ರಣಜಿ ಕೂಟಕ್ಕೂ ಕೋವಿಡ್ ಕಾಟ; ಅಭ್ಯಾಸ ಪಂದ್ಯ ರದ್ದು
Team Udayavani, Jan 4, 2022, 5:00 AM IST
ಕೋಲ್ಕತಾ: ಕ್ರಿಕೆಟ್ ಆಸ್ಟ್ರೇಲಿಯದ ಬಳಿಕ ಇದೀಗ ಭಾರತೀಯ ಕ್ರಿಕೆಟ್ಗೂ ಕೊರೊನಾ ಕಾಲಿಟ್ಟಿದೆ. ಬಂಗಾಲ ರಣಜಿ ತಂಡದ 6 ಆಟಗಾರರು ಮತ್ತು ಓರ್ವ ಸಹಾಯಕ ಕೋಚ್ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಏಕಾಏಕಿ ಆಟಗಾರರಲ್ಲಿ ಕೊರೊನಾ ಸೋಂಕು ಕಂಡುಬಂದ ಹಿನ್ನೆಲೆ ಬಿಸಿಸಿಐ ದೇಶಿ ಕ್ರಿಕೆಟ್ ಪಂದ್ಯಾವಳಿಯ ಆರಂಭಕ್ಕೂ ಮುನ್ನ ತುರ್ತು ಸಭೆ ನಡೆಸುವ ಸಾಧ್ಯತೆ ಇದೆ. ಪ್ರಸ್ತುತ ಸಾಂಕ್ರಾಮಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬಂಗಾಲ ಕ್ರಿಕೆಟ್ ಮಂಡಳಿ ಸುರಕ್ಷತಾ ಕ್ರಮವಾಗಿ ರಾಜ್ಯದ ಎಲ್ಲ ಕ್ರಿಕೆಟಿಗರಿಗೆ ಆರ್ಟಿಪಿಸಿಆರ್ ಪರೀಕ್ಷೆ ನಡೆಸಿದೆ.
ಮೂಲಗಳ ಪ್ರಕಾರ ಸುದೀಪ್ ಚಟರ್ಜಿ, ಅನುಸ್ತೂಪ್ ಮಜುಮಾªರ್, ಖಾಜಿ ಜುನೈದ್ ಸೈಫಿ, ಗೀತ್ ಪುರಿ, ಪ್ರದೀಪ್ತ ಪ್ರಮಾಣಿಕ್, ಸುರ್ಜೀತ್ ಯಾದವ್ಗೆ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಅವರ ಜತೆಗಿದ್ದ ಸಹಾಯಕ ಕೋಚ್ ಸೌರಶಿಷ್ ಲಾಹಿರಿ ಕೂಡ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ.
ಇವರೆಲ್ಲ ರವಿವಾರ ಸಾಲ್ಟಲೇಕ್ನಲ್ಲಿರುವ ಜಾದವ್ಪುರ ವಿಶ್ವವಿದ್ಯಾಲಯದಲ್ಲಿ ಆಡಿದ್ದ ಪಂದ್ಯದಲ್ಲಿ ಭಾಗಿಯಾಗಿದ್ದರು. ಆದರೆ ಈ ಪಂದ್ಯಕ್ಕೆ ಸಂಬಂಧಿಸಿದಂತೆ ಬಂಗಾಲ ಕ್ರಿಕೆಟ್ ಮಂಡಳಿ ಯಾವುದೇ ಹೇಳಿಕೆ ನೀಡಿಲ್ಲ.
ಇದನ್ನೂ ಓದಿ:ಇನ್ನೂರರ ಗಡಿಯಲ್ಲಿ ಆಟ ಮುಗಿಸಿದ ಭಾರತ; ವಾಂಡರರ್ನಲ್ಲೂ ವೇಗಿಗಳ ಮೇಲುಗೈ
ಅಭ್ಯಾಸ ಪಂದ್ಯ ರದ್ದು
ಕೊರೊನಾ ಪ್ರಕರಣದ ಬಳಿಕ ಬಂಗಾಲ-ಮುಂಬಯಿ ತಂಡಗಳ ನಡುವಿನ ಅಭ್ಯಾಸ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಎರಡನೇ ಅಭ್ಯಾಸ ಪಂದ್ಯದಲ್ಲಿ ಬಂಗಾಲ ತಂಡ ಪಾಲ್ಗೊಳ್ಳುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಜತೆಗೆ ಬಂಗಾಲ ಕ್ರಿಕೆಟ್ ಮಂಡಳಿ ಎಲ್ಲ ಸ್ಥಳೀಯ ಪಂದ್ಯಾವಳಿಗಳನ್ನು ನಿಲ್ಲಿಸಲು ನಿರ್ಧರಿಸಿದೆ. ಕೊರೋನಾ ಪರಿಸ್ಥಿತಿ ಬಗ್ಗೆ ಚರ್ಚಿಸಲು ಅಪೆಕ್ಸ್ ಕೌನ್ಸಿಲ್ ತುರ್ತು ಸಭೆ ಕರೆದಿದೆ.
ಐಲೀಗ್ 6 ವಾರ ಮುಂದೂಡಿಕೆ
ಕೋಲ್ಕತಾ: ಕೊರೊನಾ ಹೊಡೆತಕ್ಕೆ ಭಾರತದ ಪ್ರತಿಷ್ಠಿತ ಫುಟ್ಬಾಲ್ ಕೂಟಗಳಲ್ಲಿ ಒಂದಾದ ಐಲೀಗ್ 6 ವಾರಗಳ ಕಾಲ ಮುಂದೂಡಿಕೆಯಾಗಿದೆ. ಐಲೀಗ್ ಸಂಪೂರ್ಣವಾಗಿ ಜೈವಿಕ ಸುರûಾ ವಲಯದಲ್ಲಿ ನಡೆಯುತ್ತಿದೆ. ಹಾಗಿದ್ದರೂ ವಿವಿಧ ತಂಡಗಳ 45 ಮಂದಿಗೆ ಕೊರೊನಾ ಬಂದಿರುವುದರಿಂದ ಕೂಟವನ್ನು 6 ವಾರಗಳ ಕಾಲ ಮುಂದೂಡಲಾಗಿದೆ.