ಭಕ್ತಿ-ಭಾವದ ಸಂಭ್ರಮಾಚರಣೆಗೆ ಈ ಬಾರಿ ಎಲ್ಲೆಡೆ ಕೋವಿಡ್ ಆತಂಕ
Team Udayavani, Oct 15, 2020, 12:46 PM IST
ಮಹಾನಗರ : ಮಂಗಳೂರು ದಸರಾ ಅಂದರೆ ಅದು ಪ್ರತಿ ವರ್ಷವೂ ಭಕ್ತಿ-ಭಾವ, ಗ್ರಾಮೀಣ ಸೊಗಡಿನ ಕಲೆ-ಸಂಸ್ಕೃತಿಯನ್ನು ಅನಾವರಣಗೊಳಿಸುವ ಸಂಭ್ರಮ-ಸಡಗರದ ವೈಭವಪೂರ್ಣವಾದ ಹಬ್ಬ. ಆದರೆ ಕೊರೊನಾದಿಂದಾಗಿ ಈ ಬಾರಿ ದೇವಸ್ಥಾನಗಳಲ್ಲಿ ನಡೆಯುವ ನವರಾತ್ರಿ ಉತ್ಸವದಲ್ಲಿ ಪಾಲ್ಗೊಳ್ಳುವ, ಆಕರ್ಷಕ ದಸರಾ ಮೆರವಣಿಯನ್ನು ಕಣ್ತುಂಬಿಕೊಳ್ಳುವ ಅವಕಾಶದಿಂದ ಜನರು ವಂಚಿತರಾಗಿದ್ದಾರೆ.
ಅ. 17ರಿಂದ 27ರ ವರೆಗೆ ದಸರಾ ಉತ್ಸವ. ರಾಜ್ಯದಲ್ಲಿ ಮೈಸೂರು ಬಿಟ್ಟರೆ ಅತಿ ಸಂಭ್ರಮ, ಅದ್ದೂರಿಯಿಂದ ಆಚರಿ ಸಲ್ಪಡುತ್ತಿದ್ದ ದಸರಾ ಎಂದರೆ ಮಂಗಳೂರು ದಸರಾ. ಆದರೆ ಭಕ್ತಿಯೊಂದಿಗೆ ಜನರ ಭಾವನಾತ್ಮಕ ಪಾಲ್ಗೊಳ್ಳುವಿಕೆಯೂ ಆಗಿದ್ದ ಮಂಗಳೂರು ದಸರಾ ಈ ಬಾರಿ ಕೊರೊನಾ ಆತಂಕದೊಂದಿಗೆ ಸರಳವಾಗಿ ಆಚರಿಸಲ್ಪಡುತ್ತಿದೆ. ದಶದಿನಗಳ ಕಾಲ ಇಡೀ ಮಂಗಳೂರೇ ಭಕ್ತಿ ಸಂಭ್ರಮದಲ್ಲಿ ಮಿಂದೇಳುತ್ತಿದ್ದ ಆ ಕ್ಷಣ ಈ ಬಾರಿ ಕೇವಲ ಸಾಂಪ್ರದಾಯಿಕ ಆಚರಣೆಗಷ್ಟೇ ಸೀಮಿತವಾಗಿದೆ. ನವರಾತ್ರಿ ಆರಂಭಕ್ಕೆ ಮುನ್ನವೇ ಮನೆಮನೆಗೆ ಬರುತ್ತಿದ್ದ ಹುಲಿವೇಷಧಾರಿಗಳ ಕುಣಿತ ಈ ನವರಾತ್ರಿ ಯಲ್ಲಿ ಕೇವಲ ದೇಗುಲದ ಆವರಣದೊಳಗೆ ಮಾತ್ರ ಇರಲಿದೆ.
