ಕೇರಳ ನಂತರ ಕರ್ನಾಟಕ ತುಸು ಸಮಾಧಾನ
Team Udayavani, May 5, 2020, 11:35 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಕೋವಿಡ್ ನಿಗ್ರಹದಲ್ಲಿ ಕರ್ನಾಟಕ ಕೇರಳದ ನಂತರದ ಸ್ಥಾನ ಪಡೆಯುವಲ್ಲಿ ದಾಪುಗಾಲಿಟ್ಟಿದೆ. ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳು ಮತ್ತು ಗುಣಮುಖರಾದವರ ಸಂಖ್ಯಾನುಪಾತ ಒಂದೇ ಮಟ್ಟಕ್ಕೆ ಭಾನುವಾರ ಬಂದಿತ್ತು. ಸೋಮವಾರ ಆ ಆನುಪಾತದಲ್ಲಿ ಗುಣಮುಖರ ಸಂಖ್ಯೆ ಹೆಚ್ಚಳವಾಗಿರುವುದು ಸಮಾಧಾನಕರ ಅಂಶವಾಗಿದೆ.
ಕೇರಳದಲ್ಲಿ 500 ಮಂದಿ ಸೋಂಕಿತರ ಪೈಕಿ 462 ಮಂದಿ ಗುಣಮುಖರಾಗಿದ್ದಾರೆ. ಸದ್ಯಕ್ಕೆ ಕರ್ನಾಟಕದಲ್ಲಿ 651 ಸೋಂಕಿತರ ಪೈಕಿ 321 ಮಂದಿ ಗುಣಮುಖರಾಗಿರುವುದು
ಆಶಾದಾಯಕ ಬೆಳವಣಿಗೆಯಾಗಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್ ಸೇರಿದಂತೆ ಹಲವೆಡೆ ಈ ಅನುಪಾತ ಇನ್ನೂ ಸೃಷ್ಟಿಯಾಗಿಲ್ಲ. ಆರೋಗ್ಯ ಇಲಾಖೆ ಮಾಹಿತಿಯಂತೆ ರಾಜ್ಯದಲ್ಲಿ ಸೋಮವಾರದ ಅಂತ್ಯಕ್ಕೆ ಆಸ್ಪತ್ರೆಗಳಲ್ಲಿ 302 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ವಾರ ಸರಾಸರಿ ಪ್ರತಿದಿನ 14 ರಿಂದ 16 ಮಂದಿ ಗುಣಮುಖರಾಗಿದ್ದಾರೆ. ಒಟ್ಟಾರೆ ಸೋಂಕಿತ ಪ್ರಕರಣಗಳಾದ 651ರ ಪೈಕಿ ಅರ್ಧದಷ್ಟು ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಈಗ ರಾಜ್ಯವಾರು ಕೋವಿಡ್ ಪ್ರಕರಣ ಪಟ್ಟಿಯಲ್ಲಿ ಕರ್ನಾಟಕ 13ನೇ ಸ್ಥಾನದಲ್ಲಿದೆ.
ಸೋಂಕಿನಿಂದ ಸಾವಿಗೀಡಾದ ಪ್ರಕರಣಗಳ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದೆ. ಅಲ್ಲದೇ ಕೇರಳ ಹೊರತು ಪಡಿಸಿದರೆ ಕರ್ನಾಟಕದಲ್ಲಿಯೇ ಗುಣಮುಖದ ದರ ಉತ್ತಮವಾಗಿದೆ. ಅತೀ ಹೆಚ್ಚು ಸೋಂಕಿತರಿದ್ದ ಬೆಂಗಳೂರು ಹಾಗೂ ಮೈಸೂರು ಜಿಲ್ಲೆಗಳಲ್ಲಿ ಸೋಂಕಿತರ ಗುಣಮುಖ ಪ್ರಮಾಣ ಉತ್ತವಾಗಿದೆ. ಅದರಲ್ಲೂ ಮೈಸೂರಿನಲ್ಲಿ ಸೋಂಕಿತರಾಗಿದ್ದ 88 ಮಂದಿಯಲ್ಲಿ 77 ಮಂದಿ ಚೇತರಿಸಿಕೊಂಡಿದ್ದರೆ 11 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದಾರೆ. ಬೆಂಗಳೂರಿನಲ್ಲಿ 150 ಮಂದಿ ಸೋಂಕಿತರ ಪೈಕಿ ಅರ್ಧದಷ್ಟು ಮಂದಿ ಗುಣಮುಖರಾಗಿದ್ದಾರೆ. ಉಳಿದಂತೆ ಉತ್ತರ
ಕನ್ನಡ, ಬೆಂಗಳೂರು ಗ್ರಾಮಾಂತರ, ಉಡುಪಿ, ಕೊಡಗಿನಲ್ಲಿ ಸೋಂಕಿ ತರೆಲ್ಲಾ ಚೇತರಿಸಿಕೊಂಡಿದ್ದಾರೆ.
ಕಲಬುರಗಿ, ಬಾಗಲಕೋಟೆ, ವಿಜಯಪುರ, ಬೀದರ್ನಲ್ಲಿ ಸೋಂಕಿತರ ಪೈಕಿ ಅರ್ಧದಷ್ಟು ಮಂದಿ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಸೋಮವಾರ 28 ಮಂದಿ ಗುಣಮುಖರಾಗಿದ್ದಾರೆ.
ಜಯಪ್ರಕಾಶ್ ಬಿರಾದಾರ್