ಗುಣಮುಖನಾಗಿದ್ದ ವ್ಯಕ್ತಿಗೆ ಮತ್ತೆ ಕೊರೊನಾ
Team Udayavani, May 12, 2020, 11:24 AM IST
ಬೆಳಗಾವಿ: ದೆಹಲಿಯ ನಿಜಾಮುದ್ದಿನ್ ತಬ್ಲೀಘಿ ಜಮಾತ್ ಮರ್ಕಜ್ನ ವ್ಯಕ್ತಿಯ ದ್ವಿತೀಯ ಸಂಪರ್ಕದಿಂದ ಕೊರೊನಾ ಸೋಂಕು ತಗುಲಿ ಗುಣಮುಖನಾಗಿದ್ದ ಗೋವಾದ 50 ವರ್ಷದ ವ್ಯಕಿಯಲ್ಲಿ(ಪಿ-298) ಮತ್ತೆ ಸೋಂಕು ದೃಢಪಟ್ಟಿದ್ದು, ಆತಂಕಕ್ಕೆ ಕಾರಣವಾಗಿದೆ. ಮೊದಲನೇ ಸಲ ಸೋಂಕು ತಗಲುವ ಮುನ್ನ ರಾಯಬಾಗ ತಾಲೂಕಿನ ಕುಡಚಿಯಲ್ಲಿ ಒಂದು ತಿಂಗಳು ಕಾಲ ನೆಲೆಸಿದ್ದ ಈತನಿಗೆ ಕೊರೊನಾ ಸೋಂಕಿತನ ದ್ವಿತೀಯ ಸಂಪರ್ಕದಿಂದ ಪಾಸಿಟಿವ್ ಬಂದಿತ್ತು.
ಈಗ ಮತ್ತೆ ಮರು ಸೋಂಕು ದೃಢಪಟ್ಟಿದೆ. ಏ.6ರಂದು ಸೋಂಕು ದೃಢಪಟ್ಟಿದ್ದ ಈ ವ್ಯಕ್ತಿಗೆ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. 14 ದಿನಗಳ ಬಳಿಕ ಮತ್ತೆ ಏ.28ರಂದು ಹಾಗೂ 29ರಂದು ಎರಡು ಬಾರಿ ಗಂಟಲು ದ್ರವಗಳ ಮಾದರಿ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದರಿಂದ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಕ್ವಾರಂಟೈನ್ ಮಾಡಲಾಗಿತ್ತು. ಕೆಲವು ದಿನಗಳ ನಂತರ ಈ ವ್ಯಕ್ತಿಗೆ ಮತ್ತೆ ಕೊರೊನಾ ಲಕ್ಷಣಗಳು ಕಂಡುಬಂದಿದ್ದರಿಂದ ಗಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು.
ಮೇ 5ರಂದು ಪ್ರತ್ಯೇಕವಾಗಿ ಮೂರು ಪ್ರಯೋಗಾಲಯಕ್ಕೆ ಗಂಟಲು ದ್ರವದ ಮಾದರಿ ಕಳುಹಿಸಲಾಗಿತ್ತು. ಮೂರರ ಪೈಕಿ ಎರಡು ನೆಗೆಟಿವ್ ಒಂದು ಪಾಸಿಟಿವ್ ಬಂದಿದ್ದು, ಮೇ 12ರಂದು ಮತ್ತೂಮ್ಮೆ ಗಂಟಲು ದ್ರವ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗುವುದು ಎಂದು ಆಸ್ಪತ್ರೆಯ ನೋಡಲ್ ಅಧಿ ಕಾರಿ ಡಾ| ದಂಡಗಿ “ಉದಯವಾಣಿ’ಗೆ ತಿಳಿಸಿದ್ದಾರೆ. ಗುಣಮುಖನಾಗಿ ನೆಗೆಟಿವ್ ಬಂದು ವಾರ್ಡ್ದಿಂದ ಬಿಡುಗಡೆಯಾಗಿ ಕ್ವಾರಂಟೈನ್ನಲ್ಲಿದ್ದ ವ್ಯಕ್ತಿಗೆ ಈಗ ಮತ್ತೂಮ್ಮೆ ಪಾಸಿಟಿವ್ ಬಂದಿದ್ದರಿಂದ ಆತಂಕಕ್ಕೆ ಕಾರಣವಾಗಿದೆ.