“ಜೂನ್ ದ್ವಿತೀಯಾರ್ಧದಿಂದ ಕ್ರಿಕೆಟ್ ಶಿಬಿರ’
Team Udayavani, Jun 3, 2020, 6:35 AM IST
ಹೊಸದಿಲ್ಲಿ: ಇನ್ನು ಎರಡು ವಾರಗಳ ಬಳಿಕ, ಅಂದರೆ ಜೂನ್ ದ್ವಿತೀಯಾರ್ಧದಲ್ಲಿ ರಾಷ್ಟ್ರೀಯ ಕ್ರಿಕೆಟ್ ಶಿಬಿರಗಳನ್ನು ಆರಂಭಿಸಲು ಕಾಲ ಪಕ್ವವಾದೀತು ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ ತಂಡ ತನ್ನ ಕೊನೆಯ ಪೂರ್ಣ ಪ್ರಮಾಣದ ಸರಣಿಯನ್ನು ನ್ಯೂಜಿಲ್ಯಾಂಡ್ ಪ್ರವಾಸದ ವೇಳೆ ಆಡಿತ್ತು. ಅನಂತರದ ಪ್ರವಾಸಿ ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿ ಕೋವಿಡ್-19 ದಿಂದಾಗಿ ಅರ್ಧದಲ್ಲೇ ಕೊನೆಗೊಂಡಿತು. ಬಹು ನಿರೀಕ್ಷೆಯ ಐಪಿಎಲ್ ಕೂಡ ಮುಂದೂಡಲ್ಪಟ್ಟಿತು. ಸದ್ಯ ಲಾಕ್ಡೌನ್ನಿಂದಾಗಿ ಕ್ರಿಕೆಟಿಗರೆಲ್ಲ ಮನೆಯಲ್ಲೇ ಉಳಿದುಕೊಂಡಿದ್ದಾರೆ.
ಈಗಾಗಲೇ ಬೇರೆ ಬೇರೆ ದೇಶಗಳ ಕ್ರಿಕೆಟಿಗರು ಹೊರಾಂಗಣ ಅಭ್ಯಾಸ ಆರಂಭಿಸಿದ ಕಾರಣ ಬಿಸಿಸಿಐ ಕೂಡ ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದೆ ಎಂದು ಅರುಣ್ ಧುಮಾಲ್ ಹೇಳಿದರು. ಮಂಡಳಿಯ ಗುತ್ತಿಗೆ ವ್ಯಾಪ್ತಿಯ ಆಟಗಾರರಿಗೆ ಅಭ್ಯಾಸ ಶಿಬಿರವನ್ನು ಆಯೋಜಿಸುವುದು ಬಿಸಿಸಿಐನ ಮೊದಲ ಗುರಿಯಾಗಿದೆ. ಎನ್ಸಿಎ ಮತ್ತು ಇತರ ಕೆಲವೇ ನಿಗದಿತ ಕ್ರಿಕೆಟ್ ಕೇಂದ್ರಗಳನ್ನು ಗುರುತಿಸಿ ಅಲ್ಲಿ ಶಿಬಿರಗಳನ್ನು ಆಯೋಜಿಸುವುದು ಬಿಸಿಸಿಐ ಮುಂದಿರುವ ಯೋಜನೆ ಯಾಗಿದೆ ಎಂದು ಅವರು ಹೇಳಿದರು.