2ನೇ ಅಲೆ ಹೋಗಿಲ್ಲ , ನಿರ್ಬಂಧ ಸಡಿಲಿಸುವಾಗ ಇರಲಿ ಎಚ್ಚರ : ರಾಜ್ಯ ಸರಕಾರಕ್ಕೆ ಕೇಂದ್ರ ಸೂಚನೆ
Team Udayavani, Jul 3, 2021, 7:25 AM IST
ಹೊಸದಿಲ್ಲಿ : ಕೊರೊನಾ 2ನೇ ಅಲೆ ಇನ್ನೂ ಮಾಯವಾಗಿಲ್ಲ. ಹೀಗಾಗಿ ನಿರ್ಬಂಧ ಸಡಿಲಿಸುವಾಗ ಎಚ್ಚರ ಇರಲಿ ಎಂದು ಕೇಂದ್ರ ಸರಕಾರವು ಎಲ್ಲ ರಾಜ್ಯ ಸರಕಾರಗಳಿಗೆ ಸೂಚನೆ ನೀಡಿದೆ.
ಇನ್ನೂ 71 ಜಿಲ್ಲೆಗಳಲ್ಲಿ ಶೇ. 10ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.
ಹೀಗಾಗಿ ರಾಜ್ಯ ಸರಕಾರಗಳು ಪ್ರಕರಣಗಳು ಹೆಚ್ಚಿರುವ ಜಿಲ್ಲೆಗಳಲ್ಲಿ ಜಾಗ್ರತೆ ವಹಿಸಬೇಕು ಎಂದಿದೆ.
6 ರಾಜ್ಯಗಳಿಗೆ ಕೇಂದ್ರದ ತಂಡ
ಕೊರೊನಾ ಹೆಚ್ಚಿರುವ ಕೇರಳ ಸಹಿತ ಆರು ರಾಜ್ಯಗಳಿಗೆ ಕೇಂದ್ರ ಸರಕಾರ ತನ್ನ ತಜ್ಞರ ತಂಡಗಳನ್ನು ಕಳುಹಿಸಿದೆ. ಇಬ್ಬರು ತಜ್ಞ ವೈದ್ಯರು ಇರುವ ಈ ತಂಡಗಳು ಆಯಾ ರಾಜ್ಯದ ಆರೋಗ್ಯ ಇಲಾಖೆಯ ಅಧಿಕಾರಿಗಳ ಜತೆ ಮಾತುಕತೆ ನಡೆಸಲಿವೆ.
ಕೇಂದ್ರದ ನಿಯಮಾವಳಿ
– ವಾರದ ಸರಾಸರಿಯಲ್ಲಿ ಹೆಚ್ಚು ಪ್ರಕರಣಗಳಿರುವ ಜಿಲ್ಲೆಗಳನ್ನು ಗುರುತಿಸಬೇಕು
– ಹಾಸಿಗೆಯ ಲಭ್ಯತೆ ಮತ್ತು ಆಸ್ಪತ್ರೆಗಳ ಮೂಲಸೌಕರ್ಯದ ಬಗ್ಗೆ ಗಮನ ಇರಲಿ
– ಯಾವ ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣಗಳಿವೆ, ಎಲ್ಲಿ ಹಾಸಿಗೆಗಳು ಭರ್ತಿಯಾಗಿವೆ ಎಂಬುದರ ಮೇಲೆ ಗಮನ ಹರಿಸಬೇಕು.
– 14 ದಿನಗಳ ವರೆಗೆ ನಿರ್ಬಂಧಗಳು ಮುಂದುವರಿಯಬೇಕು
– ಹೆಚ್ಚು ಪ್ರಕರಣ ಇರುವ ಜಿಲ್ಲೆಗಳಿಗೆ ಹಿರಿಯ ಅಧಿಕಾರಿಗಳನ್ನು ನೋಡಲ್ ಆಗಿ ನೇಮಿಸಬೇಕು
– ಪರೀಕ್ಷೆ-ಪತ್ತೆ- ಚಿಕಿತ್ಸೆ- ಲಸಿಕೆ ನೀಡುವ ಪ್ರಮಾಣ ಹೆಚ್ಚಳ ಮಾಡಬೇಕು.
ಗರ್ಭಿಣಿಯರಿಗೂ ಇನ್ನು ಲಸಿಕೆ
ಇನ್ನು ಗರ್ಭಿಣಿಯರು ಕೂಡ ಕೋವಿನ್ ಮೂಲಕ ನೋಂದಣಿ ಮಾಡಿಸಿಕೊಂಡು ಲಸಿಕೆ ಪಡೆಯಬಹುದಾಗಿದೆ. ಜತೆಗೆ ನೇರವಾಗಿ ಲಸಿಕೆ ಕೇಂದ್ರಕ್ಕೂ ತೆರಳಿ ಪಡೆಯಬಹುದು. ಶುಕ್ರವಾರ ಈ ಸಂಬಂಧ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.
ಇತ್ತೀಚೆಗಷ್ಟೇ ಕೇಂದ್ರ ಸರಕಾರ ಗರ್ಭಿಣಿಯರಿಗೆ ಲಸಿಕೆ ನೀಡುವ ಸಂಬಂಧ ಮಾರ್ಗಸೂಚಿ ಹೊರಡಿಸಿತ್ತು. ಗರ್ಭಿಣಿಯರೂ ಲಸಿಕೆ ಪಡೆಯಬಹುದು ಎಂದಿತ್ತು.