ಜಿಲ್ಲೆ, ಹೊರಜಿಲ್ಲೆಗಳ ಗ್ರಾಮೀಣ ಭಾಗದ ಕುಲ ಕಸುಬು, ವೃತ್ತಿಯನ್ನು ಬಿಂಬಿಸುವ ಹಲವಾರು ಆಕರ್ಷಣೆಗಳು ದಸರಾ ಉತ್ಸವದಲ್ಲಿ ಇರುತ್ತಿದ್ದವು. ಗ್ರಾಮ್ಯ ಭಾಗದ ಕಲೆ-ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ರಂಗು, ಆಹಾರ ಸಂಸ್ಕೃತಿ, ರಸ್ತೆಯುದ್ದಕ್ಕೂ ಸಾಲುಗಟ್ಟಿರುವ ಸಂತೆ ಹೀಗೆ ಹತ್ತಾರು ಆಕರ್ಷಣೆಗಳು ದಸರಾದ ಸೊಗಡನ್ನು ಸಾರಿ ಹೇಳುತ್ತಿದ್ದವು. ಮಂಗಳೂರು ದಸರಾವು ಜನ ರನ್ನು ಭಕ್ತಿಯೆಡೆಗೆ ಮಾತ್ರವಲ್ಲದೆ, ಭಾವನಾತ್ಮಕ ವಾಗಿಯೂ ಒಗ್ಗೂಡಿಸುವ, ಲಕ್ಷಾಂತರ ಮಂದಿ ಸೇರಿ ಸಂಭ್ರಮಿಸುವ ಹಬ್ಬವಾಗಿ ಕಳೆದ ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಈ ಬಾರಿ ದೇವರ ದರ್ಶನಕ್ಕೂ ಸಾಲು ಗಟ್ಟಿ ಸ್ಯಾನಿಟೈಸರ್ ಹಾಕಿ, ಮಾಸ್ಕ್ ಧರಿಸಿ ಹೋಗಬೇಕಾದ ಅನಿವಾರ್ಯತೆ. ಈ ಅನಿವಾರ್ಯತೆ ದಸರಾ ಸಂಭ್ರಮವನ್ನು ಕಸಿಯುವುದಂತೂ ಸತ್ಯ.
ಎಲ್ಲೆಡೆಯೂ ಸರಳ ದಸರಾ
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ 2004ರಿಂದ ಮಂಗಳೂರು ದಸರಾ ಹೆಸರಿನಲ್ಲಿ ಈ ಉತ್ಸವ ಅದ್ದೂರಿಯಾಗಿ ನಡೆಯುತ್ತದೆ. ಆದರೆ ಈ ಬಾರಿ ಸರಳ ಆಚರಣೆಗೇ ಒತ್ತು. ಕುದ್ರೋಳಿ ಹೊರತುಪಡಿಸಿದರೆ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ, ಹಳೆಕೋಟೆ ಶ್ರೀ ಮಾರಿಯಮ್ಮ ಮಹಿಷಮರ್ಧಿನಿ ದೇವಸ್ಥಾನ, ಶ್ರೀ ವೆಂಕಟರಮಣ ದೇವಸ್ಥಾನಗಳಲ್ಲಿ ದಸರಾ ಆಚರಣೆ ಮಹತ್ವದ್ದಾಗಿರುತ್ತದೆ. ಈ ದೇಗುಲಗಳಲ್ಲಿಯೂ ಈ ಬಾರಿ ಸರಳ ದಸರಾ ಆಚರಣೆಯಾಗಲಿದೆ.
