂಬಲದ ನಿರೀಕ್ಷೆ: ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಂಡ ನಂತರ ಎರಡೂ ಪಕ್ಷಗಳ ನಾಯಕರು ಬಹಿರಂಗವಾಗಿಯೇ ಆರೋಪ- ಪ್ರತ್ಯಾರೋಪ ಮಾಡಿಕೊಂಡು ತಿರುಗಾಡುತ್ತಿದ್ದಾರೆ. ಆದರೆ, ಈಗ ವಿಧಾನ ಮಂಡಲದ ಅಧಿವೇಶನದಲ್ಲಿ ಕಾಂಗ್ರೆಸ್, ಜೆಡಿಎಸ್ ಬೆಂಬಲದ ನಿರೀಕ್ಷೆಯಲ್ಲಿದೆ. ಪ್ರಮುಖವಾಗಿ ಪ್ರವಾಹ, ಬರ, ಶಾಸಕರ ಅನುದಾನ ಕಡಿತದಂತಹ ವಿಷಯಗಳು ಎರಡೂ ಪ್ರತಿಪಕ್ಷಗಳಿಗೂ ಅನ್ವಯ ಆಗುವುದರಿಂದ ಜೆಡಿಎಸ್ ಬೆಂಬಲ ದೊರೆತರೆ ಬಿಜೆಪಿಯನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಲು ಅನುಕೂಲವಾಗುತ್ತದೆ ಎಂಬ ನಿರೀಕ್ಷೆಯನ್ನು ಕಾಂಗ್ರೆಸ್ ನಾಯಕರು ಇಟ್ಟುಕೊಂಡಿದ್ದಾರೆ.
ಉಪ ಸಭಾಪತಿ ಬದಲಾವಣೆಗೆ ಆಗ್ರಹ: ವಿಧಾನ ಪರಿಷತ್ನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದರಿಂದ ಸಭಾಪತಿ ಸ್ಥಾನ ಕಾಂಗ್ರೆಸ್ಗೆ ದೊರೆತಿದ್ದು, ಜೆಡಿಎಸ್ ಉಪ ಸಭಾಪತಿ ಸ್ಥಾನ ಪಡೆದುಕೊಂಡಿದೆ. ಈಗ, ಜೆಡಿಎಸ್ನೊಂದಿಗಿನ ಮೈತ್ರಿ ಮುರಿದು ಬಿದ್ದಿರುವುದರಿಂದ ಉಪ ಸಭಾಪತಿ ಸ್ಥಾನವನ್ನೂ ಕಾಂಗ್ರೆಸ್ ಪಡೆದುಕೊಳ್ಳಲು ಅವಕಾಶ ಇರುವುದರಿಂದ ಜೆಡಿಎಸ್ನ ಉಪ ಸಭಾಪತಿಯಾಗಿರುವ ಧರ್ಮೇಗೌಡ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯರು ನಾಯಕರ ಮೇಲೆ ಒತ್ತಡ ತಂದಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ, ಉಪ ಸಭಾಪತಿಯನ್ನು ಪದಚ್ಯುತಿಗೊಳಿಸಲು ಕನಿಷ್ಠ 14 ದಿನ ಮುಂಚೆಯೇ ನೋಟಿಸ್ ನೀಡಬೇಕೆಂಬ ನಿಯಮ ಇರುವುದರಿಂದ ಮುಂದಿನ ಅಧಿವೇಶನಕ್ಕೂ ಮುಂಚೆಯೇ ನೋಟಿಸ್ ನೀಡಿ, ಉಪ ಸಭಾಪತಿಯನ್ನು ಬದಲಾಯಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ದಿನೇಶ್ ಗೈರು: ವಿದೇಶ ಪ್ರವಾಸದಲ್ಲಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗಿದ್ದರು. ಗುರುವಾರ ತಡ ರಾತ್ರಿ ಬೆಂಗಳೂರಿಗೆ ಆಗಮಿಸುತ್ತಿರುವುದರಿಂದ ಗುರುವಾರ ಬೆಳಿಗ್ಗೆ ನಡೆಯುವ ಪಕ್ಷದ ಶಾಸಕಾಂಗ ಸಭೆ ಹಾಗೂ ವಿಧಾನಸಭೆ ಕಲಾಪದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
MUST WATCH
ಹೊಸ ಸೇರ್ಪಡೆ
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