ರೋಹಿತ್, ರಹಾನೆ ಕ್ರಿಕೆಟ್ ಅಭ್ಯಾಸಕ್ಕೆ ಕೋವಿಡ್-19 ಅಡ್ಡಿ
Team Udayavani, May 23, 2020, 6:30 AM IST
ಮುಂಬಯಿ: ಕೋವಿಡ್-19 ಸೋಂಕು ಪ್ರಕರಣಗಳು ಅಧಿಕವಾಗಿರುವ ಮುಂಬಯಿ ಮಹಾನಗರವನ್ನು ಕೆಂಪು ವಲಯವನ್ನಾಗಿ ಗುರುತಿಸಲಾಗಿದ್ದರಿಂದ ಅಲ್ಲಿ ಇನ್ನೂ ಕ್ರೀಡಾ ಚಟುವಟಿಕೆಗಳು ಆರಂಭಗೊಂಡಿಲ್ಲ. ಆದ್ದರಿಂದ ಪ್ರಮುಖ ಕ್ರಿಕೆಟಿಗರಾದ ಭಾರತ ತಂಡದ ಉಪನಾಯಕ ರೋಹಿತ್ ಶರ್ಮ ಹಾಗೂ ಅಜಿಂಕ್ಯ ರಹಾನೆ ಅವರು ವೈಯಕ್ತಿಕ ಅಭ್ಯಾಸಕ್ಕೆ ಇನ್ನಷ್ಟು ದಿನ ಕಾಯಬೇಕಿದೆ.
ಮಹಾರಾಷ್ಟ್ರ ಸರಕಾರವು ಹಸಿರು ಹಾಗೂ ಕಿತ್ತಳೆ ವಲಯಗಳಲ್ಲಿ ಇರುವ ಆ್ಯತ್ಲೀಟ್ಗಳಿಗೆ ತರಬೇತಿಗೆ ಅವಕಾಶ ಕಲ್ಪಿಸಿದೆ. ಆದರೆ ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶವಿಲ್ಲ. ಮುಂಬಯಿ ಅಲ್ಲದೆ ಅದರ ಪಕ್ಕದ ಪ್ರದೇಶಗಳಾದ ಥಾಣೆ, ನವಿ ಮುಂಬಯಿ, ಮೀರಾ ಭಾಯಂದರ್, ವಸಯೀ ಹಾಗೂ ಕಲ್ಯಾಣ್ ಡೊಂಬಿವಲಿಗಳನ್ನು ಕೆಂಪು ವಲಯಗಳೆಂದು ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ರಹಾನೆ ಮತ್ತು ರೋಹಿತ್ ಅವರ ನಿವಾಸ ಇರುವುದರಿಂದ ಈ ಇಬ್ಬರು ಆಟಗಾರರಿಗೆ ಅಭ್ಯಾಸ ನಡೆಸಲು ಅಸಾಧ್ಯವಾಗಿದೆ.
“ಕ್ರೀಡಾಂಗಣಗಳನ್ನು ಅಭ್ಯಾಸಕ್ಕೆ ಮುಕ್ತವಾಗಿಸುವ ವಿಷಯದಲ್ಲಿ ನಾವು ರಾಜ್ಯ ಸರಕಾರದ ಮಾರ್ಗಸೂಚಿಗಳಿಗೆ ಬದ್ಧರಾಗಿದ್ದೇವೆ’ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಶನ್ ತಿಳಿಸಿದೆ.