ರಾತ್ರಿ-ಬೆಳಗು ಮರೆಸುವ ಮೆರವಣಿಗೆ ಇಲ್ಲ
ಮಂಗಳೂರು ದಸರಾದಲ್ಲಿ ಮೆರ ವಣಿಗೆಗೆ ಬಹಳ ಪ್ರಾಧಾನ್ಯವಿದೆ. ನವರಾತ್ರಿ ಕಳೆದು ವಿಜಯದಶಮಿಯ ರಾತ್ರಿ ಶುರುವಾಗುವ ಮೆರವಣಿಗೆಯಲ್ಲಿ ದೇವಿಯ ಮೂರ್ತಿಯನ್ನು ವಿಸರ್ಜನೆಗೆ ಕೊಂಡೊಯ್ಯುವ ಭಾವನಾತ್ಮಕ ಕ್ಷಣ. ಮೆರವಣಿಗೆಯೊಂದಿಗೆ ಹಲವಾರು ಟ್ಯಾಬ್ಲೋಗಳು ಸಾಗಿ ಬರುವಾಗ ವಯಸ್ಸಿನ ಭೇದವಿಲ್ಲದೆ ಎಲ್ಲರೂ ಹೆಜ್ಜೆ ಹಾಕುವ ಹೊತ್ತು. ಮಕ್ಕಳಿಗೆ, ಯುವಕರಿಗೆ ಇದೊಂದು ಅತ್ಯಂತ ಸಂಭ್ರಮದ ಕ್ಷಣ. ಈ ಬಾರಿ ನವದುರ್ಗೆಯರನ್ನು ಸಾಂಪ್ರದಾಯಿಕವಾಗಿ ಪ್ರತಿಷ್ಠಾಪಿಸಿ ದೇಗುಲದೊಳಗೆ ವಿಸರ್ಜನೆ ಮಾಡಲಾಗುತ್ತದೆ ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ.
ಮಂಗಳಾದೇವಿ ದೇಗುಲದಿಂದ ನೇರಪ್ರಸಾರ
ಮಂಗಳಾದೇವಿ ದೇಗುಲದ ಅಧಿಕೃತ ಫೇಸುºಕ್ ಪೇಜ್ನಲ್ಲಿ ಎಲ್ಲ ದಿನದ ಕಾರ್ಯಕ್ರಮಗಳು ಲೈವ್ ಇದ್ದು, ಜನ ದೇಗುಲಕ್ಕೆ ಕಡಿಮೆ ಸಂಖ್ಯೆಯಲ್ಲಿ ಆಗಮಿಸಿ, ಲೈವ್ ಕಾರ್ಯಕ್ರಮವನ್ನೇ ಹೆಚ್ಚು ನೋಡಬೇಕೆಂದು ಆಡಳಿತ ಮಂಡಳಿ ವಿನಂತಿ ಮಾಡಿದೆ.
ದಸರಾ ಗೊಂಬೆ ಪ್ರದರ್ಶನವಿಲ್ಲ
ಮಂಗಳೂರಿನಲ್ಲಿ ನೆಲೆಸಿರುವ ಹಳೆ ಮೈಸೂರು ನಿವಾಸಿಗಳು “ನಮ್ಮವರು’ ಸಂಘಟನೆಯ ಮೂಲಕ 11 ವರ್ಷಗಳಿಂದ ಶರವು ಶ್ರೀ ಮಹಾಗಣಪತಿ ದೇವಸ್ಥಾನ ಸಭಾಂಗಣದಲ್ಲಿ ನಡೆಸಿಕೊಂಡು ಬರುತ್ತಿದ್ದ ದಸರಾ ಗೊಂಬೆ ಪ್ರದರ್ಶನ ಮಂಗಳೂರು ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿತ್ತು. ಈ ಬಾರಿ ಇದಕ್ಕೂ ಕೊರೊನಾ ಅಡ್ಡಿಯಾಗಿದೆ. ಗೊಂಬೆ ಪ್ರದರ್ಶನ ಏರ್ಪಡಿಸುವುದಿಲ್ಲ ಎಂದು “ನಮ್ಮವರು’ ಸಂಚಾಲಕ ಗುರುರಾಜ್ ತಿಳಿಸಿದ್ದಾರೆ.
ಮಂಗಳೂರು ಗ್ರಾಮಾಂತರದ ಪ್ರದೇಶದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮತ್ತು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಗಳಲ್ಲಿ ಪ್ರತೀ ವರ್ಷದಂತೆ ಈ ವರ್ಷ ವಿಜೃಂಭಣೆಯ ನವರಾತ್ರಿ ಉತ್ಸವ ಆಚರಣೆ ಇರುವುದಿಲ್ಲ. ಸರಳ ಆಚರಣೆಗೆ ಕರೆ ನೀಡಲಾಗಿದೆ. ಕಟೀಲಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ನವರಾತ್ರಿ ಉತ್ಸವಕ್ಕೆ ಬಜಪೆಯಿಂದ ಸಾಗುವ ಹುಲಿವೇಷ ಮೆರವಣಿಗೆ ಪ್ರಸಿದ್ಧವಾಗಿದೆ.
ದಸರಾ ಸ್ವಾಗತಿಸುವ ಲೈಟಿಂಗ್ಸ್
ಪ್ರತಿ ವರ್ಷ ದಸರಾ ಆರಂಭಕ್ಕೆ ಒಂದು ವಾರಕ್ಕೆ ಮುಂಚಿತವಾಗಿಯೇ ಮಂಗಳೂರಿನ ಬೀದಿ ಬೀದಿಗಳಲ್ಲಿ ಕತ್ತಲು ಬೆಳಕಿನಾಟ ಶುರುವಾಗುತ್ತಿತ್ತು. ಆದರೆ ಈ ಬಾರಿ ಕೆಲವು ಬೀದಿಗಳಲ್ಲಷ್ಟೇ ಕಾಣಿಸಿಕೊಳ್ಳುತ್ತಿದೆ. ಸದ್ಯ ಕುದ್ರೋಳಿ ಕ್ಷೇತ್ರದಿಂದ ಲೇಡಿಹಿಲ್ ಸರ್ಕಲ್ವರೆಗೆ ಲೈಟಿಂಗ್ಸ್ ಅಳವಡಿಸಲಾಗಿದೆ.
ನಿಯಮಾವಳಿ ಪಾಲಿಸಬೇಕು
ದೇಗುಲದಲ್ಲಿ ನವರಾತ್ರಿಯ ಎಲ್ಲ ಪೂಜೆಗಳನ್ನು ಫೇಸುºಕ್ನಲ್ಲಿ ಲೈವ್ ಆಗಿ ತೋರಿಸಲಾಗುತ್ತದೆ. ಕೊರೊನಾ ದೇಶವನ್ನು ಬಿಟ್ಟು ಹೋಗಲಿ ಎಂಬ ಪ್ರಾರ್ಥನೆ ಎಲ್ಲರದ್ದಾಗಲಿ. ದೇಗುಲಕ್ಕೆ ಭಕ್ತರು ಆಗಮಿಸುವಾಗ ಎಲ್ಲ ರೀತಿಯ ನಿಯಮಾವಳಿಗಳನ್ನು ಪಾಲಿಸಲಾಗುತ್ತದೆ.
-ರಮಾನಾಥ ಹೆಗ್ಡೆ, ಆಡಳಿತ ಮೊಕ್ತೇಸರರು,ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ ಮಂಗಳೂರು
ಸ್ವಯಂ ಸೇವಕರ ನಿಯೋಜನೆ
ಈ ಬಾರಿಯ ಮಂಗಳೂರು ದಸರಾಕ್ಕೆ ಕೊರೊನಾದಿಂದ ಸರಳವಾಗಿಯೇ ಆಚರಿಸಲಾಗುತ್ತದೆ. ದೇಗುಲಕ್ಕೆ ಆಗಮಿ ಸಲು-ಹೊರಹೋಗಲು ಪ್ರತ್ಯೇಕ ದಾರಿ ಮಾಡಲಾಗುತ್ತದೆ. ಅಲ್ಲಲ್ಲಿ ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ. ಸ್ವಲ್ಪ ಸ್ವಲ್ಪವೇ ಜನರನ್ನು ದೇಗುಲದೊಳಕ್ಕೆ ಬಿಡುವಂತೆ ಸಾಕಷ್ಟು ಸ್ವಯಂ ಸೇವಕರನ್ನು ನಿಯೋಜಿಸಲಾಗುತ್ತದೆ. ಕೊರೊನಾ ನಿಯಮಗಳನುಸಾರ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸಿ ಬರುವುದು ಕಡ್ಡಾಯವಾಗಿದೆ.
-ಎಚ್. ಎಸ್. ಸಾಯಿರಾಂ, ಅಧ್ಯಕ್ಷರು, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ
Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